ಸಾರಾಂಶ
ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ತಾವು ಕಲಿತ ಅನುಭವದ ಜ್ಞಾನವನ್ನು ಮಕ್ಕಳಿಗೆ ಕಲಿಸಿ ಮಕ್ಕಳ ಜ್ಞಾನ ಮತ್ತು ಜವಾಬ್ದಾರಿಗಳನ್ನು ತಿಳಿಸುವಂತವರು ಶಿಕ್ಷಕರು.
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಸಮಾಜಮುಖಿಯಾಗಿ, ನಿಸ್ವಾರ್ಥದಿಂದ ಕೆಲಸ ನಿರ್ವಹಿಸುತ್ತಾರೋ ಅವರನ್ನು ಸಮಾಜ ಖಂಡಿತವಾಗಿ ಗೌರವಿಸುತ್ತದೆ ಮತ್ತು ಋಣಿಯಾಗಿರುತ್ತದೆ ಎಂದು ಬಿಇಒ ಶಿವಮೂರ್ತಿ ಹೇಳಿದರು.ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಸಿ.ಬಿ. ಹುಂಡಿ ಕ್ಲಸ್ಟರ್ ವ್ಯಾಪ್ತಿಯ ಚಂದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯಶಿಕ್ಷಕ ಎಂ. ಕೊಂಗಯ್ಯ ಅವರ ನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ತಾವು ಕಲಿತ ಅನುಭವದ ಜ್ಞಾನವನ್ನು ಮಕ್ಕಳಿಗೆ ಕಲಿಸಿ ಮಕ್ಕಳ ಜ್ಞಾನ ಮತ್ತು ಜವಾಬ್ದಾರಿಗಳನ್ನು ತಿಳಿಸುವಂತವರು ಶಿಕ್ಷಕರು. ಶಿಕ್ಷಕ ವೃತ್ತಿ ಸಮಾಜದ ಎಲ್ಲಾ ಹಂತದ ಅಧಿಕಾರಿಗಳನ್ನು ಸೃಷ್ಟಿಸುವಂತಹ ಅವಕಾಶವಿರುವ ವೃತ್ತಿ. ಮುಖ್ಯ ಶಿಕ್ಷಕರ ಹುದ್ದೆ ಎಂದರೇ ಕೇವಲ ಅದೊಂದು ಪದವಿ ಮಾತ್ರವಲ್ಲ, ಶಾಲೆಯ ಶಿಕ್ಷಕ ವರ್ಗ, ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಗ್ರಾಪಂ ಸದಸ್ಯರು, ಗ್ರಾಮಸ್ಥರು, ಹಿರಿಯ ಅಧಿಕಾರಿಗಳು, ಸರ್ಕಾರದ ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಬೇಕಾದ ಜವಾಬ್ದಾರಿಯುತ ಸ್ಥಾನ ಎಂದರು.ಒಬ್ಬ ಮುಖ್ಯ ಶಿಕ್ಷಕ ಯಾವ ಕಪ್ಪು ಚುಕ್ಕೆ ಇಲ್ಲದೆ, ಆರೋಪಗಳಿಲ್ಲದೆ, ದೂರುಗಳಿಲ್ಲದೆ ಯಶಸ್ವಿಯಾಗಿ ಮುನ್ನೆಡೆಯುತ್ತಿದ್ದಾರೆ ಎಂದರೆ ಅದಕ್ಕಿಂತ ಗೌರವ ಮತ್ತು ಸಾರ್ಥಕ ಸೇವೆ ಮತ್ತೊಂದಿಲ್ಲ. ಎಂ. ಕೊಂಗಯ್ಯ ಅವರು ಕೂಡ ಇದುವರೆಗೂ ಯಾವ ಆರೋಪ ಇಲ್ಲದೆ ಎಲ್ಲರ ಜೊತೆ ಅತ್ಯಂತ ವಿಶ್ವಾಸಾರ್ಹರಾಗಿ ತಮ್ಮ ವೃತ್ತಿ ಜೀವನವನ್ನು ಮುಗಿಸಿ ನಿವೃತ್ತಿಯ ದಡ ಸೇರಿರುವುದು ಅವರ ನಿಸ್ವಾರ್ಥ ಸೇವೆ ಮತ್ತು ದಕ್ಷತೆ, ಪ್ರಾಮಾಣಿಕತೆಯನ್ನು ಸೂಚಿಸುತ್ತದೆ ಎಂದರು.ಯಾವ ಶಿಕ್ಷಕ ಅವರ ವೃತ್ತಿ ಬದುಕಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ, ಪಠ್ಯೇತರ ಚಟುವಟಿಕೆ, ಕ್ರೀಡಾ, ಪ್ರತಿಭಾ ಕಾರಂಜಿ, ಪರೀಕ್ಷೆಗಳಲ್ಲಿ ಉತ್ತಮ ಪ್ರಗತಿಯತ್ತ ಕೊಂಡೊಯ್ಯುವ ಕೆಲಸ ಮಾಡಿದ್ದಾರೆ. ಚುನಾವಣೆ ಕರ್ತವ್ಯ ಮತ್ತು ವೈಯಕ್ತಿಕ ಕ್ರೀಡಾ ಸ್ಪರ್ಧೆಗಳಲ್ಲೂ ಹತ್ತು ಹಲವು ಪ್ರಶಸ್ತಿ ಪಡೆದು ಇತರರಿಗೆ ಮಾದರಿ ಆಗಿದ್ದಾರೆ. ಅವರು ಎಲ್ಲಾ ಸಂಘ ಸಂಸ್ಥೆಗಳು,ಅಕ್ಕಪಕ್ಕದ ಶಾಲೆ, ಸಿಬ್ಬಂದಿ, ಹಿರಿಯ ಅಧಿಕಾರಿಗಳು, ಗ್ರಾಮಸ್ಥರ ಜೊತೆ ಉತ್ತಮ ಭಾಂದವ್ಯ ಹೊಂದಿರುವ ಕಾರಣದಿಂದಲೇ ಇಷ್ಟು ಜನ ನೆರೆದಿರುವುದಕ್ಕೆ ಸಾಕ್ಷಿ ಎಂದು ಶ್ಲಾಘಿಸಿದರು.ಬೀಳ್ಕೋಡುಗೆ ಸಮಾರಂಭದಲ್ಲಿ ಗ್ರಾಮಸ್ಥರು, ಮಕ್ಕಳು, ಹಳೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಪುಷ್ಪಮಳೆಗೈದು ಬೀಳ್ಕೋಟ್ಟರು.ಇಸಿಒ ಜಗದೀಶ್, ಬಿ.ಆರ್.ಸಿ ಮಹದೇವಸ್ವಾಮಿ, ಸಿ.ಆರ್.ಪಿ ಚೆಲುವರಾಜು, ನೌಕರರ ಸಂಘದ ಅಧ್ಯಕ್ಷ ಶಿವಶಂಕರಮೂರ್ತಿ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಎಸ್. ಸುಬ್ಬಣ್ಣ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಣ್ಣ, ಸಹ ಕಾರ್ಯದರ್ಶಿ ಕೆ.ವಿ. ಚಿತ್ರ ವಿಶಾಲಾಕ್ಷಿ, ಸಿದ್ದಮಲ್ಲಪ್ಪ, ಶಾಲೆಯ ಶಿಕ್ಷಕರಾದ ಸೂರ್ಯ ಕುಮಾರ್, ಜಯರಾಮ್, ಎಸ್. ಜ್ಯೋತಿ. ಶಾಂಭವಿ, ಗೀತಾ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಾದಲಾಂಬಿಕೆ, ಮುಖ್ಯ ಶಿಕ್ಷಕರಾದ ಧರ್ಮೆಂದ್ರ ಪ್ರಸಾದ್, ಗ್ರೀಟಾ, ಚಂದ್ರಕುಮಾರಿ, ಶಾಂತರಾಜು, ಅಡುಗೆ ಸಿಬ್ಬಂದಿ ಮಹದೇವಮ್ಮ, ಹೇಮಾ, ಕೊಂಗಯ್ಯ ಅವರ ಪತ್ನಿ ಜಯಲಕ್ಷ್ಮೀ, ಪುತ್ರರಾದ ಕೇಶವ್ ರಾಜ್, ಕಿಶೋರ್ ಗೌಡ, ಸೊಸೆ ನಿವೇದಿತಾ ಇದ್ದರು.