ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯಾದ್ಯಂತ ಮೇ ತಿಂಗಳಲ್ಲಿ ಉತ್ತಮ ರೀತಿ ಮಳೆಯಾಗಿದ್ದು, ಕೃಷಿ ಚಟುವಟಿಕೆ ಗರಿಗೆದರಿವೆ. ರೈತರು ಉಳುಮೆ ಮಾಡಿ ಭೂಮಿ ಹದಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮುಂಗಾರು ಹಂಗಾಮಿನ ಬಿತ್ತನೆ ಬೀಜ ಹಾಗೂ ಅಗತ್ಯ ರಸಗೊಬ್ಬರ ದಾಸ್ತಾನು ಸಂಗ್ರಹಿಸಿಡುವ ಮೂಲಕ ಕೃಷಿ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.ಪ್ರಸಕ್ತ ಸಾಲಿನಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದು, ಬಹುತೇಕ ರೈತರು ತಮ್ಮ ಭೂಮಿ ಹದಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇತ್ತ ಕೃಷಿ ಇಲಾಖೆ ಕೂಡ ಹಂಗಾಮಿಗೆ ಸಿದ್ಧತೆ ನಡೆಸಿದ್ದು, ಬಿತ್ತನೆ ಬೀಜ, ರಸಗೊಬ್ಬರಗಳ ದಾಸ್ತಾನು ಮಾಡಿಟ್ಟಿರುವುದು ರೈತರಲ್ಲಿ ಉತ್ಸಾಹ ಹೆಚ್ಚಿಸಿದೆ.
ಜಿಲ್ಲೆಯಲ್ಲಿ ಭತ್ತ ಹಾಗೂ ಮೆಕ್ಕೆಜೋಳ ಪ್ರಮುಖ ಬೆಳೆಯಾಗಿದ್ದರಿಂದ ಬಿತ್ತನೆ ಬೀಜಕ್ಕೆ ಭಾರಿ ಬೇಡಿಕೆ ಇದೆ. ಇದರಿಂದ ಕೃಷಿ ಇಲಾಖೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಆಗದಂತೆ ದಾಸ್ತಾನು ಮಾಡಿದೆ.1,25,361 ಹೆಕ್ಟೇರ್ ಬಿತ್ತನೆ ಗುರಿ:
ಜಿಲ್ಲೆಯ 7 ತಾಲೂಕುಗಳಿಂದಲೂ ಒಟ್ಟು 1,25,361 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.ಜಿಲ್ಲೆಯ ಪ್ರಮುಖ ಬೆಳೆಗಳಾದ ಭತ್ತ 77556 ಹೆಕ್ಟೇರ್, ಮೆಕ್ಕೆಜೋಳ 46700 ಹೆಕ್ಟೇರ್, ರಾಗಿ 300 ಹೆಕ್ಟೇರ್, ಕಬ್ಬು 500 ಹೆಕ್ಟೇರ್ ಸೇರಿದಂತೆ ಒಟ್ಟು 1,25,361 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.
ಮುಂಗಾರು ಆರಂಭವಾಗುತ್ತಿದ್ದಂತೆ ಬಿತ್ತನೆ ಬೀಜ ವಿತರಣೆ ಪ್ರಕ್ರಿಯೆ ಆರಂಭಿಸಲು ಇಲಾಖೆ ಕ್ರಮ ಕೈಗೊಂಡಿದೆ. ಮುಂಗಾರು ಹಂಗಾಮಿಗೆ ಬೇಕಾಗುವ ಬೀಜಗಳು ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ರಸಗೊಬ್ಬರವನ್ನು ಅಧಿಕೃತ ಕೃಷಿ ಪರಿಕರಗಳ ಮಾರಾಟಗಾರರ ಮೂಲಕ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಅಥವಾ ಅಧಿಕೃತ ಬೀಜ ಮಾರಾಟಗಾರರಿಂದ ಮಾತ್ರ ಬಿತ್ತನೆ ಬೀಜಗಳನ್ನು ಅಧಿಕೃತ ಬಿಲ್ಲುಗಳ ಸಮೇತ ಪಡೆದು ಬೀಜ ಖರೀದಿಸಲು ಸೂಚಿಸಲಾಗಿದೆ.ರೈತರು ಬಿತ್ತನೆಗೆ ಪೂರ್ವ ತಯಾರಿ ಸಿದ್ದತೆ ಕೈಗೊಳ್ಳುತ್ತಿದ್ದು, ಬಿತ್ತನೆಗೆ ಭೂಮಿಯ ಹದ ಅರಿತು ಬಿತ್ತನೆ ಕಾರ್ಯ ಕೈಗೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಯೂರಿಯಾ ಗೊಬ್ಬರ 12369 ಟನ್, ಡಿಎಪಿ 4030 ಟನ್, ಎಂಓಪಿ 4567 ಟನ್, ಕಾಂಪ್ಲೆಕ್ಸ್ 23737 ಟನ್, ಎಸ್.ಎಸ್.ಪಿ 2059 ಟನ್ ಗೊಬ್ಬರ ದಾಸ್ತಾನು ಇದೆ. ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ ಎಂದು ಕೃಷಿ ಇಲಾಖೆ ತಿಳಿಸಿದೆ.
---------ಮುಂಗಾರು ಪೂರ್ವ ಮಳೆಯಿಂದ ಬಿತ್ತನೆಗೆ ಜಮೀನು ಹದ ಮಾಡಿಕೊಳ್ಳಲಾಗುತ್ತಿದೆ. ಹದಗೊಂಡ ಜಮೀನು ತೇವಾಂಶ ಹಿಡಿದಿಟ್ಟು ಕೊಳ್ಳುವುದರಿಂದ ಬಿತ್ತನೆಗೆ ಅನೂಕೂಲವಾಗಲಿದೆ.
-ದಿನೇಶ್, ರೈತ