ಸಾರಾಂಶ
ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದ ಯುವಕ ರೇವಣ್ಣ ಗುರಿಕಾರ ೧೦ಕ್ಕೂ ಅಧಿಕ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದು, ಈಗ ಪಿಎಸ್ಐ ಸಿವಿಲ್ ಆಯ್ಕೆ ಪಟ್ಟಿಯ ಕಲ್ಯಾಣ ಕರ್ನಾಟಕದ ಮೀಸಲಿನಲ್ಲಿ ೨೪ನೇ ರ್ಯಾಂಕ್ ಪಡೆದಿದ್ದಾರೆ.
ಪಿಎಸ್ಐ ಸಿವಿಲ್ ಆಯ್ಕೆ ಪಟ್ಟಿಯ ಕಲ್ಯಾಣ ಕರ್ನಾಟಕದ ಮೀಸಲಿನಲ್ಲಿ ೨೪ನೇ ರ್ಯಾಂಕ್
ಕನ್ನಡಪ್ರಭ ವಾರ್ತೆ ಹನುಮಸಾಗರ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದು ಸರ್ಕಾರಿ ನೌಕರಿ ಗಿಟ್ಟಿಸುಕೊಳ್ಳುವುದು ಸುಲಭದ ಮಾತಲ್ಲ. ಕೇವಲ ಒಂದು ಜವಾನ ಹುದ್ದೆಗೆ ಉನ್ನತ ವ್ಯಾಸಂಗ ಮಾಡಿ ಸಾವಿರಾರು ಆಕಾಂಕ್ಷಿಗಳು ಅರ್ಜಿ ಸಲ್ಲಿಸುತ್ತಾರೆ. ಇಂತಹ ಸಂದರ್ಭ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದ ಯುವಕ ರೇವಣ್ಣ ಗುರಿಕಾರ ೧೦ಕ್ಕೂ ಅಧಿಕ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದು, ಈಗ ಪಿಎಸ್ಐ ಸಿವಿಲ್ ಆಯ್ಕೆ ಪಟ್ಟಿಯ ಕಲ್ಯಾಣ ಕರ್ನಾಟಕದ ಮೀಸಲಿನಲ್ಲಿ ೨೪ನೇ ರ್ಯಾಂಕ್ ಪಡೆದಿದ್ದಾರೆ.ರೇವಣ್ಣ ಗುರಿಕಾರ ಅವರದು ಕೃಷಿ ಕುಟುಂಬ. ತಂದೆ ಚಂದಪ್ಪ ಗುರಿಕಾರ, ತಾಯಿ ಯಲ್ಲಮ್ಮ ಗುರಿಕಾರ ಅವರ ೮ ಜನ ಮಕ್ಕಳಲ್ಲಿ ರೇವಣ್ಣ ೬ನೇಯವರು. ಕುಟುಂಬವು ತಮ್ಮ ಅಲ್ಪ ಪ್ರಮಾಣದ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಬಡತನ ಬೇಗೆಯಲ್ಲಿ ಜೀವನ ಕಳೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಒಂದಲ್ಲ, ಎರಡಲ್ಲ ೧೦ಕ್ಕೂ ಅಧಿಕ ಸರ್ಕಾರಿ ನೌಕರಿಗಳನ್ನು ಕಳೆದ ನಾಲ್ಕೈದು ವರ್ಷದಲ್ಲಿ ಪಡೆದುಕೊಂಡಿದ್ದಾರೆ.ಶಿಕ್ಷಣ:
ರೇವಣ್ಣ ಒಂದರಿಂದ ೫ನೇ ತರಗತಿಯವರೆಗೆ ಸ್ವಗ್ರಾಮ ಕಬ್ಬರಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪೂರೈಸಿದ್ದಾರೆ. ಮುಂದೆ ೬ನೇ ತರಗತಿಗೆ ಕಾಟಾಪೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಗೊಂಡು ೧೦ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದಾರೆ. ಪಿಯುಸಿಯನ್ನು ಕೊಪ್ಪಳ ನಗರದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಪೂರೈಸಿ ನಂತರ ಗಜೇಂದ್ರಗಡ ತಾಲೂಕಿನಲ್ಲಿ ಬಿಎಸ್ಸಿವರೆಗೆ ವ್ಯಾಸಂಗ ಮಾಡಿದ್ದಾರೆ.ಯಾವ್ಯಾವ ಹುದ್ದೆಗಳು:ಪದವಿ ಪೂರೈಸಿದ ನಂತರ ೨೦೧೬ರಲ್ಲಿ ಶಿಗ್ಗಾವಿಯ ಕೆಎಸ್ಆರ್ಪಿ ಬೆಟಾಲಿನ್ ಪೊಲೀಸ್ ಕಾನ್ಸ್ಟೇಬಲ್ ಆಗಿ ಆಯ್ಕೆಯಾಗಿ ೫ ತಿಂಗಳು ಕಾರ್ಯನಿರ್ವಹಿಸುತ್ತಾರೆ. ನಂತರ ವಿವಿಧ ಪರೀಕ್ಷೆ ಬರೆದು ಎಸ್ಡಿಎ, ಎಫ್ಡಿಎ, ಕೇಂದ್ರ ಸರ್ಕಾರಿ ನೌಕರಿಗೂ ಆಯ್ಕೆಯಾಗುತ್ತಾರೆ. ಬಳಿಕ ಪೊಲೀಸ್ ಇಲಾಖೆಯ ಎಸ್ಐ ಕೆಎಸ್ಆರ್ಪಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲನೇ ರ್ಯಾಂಕ್ ಪಡೆಯುತ್ತಾರೆ. ನಂತರ ಸಶಸ್ತ್ರ ಮೀಸಲು ಪಡೆಯ ಎಸ್ಐ ಬೆಂಗಳೂರು ಸಿಟಿ, ೨೦೨೦ರಲ್ಲಿ ಬೆಳಗಾವಿ ವಲಯದ ಡಿಆರ್ ಎಸ್ಐ ಆಗಿ ಸೇವೆ ಮಾಡಿದ್ದು, ಸದ್ಯ ವಿಜಯಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಉಚಿತ ತರಬೇತಿ:ಶಿಕ್ಷಣ ಕಾಶಿ ಎಂದು ಹೆಸರು ಮಾಡಿರುವ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಉದ್ಯಾನವದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇದರೊಂದಿಗೆ ಧಾರವಾಡ ಸೇರಿದಂತೆ ನಾನಾ ಕಡೆಗಳಲ್ಲಿ ಉಚಿತವಾಗಿ ತರಬೇತಿ ನೀಡಿದ್ದಾರೆ.