ಸಾರಾಂಶ
ಹಾನಗಲ್ಲ: ತಾಲೂಕಿನ ರೈತರು ಮತ್ತು ಸಾರ್ವಜನಿಕರ 40 ಲಕ್ಷ ಪುಟ ಕಂದಾಯ ದಾಖಲೆಗಳನ್ನೆಲ್ಲ ಡಿಜಿಟಲೀಕರಣ ಮಾಡಲಾಗಿದ್ದು, ಕಂದಾಯ ದಾಖಲೆಗಳು ಸಂಪೂರ್ಣ ಡಿಜಿಟಲೀಕರಣಗೊಂಡ ಹಾವೇರಿ ಜಿಲ್ಲೆಯ ಏಕೈಕ ತಾಲೂಕು ಹಾನಗಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ತಾಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ₹21 ಲಕ್ಷ ವೆಚ್ಚದಲ್ಲಿ ನಾಡಕಚೇರಿಯ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಅವರು, ಇನ್ನು ಮುಂದೆ ಕಂದಾಯ ದಾಖಲೆಗಳಿಗೆ ತಹಸೀಲ್ದಾರ್ ಕಚೇರಿಗೆ ಅಲೆಯುವಂತಿಲ್ಲ. ಬೆರಳ ತುದಿಯಲ್ಲಿ ಎಲ್ಲ ದಾಖಲೆಗಳೂ ಸಿಗಲಿವೆ. ಇದರಿಂದ ಅನಗತ್ಯ ಸಮಯಹರಣ, ಕೆಲಸ, ಕಾರ್ಯಗಳನ್ನು ಬದಿಗೊತ್ತಿ, ಹಣವ್ಯಯ ಮಾಡಿ ಅಲೆಯುವುದು ತಪ್ಪಲಿದೆ. ಇದೇ ರೀತಿ ಕಂದಾಯ ಇಲಾಖೆಯಲ್ಲಿ ಹಲವು ಮಹತ್ವಪೂರ್ಣ ಬದಲಾವಣೆ ತರುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು. ಕಂದಾಯ ಗ್ರಾಮ, ಉಪ ಗ್ರಾಮಗಳ ರಚನೆಯ ಮೂಲಕ ಅನಧಿಕೃತ ವಸತಿ ಪ್ರದೇಶಗಳನ್ನು ಅಧಿಕೃತಗೊಳಿಸಿ ಹಕ್ಕುಪತ್ರ ವಿತರಿಸಲಾಗುತ್ತಿದೆ. ತಾಲೂಕಿನಲ್ಲಿ 90ಕ್ಕಿಂತ ಹೆಚ್ಚು ಕಂದಾಯ ಗ್ರಾಮ, ಉಪಗ್ರಾಮಗಳು ರಚನೆಯಾಗಲಿದ್ದು, ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ದಾಖಲೆರಹಿತವಾಗಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ 15 ಸಾವಿರ ಕುಟುಂಬಗಳಿಗೆ ಮನೆ ಮಾಲೀಕತ್ವ ಲಭಿಸಲಿದೆ ಎಂದು ಶಾಸಕ ಮಾನೆ ತಿಳಿಸಿದರು.ಶಿಗ್ಗಾಂವಿ- ಸವಣೂರು ಶಾಸಕ ಯಾಸೀರಖಾನ್ ಪಠಾಣ ಮಾತನಾಡಿ, ತಾಲೂಕಿನಲ್ಲಿ ಶಾಸಕ ಶ್ರೀನಿವಾಸ ಮಾನೆ ನೇತೃತ್ವದಲ್ಲಿ ಸಾವಿರಾರು ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಇದರ ಫಲವಾಗಿ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಭೂ ಗ್ಯಾರಂಟಿ ಭಾಗ್ಯ ಲಭಿಸುವಂತಾಗಿದೆ. ಶಿಗ್ಗಾಂವಿ- ಸವಣೂರು ಕ್ಷೇತ್ರದಲ್ಲಿಯೂ ಈ ನಿಟ್ಟಿನಲ್ಲಿ ಚುರುಕಾಗಿ ಕೆಲಸ ಮಾಡಲಾಗುತ್ತಿದೆ ಎಂದರು.ತಹಸೀಲ್ದಾರ್ ರೇಣುಕಾ ಎಸ್., ಕೆಡಿಪಿ ಸದಸ್ಯ ಮಹ್ಮದಹನೀಫ್ ಬಂಕಾಪೂರ, ಗ್ರಾಪಂ ಸದಸ್ಯರಾದ ಅರುಣ ಮಲ್ಲಮ್ಮನವರ, ಪತಂಗಸಾಬ ಮಕಾನದಾರ, ರಾಮಣ್ಣ ವಡ್ಡರ, ಲಕ್ಷ್ಮೀ ಕಲಾಲ, ಗದಿಗೆವ್ವ ಚಿಕ್ಕಣಗಿ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಪದ್ಮಾ ಬೇಂದ್ರೆ, ಮುಖಂಡರಾದ ಚನ್ನಬಸಣ್ಣ ಬಿದರಗಡ್ಡಿ, ನಾಗರಾಜ ಮಲ್ಲಮ್ಮನವರ, ಮಲ್ಲನಗೌಡ ಪಾಟೀಲ, ಚಮನಸಾಬ ಪಾಟೀಲ, ಮಲ್ಲೇಶಪ್ಪ ಕ್ಷೌರದ, ರಾಮಣ್ಣ ರಾಮಜಿ, ಮಾರುತಿ ಮುದುಕಣ್ಣನವರ, ಹನುಮಂತಪ್ಪ ಮರಗಡಿ, ಮಂಜು ಗೊರಣ್ಣನವರ, ಚಂದ್ರಪ್ಪ ಜಾಲಗಾರ, ಈರಣ್ಣ ಬೈಲವಾಳ, ಭರಮಣ್ಣ ಶಿವೂರ, ಆದರ್ಶ ಶೆಟ್ಟಿ ಇದ್ದರು.ಬಮ್ಮನಹಳ್ಳಿ- ಸವಣೂರು ಮಾರ್ಗದ ಬಸ್ ಸೇವೆಗೆ ಚಾಲನೆ
ಹಾನಗಲ್ಲ: ತಾಲೂಕಿನ ಬಮ್ಮನಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಬಮ್ಮನಹಳ್ಳಿ- ಸವಣೂರು ನೂತನ ಮಾರ್ಗದ ಬಸ್ ಸೇವೆಗೆ ಶಾಸಕ ಶ್ರೀನಿವಾಸ ಮಾನೆ ಹಸಿರುನಿಶಾನೆ ತೋರಿದರು.ಶಿಗ್ಗಾಂವಿ- ಸವಣೂರು ಶಾಸಕ ಯಾಸೀರಖಾನ್ ಪಠಾಣ, ತಹಸೀಲ್ದಾರ್ ರೇಣುಕಾ ಎಸ್., ಕೆಡಿಪಿ ಸದಸ್ಯ ಮಹ್ಮದಹನೀಫ್ ಬಂಕಾಪುರ, ಗ್ರಾಪಂ ಸದಸ್ಯರಾದ ಅರುಣ ಮಲ್ಲಮ್ಮನವರ, ಪತಂಗಸಾಬ ಮಕಾನದಾರ, ರಾಮಣ್ಣ ವಡ್ಡರ, ಲಕ್ಷ್ಮೀ ಕಲಾಲ, ಗದಿಗೆವ್ವ ಚಿಕ್ಕಣಗಿ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಪದ್ಮಾ ಬೇಂದ್ರೆ, ಮುಖಂಡರಾದ ಚನ್ನಬಸಣ್ಣ ಬಿದರಗಡ್ಡಿ, ನಾಗರಾಜ ಮಲ್ಲಮ್ಮನವರ, ಮಲ್ಲನಗೌಡ ಪಾಟೀಲ, ಚಮನಸಾಬ ಪಾಟೀಲ, ಮಲ್ಲೇಶಪ್ಪ ಕ್ಷೌರದ, ರಾಮಣ್ಣ ರಾಮಜಿ, ಮಾರುತಿ ಮುದುಕಣ್ಣನವರ, ಹನುಮಂತಪ್ಪ ಮರಗಡಿ, ಮಂಜು ಗೊರಣ್ಣನವರ, ಚಂದ್ರಪ್ಪ ಜಾಲಗಾರ, ಈರಣ್ಣ ಬೈಲವಾಳ, ಭರಮಣ್ಣ ಶಿವೂರ, ಆದರ್ಶ ಶೆಟ್ಟಿ ಸೇರಿದಂತೆ ಇತರರು ಇದ್ದರು.ಬಸ್ ನಿತ್ಯ ಬೆಳಗ್ಗೆ 5.45 ಗಂಟೆಗೆ ಬಮ್ಮನಹಳ್ಳಿ ಗ್ರಾಮದಿಂದ ಲಕ್ಕಿಕೊಪ್ಪ, ದೇವರ ಹೊಸಪೇಟೆ, ಹೋತನಹಳ್ಳಿ, ಮಾಸನಕಟ್ಟಿ, ವಳಗೇರಿ, ಗುಡ್ಡದಚನ್ನಾಪುರ, ಬಂಕಾಪುರ ಮಾರ್ಗವಾಗಿ ಸವಣೂರು ತಲುಪಲಿದ್ದು, ರಾತ್ರಿ 8 ಗಂಟೆಗೆ ಇದೇ ಮಾರ್ಗದಿಂದ ವಾಪಸ್ ಬಮ್ಮನಹಳ್ಳಿಗೆ ಆಗಮಿಸಲಿದೆ.