ನಿವೃತ್ತಿ ವೃತ್ತಿಗೇ ಹೊರತು ಸೇವೆಗಲ್ಲ: ಪುಟ್ಟಣ್ಣ

| Published : Jul 01 2024, 01:49 AM IST

ಸಾರಾಂಶ

ಚನ್ನಪಟ್ಟಣ: ವೃತ್ತಿ ಜೀವನದಲ್ಲಿ ನಿವೃತ್ತಿ ಎಲ್ಲರಿಗೂ ಸಾಮಾನ್ಯ. ಆದರೆ, ಸೇವೆಗೆ ಎಂದೂ ನಿವೃತ್ತಿ ಇರುವುದಿಲ್ಲ. ಹಲವು ವರ್ಷಗಳಿಂದ ಸಾರ್ವಜನಿಕ ವಿದ್ಯಾಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುವ ಸಿ.ಬಿ.ಕುಮಾರ್ ನಿವೃತ್ತಿಯಾಗುತ್ತಿದ್ದಾರೆ. ಆದರೆ ಅವರ ಸೇವೆ ಮುಂದುವರಿಯಲಿ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹಾರೈಸಿದರು.

ಚನ್ನಪಟ್ಟಣ: ವೃತ್ತಿ ಜೀವನದಲ್ಲಿ ನಿವೃತ್ತಿ ಎಲ್ಲರಿಗೂ ಸಾಮಾನ್ಯ. ಆದರೆ, ಸೇವೆಗೆ ಎಂದೂ ನಿವೃತ್ತಿ ಇರುವುದಿಲ್ಲ. ಹಲವು ವರ್ಷಗಳಿಂದ ಸಾರ್ವಜನಿಕ ವಿದ್ಯಾಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುವ ಸಿ.ಬಿ.ಕುಮಾರ್ ನಿವೃತ್ತಿಯಾಗುತ್ತಿದ್ದಾರೆ. ಆದರೆ ಅವರ ಸೇವೆ ಮುಂದುವರಿಯಲಿ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹಾರೈಸಿದರು.

ನಗರದ ಸಾರ್ವಜನಿಕ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ಸಿ.ಬಿ.ಕುಮಾರ್‌ ಅವರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವೃತ್ತಿ ಜೀವನದಲ್ಲಿ ನಿವೃತ್ತಿ ಸಾಮಾನ್ಯ. ಇದೊಂದು ಸಹಜ ಪ್ರಕ್ರಿಯೆ. ಸಿ.ಬಿ.ಕುಮಾರ್ ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.

ನಾನು ಸಿಂಡಿಕೇಟ್ ಸದಸ್ಯನಾಗಿದ್ದ ವೇಳೆಯಿಂದ ಇಲ್ಲಿಯವರೆಗೂ ಸಿ.ಬಿ.ಕುಮಾರ್ ಉತ್ತಮ ಒಡನಾಟ ಹೊಂದಿದ್ದಾರೆ. ಶಿಕ್ಷಕರಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ನನ್ನ ಗಮನಕ್ಕೆ ತರುವವರಲ್ಲಿ ಇವರು ಕೂಡ ಒಬ್ಬರು. ವೃತ್ತಿಯಲ್ಲಿ ದೈಹಿಕ ಶಿಕ್ಷಕರಾಗಿದ್ದರು ಸಹ, ಉಪ ಪ್ರಾಂಶುಪಾಲರಾಗಿ ಶಾಲೆಯನ್ನು ನಡೆಸಿರುವ ಕೀರ್ತಿ ಕುಮಾರ್ ಅವರದು. ಹಲವಾರು ವರ್ಷಗಳಿಂದ ನನ್ನ ಒಡನಾಡಿಯಾಗಿರುವ ಅವರ ಬಗ್ಗೆ ಅಪಾರವಾದ ಪ್ರೀತಿ ಹಾಗೂ ವಿಶ್ವಾಸವಿದೆ. ಅವರು ಕೆಲಸದಿಂದ ನಿವೃತ್ತಿಯಾಗುತ್ತಿರಬಹುದಷ್ಟೇ. ಆದರೆ, ನಮ್ಮ ವಿಶ್ವಾಸ ಹಾಗೂ ಬಾಂಧವ್ಯಕ್ಕೆ ಎಂದಿಗೂ ನಿವೃತ್ತಿ ಇಲ್ಲ. ನಿವೃತ್ತಿ ಜೀವನ ಸಮಾಜ ಸೇವೆ ಮಾಡಲು ಸಿಗುವ ಅಮೂಲ್ಯ ಅವಕಾಶ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸಿ.ಬಿ.ಕುಮಾರ್ ಸಮಾಜಕ್ಕೆ ಸೇವೆ ಸಲ್ಲಿಸಲಿ ಎಂದರು.

ಸಂಸ್ಥೆಯ ಕಾರ್ಯದರ್ಶಿ ಸಿ.ಚನ್ನಪ್ಪ ಮಾತನಾಡಿ, ಸಂಸ್ಥೆಯಲ್ಲಿ ದೈಹಿಕ ಶಿಕ್ಷಕರಾಗಿ ಕರ್ತವ್ಯ ಆರಂಭ ಮಾಡಿ ಉಪಪ್ರಾಂಶುಪಾಲರಾಗಿ ಸೇವೆಯಿಂದ ನಿವೃತ್ತರಾಗುತ್ತಿರುವ ಸಿ.ಬಿ.ಕುಮಾರ್ ಅವರ ನಿವೃತ್ತ ಜೀವನ ಸುಖಕರವಾಗಿರಲಿ. ನಿವೃತ್ತಿಯ ನಂತರವೂ ಸಂಸ್ಥೆಯೊಂದಿಗೆ ಅವರ ಒಡನಾಟ ಹಾಗೂ ಮಾರ್ಗದರ್ಶನ ಇರಬೇಕು ಎಂದು ತಿಳಿಸಿದರು.

ನಿವೃತ್ತ ಉಪ ಪ್ರಾಂಶುಪಾಲ ಸಿ.ಬಿ.ಕುಮಾರ್ ಮಾತನಾಡಿ, ಇಷ್ಟು ವರ್ಷಗಳ ಕಾಲ ಸಹಕಾರ ನೀಡಿದ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಹೋದ್ಯೋಗಿಗಳಿಗೆ ಚಿರಋಣಿ. ಈ ಮಟ್ಟಿಗೆ ಬರಲು ನನ್ನ ತಂದೆ ತಾಯಿ ಹಾಗೂ ಗುರುಗಳ ಆಶೀರ್ವಾದವೇ ಕಾರಣ. ಅದರಲ್ಲೂ ಶಿಕ್ಷಣಪ್ರೇಮಿ ಬಿ.ಟಿ.ಜಯಮುದ್ದಪ್ಪನವರು ನನ್ನ ಬದುಕಿನ ಮಾರ್ಗದರ್ಶಕರು. ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿಯಾಗುತ್ತಿರುವುದು ಒಂದೆಡೆ ಸಂತಷವಾದರೆ, ಮತ್ತೊಂದೆಡೆ ಹೃದಯ ಭಾರ ಎನಿಸುತ್ತಿದೆ ಎಂದು ಭಾವುಕರಾದರು.

ಸಂಸ್ಥೆಯ ಮೂರು ಕೇಂದ್ರಗಳ ಶಿಕ್ಷಕರು, ಸಿಬ್ಬಂದಿ, ಕುಟುಂಬಸ್ಥರು, ಹಿರಿಯ ವಿದ್ಯಾರ್ಥಿಗಳು, ಸರ್ಕಾರಿ ನೌಕರರ ಸಂಘ, ದೈಹಿಕ ಶಿಕ್ಷಕರ ಸಂಘ, ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು ಸಿ.ಬಿ.ಕುಮಾರ್‌ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್.ಮರೀಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಕುಸುಮಲತಾ, ಶಿಕ್ಷಣ ಸಂಯೋಜಕರಾದ ಚಕ್ಕೆರೆ ಯೋಗೀಶ್, ಗಂಗಾಧರ್ ಮೂರ್ತಿ, ಸಂಸ್ಥೆಯ ಉಪಾಧ್ಯಕ್ಷ ಕೆಂಚೇಗೌಡ, ಖಜಾಂಚಿ ಎಸ್.ಟಿ.ನಾರಾಯಣಗೌಡ, ನಿರ್ದೇಶಕರಾದ ಎಂ.ಸಿ.ಎಚ್.ಮೆಹರೀಶ್, ನಾಗವಾರ ಶಂಭೂಗೌಡ, ಎಂ.ಎ.ಮಾಲಿನಿ, ಅನಂತಮೂರ್ತಿ, ಕಾಲೇಜು ಪ್ರಾಂಶುಪಾಲ ಅಶ್ವಥ್, ನಾಗವಾರ ಪ್ರೌಢಶಾಲೆ ಮುಖ್ಯಶಿಕ್ಷಕ ಜಿ.ಡಿ.ಜಯರಾಂ, ಐಟಿಐ ಪ್ರಾಂಶುಪಾಲ ರಮೇಶ್, ಜಿಲ್ಲಾ ಡಯಟ್ ಉಪನ್ಯಾಸಕ ಸಿ.ರಾಜಶೇಖರ್, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಭಾರತಿ ಬಬಲೇಶ್ವರ ಇತರರು ಉಪಸ್ಥಿತರಿದ್ದರು.

ಪೊಟೋ೩೦ಸಿಪಿಟಿ೧: ಚನ್ನಪಟ್ಟಣದ ಸಾರ್ವಜನಿಕ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ಸಿ.ಬಿ.ಕುಮಾರ್ ದಂಪತಿಯನ್ನು ಸನ್ಮಾನಿಸಲಾಯಿತು.