ಸನಾತನ ಧರ್ಮಕ್ಕೆ ಶಂಕರಾಚಾರ್ಯರಿಂದ ಪುನಶ್ಚೇತನ

| Published : May 13 2024, 12:00 AM IST

ಸಾರಾಂಶ

ಜಿಲ್ಲಾಧಿಕಾರಿ ಕಚೇರಿಯ ಜಯಂತಿ ಆಚರಣೆಯಲ್ಲಿ ಉಪ ವಿಭಾಗಾಧಿಕಾರಿ ಎಂ.ಕಾರ್ತಿಕ್ ಅಭಿಮತ

ಕನ್ನಡಪ್ರಭ ವಾರ್ತೆ, ಚಿತ್ರದುರ್ಗಸನಾತನ ಧರ್ಮವನ್ನು ಮೇಲೆತ್ತಿ, ಅದರಲ್ಲಿನ ಉನ್ನತ ತತ್ವಜ್ಞಾನ ಜಗತ್ತಿಗೆ ಸಾರುವ ಕೆಲಸವನ್ನು ಆದಿಗುರು ಶಂಕರಾಚಾರ್ಯರು ಮಾಡಿದ್ದಾರೆ ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಬೌದ್ಧ ಹಾಗೂ ಜೈನ ಧರ್ಮಗಳು ತಮ್ಮ ವೈಶಿಷ್ಟ ತತ್ವಗಳಿಂದಾಗಿ ಭಾರತ ಹಾಗೂ ಬೇರೆ ದೇಶಗಳಲ್ಲಿಯೂ ಮನ್ನಣೆ ಗಳಿಸಿದ್ದವು. ಬೌದ್ಧ ಧರ್ಮ ಏಷ್ಯಾದ ಹಲವು ದೇಶಗಳಿಗೂ ಹಬ್ಬಿತ್ತು. ಇದರ ಜೊತೆಗೆ ಸನಾತನ ಧರ್ಮದಲ್ಲಿ ಶೈವ, ವೈಷ್ಣವ, ಶಕ್ತಿ, ಗಣೇಶ ಹಾಗೂ ಸೂರ್ಯನ ಆರಾಧಕ ಪಂಥಗಳು ಇದ್ದವು. ಇವುಗಳ ಭಿನ್ನತೆಯಿಂದಾಗಿ ಸನಾತನ ಧರ್ಮ ಮಂಕಾಗಿತ್ತು. ಶಂಕರಾಚಾರ್ಯರು ಈ ಎಲ್ಲಾ ಪಂಥಗಳನ್ನು ಒಗ್ಗೂಡಿಸಿ ಸನಾತನ ಧರ್ಮಕ್ಕೆ ಪುನಶ್ಚೇತನ ನೀಡಿದರು. ಅದ್ವೈತ ಸಿದ್ಧಾಂತ ಪ್ರತಿಪಾದಿಸಿದರು ಎಂದು ಉಪವಿಭಾಗಧಿಕಾರಿ ಎಂ.ಕಾರ್ತಿಕ್ ಹೇಳಿದರು.

ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ ಮಾತನಾಡಿ, ಶಂಕರಾಚಾರ್ಯರು 1,300 ವರ್ಷಗಳ ಹಿಂದೆ ಜನಿಸಿದರು. ಐದನೇ ವರ್ಷಕ್ಕೆ ಉಪನಯನ ನಂತರ ಸನ್ಯಾಸ ಸ್ವೀಕರಿಸಿ, ಅಖಂಡ ಭಾರತವನ್ನು 3 ಬಾರಿ ಪ್ರದಕ್ಷಣೆ ಹಾಕಿ ಹಿಂದೂ ಧರ್ಮದ ಪುನರುಜ್ಜೀವನಗೊಳಿಸಿದರು. ಈ ಕಾರಣದಿಂದಲೇ ಇಂದಿಗೂ ಭಾರತದಲ್ಲಿ ಸನಾತನ ಹಿಂದೂ ಧರ್ಮದ ಉಳಿದುಕೊಂಡು ಬಂದಿದೆ. ಶಂಕರಾಚಾರ್ಯರು ಜ್ಞಾನಕ್ಕೆ ಹೆಚ್ಚಿನ ಒತ್ತುಕೊಟ್ಟು ನಹಿಃ ಜ್ಞಾನೇನ ಸದೃಶಂ ಎಂದು ಹೇಳಿದರು. ಅಹಂ ಬ್ರಹ್ಮಾಸ್ಮೀ ಎಂಬ ತತ್ವದ ಮೂಲಕ ನಮ್ಮಲ್ಲೇ ನಾವು ದೈವತ್ವನ್ನು ಕಾಣಬೇಕು ಎಂದು ತಿಳಿಸಿದರು. ಇದರೊಂದಿಗೆ ಹಲವು ಗ್ರಂಥಗಳ ಮೇಲೆ ಭಾಷ್ಯಗಳನ್ನು ರಚಿಸಿದರು. ಅವರ ರಚಿಸಿದ ಸ್ತುತಿಗಳು ಇಂದಿಗೂ ಜನಮಾನಸದಲ್ಲಿವೆ ಎಂದರು.

ಚಿತ್ರದುರ್ಗ ತಹಸೀಲ್ದಾರ್ ಡಾ.ನಾಗವೇಣಿ ಮಾತನಾಡಿ, ಅದ್ವೈತ ಸಿದ್ಧಾಂತ ಜೊತೆಗೆ ದೇಶದ ನಾಲ್ಕು ಮೂಲೆಗಳಲ್ಲಿಯೂ ನಾಲ್ಕು ಮಠಗಳನ್ನು ಸ್ಥಾಪಿಸಿ ಹಿಂದೂ ಧರ್ಮವನ್ನು ಪುನಶ್ಚೇತನಗೊಳಿಸಿದರು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಕೆ.ಪಿಎಂ ಗುರುದೇವ್ ಭಕ್ತಿಗೀತೆ ಪ್ರಸ್ತುತ ಪಡಿಸಿದರು. ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ಬ್ರಾಹ್ಮಣ ಸಂಘದ ನಿರ್ದೇಶಕ ಶಂಕರ್, ಮುಖಂಡರುಗಳಾದ ಮಂಜುನಾಥ, ಹರೀಶ್, ಭಾರತಿ ಸೇರಿದಂತೆ ಮತ್ತಿತರರು ಇದ್ದರು.