ಕ್ರಾಂತಿಕಾರಿ ಬದಲಾವಣೆ ಬಂದೂಕಿನಿಂದಲ್ಲ, ಹೋರಾಟದಿಂದ : ಲೋಕೇಶ್‌

| Published : Jun 18 2025, 11:48 PM IST

ಸಾರಾಂಶ

ಚಿಕ್ಕಮಗಳೂರು, ಜನರಲ್ಲಿ ಕ್ರಾಂತಿಕಾರಿ ಬದಲಾವಣೆ ಮೂಡಿಸುವುದು ಬಂದೂಕಿನಿಂದಲ್ಲ, ಹೊಸ ರಾಜಕೀಯ ಬದಲಾವಣೆ ಅರ್ಥೈಸಿ ಕೊಂಡು, ನಿವೇಶನ ಹಾಗೂ ಭೂ ರಹಿತರು ಹೋರಾಟ ರೂಪಿಸಿದಾಗ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ಸಾಧ್ಯ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ. ಲೋಕೇಶ್ ಹೇಳಿದರು.

ಸಿಪಿಐ ಪಕ್ಷದ ಶತಮಾನ ಸಂಭ್ರಮ, ತಾಲೂಕು ಸಮಾವೇಶ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜನರಲ್ಲಿ ಕ್ರಾಂತಿಕಾರಿ ಬದಲಾವಣೆ ಮೂಡಿಸುವುದು ಬಂದೂಕಿನಿಂದಲ್ಲ, ಹೊಸ ರಾಜಕೀಯ ಬದಲಾವಣೆ ಅರ್ಥೈಸಿ ಕೊಂಡು, ನಿವೇಶನ ಹಾಗೂ ಭೂ ರಹಿತರು ಹೋರಾಟ ರೂಪಿಸಿದಾಗ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ಸಾಧ್ಯ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ. ಲೋಕೇಶ್ ಹೇಳಿದರು.

ನಗರದ ಸಿಪಿಐ ಕಚೇರಿಯಲ್ಲಿ ಬುಧವಾರ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷದ ಶತಮಾನ ಸಂಭ್ರಮ ಹಾಗೂ ತಾಲೂಕು ಸಮಾವೇಶದಲ್ಲಿ ಮಾತನಾಡಿದರು. ಶತಮಾನದಿಂದ ಅಧಿಕಾರ ಹೊರತಾಗಿ ಜನತೆ ನೋವು, ನಿರಾಸೆ ಹಾಗೂ ಶೋಷಿತರ ಪರವಾಗಿ ನಿರಂತರ ಹೋರಾಡುತ್ತಿರುವ ಪಕ್ಷ ಸಿಪಿಐ. ಸ್ವಾತಂತ್ರ್ಯ ಪೂರ್ವದ ಮುಂಚೆಯೂ ಬ್ರಿಟಿಷರ ಬೂಟು ನೆಕ್ಕಿಕೊಂಡು ಅಧಿಕಾರ ನಡೆಸಿದ ಎರಡು ರಾಷ್ಟ್ರೀಯ ಪಕ್ಷಗಳು ರೈತರು, ಕಾರ್ಮಿಕ ವರ್ಗವನ್ನು ಅಡಿಯಾಳಗಿ ಸಿಕೊಂಡು ವೈಯಕ್ತಿಕವಾಗಿ ಸಿರಿಸಂಪತ್ತು ಹೆಚ್ಚಿಸಿಕೊಳ್ಳುತ್ತಿವೆ ಎಂದು ಆರೋಪಿಸಿದರು.

ರಾಷ್ಟ್ರದಲ್ಲಿ ಶೇ.80 ರಷ್ಟು ದುಡಿಯುವ ವರ್ಗದಿಂದ ರಾಜಕೀಯ ವ್ಯಕ್ತಿಗಳು, ಉದ್ಯಮಿಗಳು ಆಸ್ತಿ, ಅಂತಸ್ತು ಹೆಚ್ಚಳಗೊಳಿಸಿ ಶ್ರಮಿಕರನ್ನು ಕೆಳಗೆ ತಳ್ಳುತ್ತಿದ್ದಾರೆ. ಜಾತಿ ತಾರತಮ್ಯ, ಬಡವ ಶ್ರೀಮಂತ ಎಂದು ವಿಂಗಡಿಸಿ ಜನಾಂಗವನ್ನು ಒಡೆಯುತ್ತಿದೆ. ಇದರ ವಿರುದ್ಧ ಕಮ್ಯೂನಿಸ್ಟ್ ಪಕ್ಷ ಹೋರಾಟ ರೂಪಿಸಿದ ಕಾರಣ ಇಂದು ಶೋಷಿತರ ಸ್ವಾಭಿಮಾನದ ಜೀವನಕ್ಕೆ ದಾರಿ ಯಾಗಿದೆ ಎಂದರು.ದೇಶದ ಬಹುಸಂಖ್ಯಾತರು ಮುಂಚೂಣಿಗೆ ತರುವ ನಿಟ್ಟಿನಲ್ಲಿ ಜಾತಿ ಸಮೀಕ್ಷೆ ಕಡ್ಡಾಯ. ಆದರೆ, ಕೇಂದ್ರ ಸರ್ಕಾರ ಜನ ಗಣತಿಗೆ ಮುಂದಾಗಿರುವುದು ಸರಿಯಾದ ನಿರ್ಧಾರವಲ್ಲ. ಈ ಹಿಂದೆ 1932 ರಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಜಾತಿ ಸಮೀಕ್ಷೆ ನಡೆದಿತ್ತು. ಇದಾದ ಬಳಿಕ ಇಂದಿಗೂ ದೇಶದಲ್ಲಿ ಸಮೀಕ್ಷೆಗೆ ಯಾವ ಸರ್ಕಾರಗಳು ಆಸಕ್ತಿ ತೋರದೇ ಬಹುಜನರನ್ನು ತುಳಿಯುತ್ತಿವೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ರಾಜಕಾರಣ ಬಹಳಷ್ಟು ಕಠಿಣತೆದಿಂದ ಕೂಡಿರುತ್ತದೆ. ತೆರಿಗೆ, ರೈತರ ಸಮಸ್ಯೆ, ವಸತಿ, ಶಿಕ್ಷಣ, ಆಹಾರ ಪದ್ಧತಿ ಅಪಾಯದಲ್ಲಿದೆ. ಹಣ ಇರುವವರಿಗೆ ಮಾತ್ರ ಅಧಿಕಾರ ಎಂಬಂತಾಗಿದೆ. ಜಾತಿ ಪ್ರಾಬಲ್ಯ ಬಹುದೊಡ್ಡ ಶಕ್ತಿ ವಹಿಸುತ್ತಿದೆ. ಕಾನೂನು ಬದಲಾವಣೆ, ಜಾತಿ ಧರ್ಮದ ಕಿತ್ತಾಟಗಳಿವೆ. ಕರಾವಳಿ ಭಾಗದಲ್ಲೂ ಪರಸ್ಪರ ಒಡೆದಾಳಿ ಸಂವಿಧಾನ ಆಶಯಕ್ಕೆ ವಿರುದ್ಧವಾಗಿ ರಾಜಕಾರಣ ನಡೆಯುತ್ತಿದೆ ಎಂದರು.

ರಾಜ್ಯ ಮಂಡಳಿ ಸದಸ್ಯ ಎಚ್.ಎಂ.ರೇಣುಕಾರಾಧ್ಯ ಮಾತನಾಡಿ, ರಾಜ್ಯದ ಜನತೆ ಟಿವಿ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುವ ಎರಡೇ ರಾಜಕೀಯ ಪಕ್ಷಗಳು ಎಂದು ನಂಬುತ್ತಿದೆ. ಈ ರಾಜಕಾರಣಿಗಳು ವ್ಯಾಪಾರ ದೃಷ್ಟಿಯಿಂದ ರಾಜಕಾರಣ ಮಾಡುತ್ತಿ ದ್ದಾರೆ. ಟಿಕೇಟ್‌ಗಾಗಿ ಜಾತಿ ಮತ್ತು ಖರ್ಚಿನ ಶಕ್ತಿ ಕೇಳುತ್ತಾರೆ. ಈ ನಡುವೆ ಸಿಪಿಐ ತ್ಯಾಗ, ಬಲಿದಾನದಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ಉತ್ತಮ ಪಕ್ಷವಾಗಿ ಹೊರಹೊಮ್ಮಿದೆ ಎಂದು ಹೇಳಿದರು.

ಚುನಾವಣಾ ಅಖಾಡದಲ್ಲಿ ಎಲ್ಲರೂ ನಮ್ಮನವರೇ ಎಂದೇಳುವ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು, ಅಧಿಕಾರದ ಬಳಿಕ ಮೇಲ್ಜಾತಿಗೆ ಒತ್ತು ನೀಡುತ್ತವೆ. ಸಮಾಜದಲ್ಲಿ ಉತ್ತಮ ನಡತೆ, ಎಲ್ಲರೂ ಪ್ರೀತಿಸುವ ಗುಣ ಹಾಗೂ ಪರೋಪಕಾರಿ ಮನುಜನೇ ನಿಜವಾದ ಮೇಲ್ಚಾತಿ ವ್ಯಕ್ತಿಯಾಗಲು ಸಾಧ್ಯ. ಬಡವರು ಮಕ್ಕಳು ಸಮಾಜದಲ್ಲಿ ಪ್ರತಿಷ್ಟಿತ ನಾಗರಿಕ ರಾಗುವುದೇ ಸಿಪಿಐ ಧ್ಯೇಯವಾಗಿದೆ ಎಂದರು.ಜಿಲ್ಲೆಯ ವಿವಿಧ ಭಾಗಗಳಲ್ಲಿ ನಿವೇಶನ, ವಸತಿ ರಹಿತರಿಗೆ ಶಾಶ್ವತ ಸೂರು ನಿರ್ಮಿಸಲು ಸಿಪಿಐನ ಬಹು ದೊಡ್ಡ ಪಾತ್ರವಿದ್ದು, ಯಾವುದೇ ರಾಜಕೀಯ ಜನಪ್ರತಿನಿಧಿಗಳ ಕೊಡುಗೆಯಿಲ್ಲ. ಅಲ್ಲದೇ ಜಿಲ್ಲೆಯ ಯಾವುದೇ ಭಾಗದಲ್ಲಿ ದಬ್ಬಾಳಿಕೆ, ದೌರ್ಜನ್ಯಕ್ಕೆ ಒಳಗಾದವರಿಗೆ ಸಿಪಿಐ ಕೆಂಬಾವುಟ ಸಹಕಾರ ನೀಡಿ ಕೈಜೋಡಿಸಿದರೆ ಬಲಾಡ್ಯ ಭೂಮಾಲೀಕರಲ್ಲಿ ಭಯದ ವಾತಾವರಣ ಸೃಷ್ಟಿಸುವ ರೀತಿಯಲ್ಲಿ ಸಂಘಟನೆ ಶಕ್ತಿ ಪಡೆದುಕೊಂಡಿದೆ ಎಂದು ಹೇಳಿದರು.ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧಾ ಸುಂದ್ರೇಶ್ ಮಾತನಾಡಿ, ಮುಂದಿನ ದಿನಗಳಲ್ಲಿ ಕಾರ್ಮಿಕರು, ರೈತರು ಎಚ್ಚೆತ್ತು ಕೊಂಡು ಸ್ವಹಕ್ಕುಗಳನ್ನು ಪಡೆದುಕೊಳ್ಳುವ ಶಕ್ತಿ ಬೆಳೆಸಿಕೊಂಡರೆ ಮಾತ್ರ ಸಮಾಜದಲ್ಲಿ ಘನತೆಯಿಂದ ಜೀವಿಸಲು ಸಾಧ್ಯ ಹಾಗೂ ಜಿಪ., ತಾಪಂ, ಗ್ರಾಪಂ. ಚುನಾವಣೆಗಳಿಗೆ ಕಾರ್ಯಕರ್ತರು ಸಜ್ಜಾಗಿ ದುಡಿವವರನ್ನು ಆಳುವ ವರ್ಗವನ್ನಾಗಿ ರೂಪಿಸ ಬೇಕು ಎಂದು ತಿಳಿಸಿದರು.ಸಮಾವೇಶದ ಅಧ್ಯಕ್ಷತೆಯನ್ನು ಸಿಪಿಐ ತಾಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಸಹ ಕಾರ್ಯದರ್ಶಿ ಜಿ.ರಘು, ಕೆಳಗೂರು ರಮೇಶ್, ಸದಸ್ಯ ಎಸ್. ವಿಜಯ್‌ಕುಮಾರ್, ತಾಲೂಕು ಸಹ ಕಾರ್ಯದರ್ಶಿ ಕುಮಾರ್, ನಗರ ಕಾರ್ಯದರ್ಶಿ ಜಿ.ರಮೇಶ್ ಇದ್ದರು. 18 ಕೆಸಿಕೆಎಂ 1

ಚಿಕ್ಕಮಗಳೂರಿನ ಸಿಪಿಐ ಕಚೇರಿಯಲ್ಲಿ ಬುಧವಾರ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷದ ಶತಮಾನ ಸಂಭ್ರಮ ಹಾಗೂ ತಾಲ್ಲೂಕು ಸಮಾವೇಶಮದಲ್ಲಿ ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ. ಲೋಕೇಶ್ ಮಾತನಾಡಿದರು.