ಸಾರಾಂಶ
ಭಾನುವಾರ ರಾತ್ರಿ ಲಕ್ಷ್ಮಮ್ಮ ನಾಗರಾಜು ಎಂಬುವರ ಭತ್ತದ ಗದ್ದೆಯಲ್ಲಿ ದಾಳಿ ನಡೆಸಿ ಭತ್ತದ ಬೆಳೆ ಮತ್ತು ಬಾಳೆ ಗಿಡಗಳನ್ನು ನಾಶ ಗೊಳಿಸಿವೆ.
ಕನಕಪುರ: ನಿರಂತರ ಕಾಡಾನೆ ದಾಳಿಗೆ ಭತ್ತ, ರಾಗಿ,ಬಾಳೆ ಬೆಳೆ ನಾಶವಾಗಿರುವ ಘಟನೆ ಕೂನೂರು ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕಸಬಾ ಹೋಬಳಿಯ ಕೂನೂರು ಗ್ರಾಮದ ಬಳಿ ಜೋಡಿ ಕಾಡಾನೆಗಳು ಕಾಣಿಸಿಕೊಂಡಿದ್ದು, ರೈತರ ಜಮೀನಿನಲ್ಲಿನ ಭತ್ತ, ರಾಗಿ, ಬಾಳೆ ಗಿಡಗಳನ್ನು ನಾಶಗೊಳಿಸಿ ಆತಂಕ ಹುಟ್ಟಿಸಿವೆ. ಭಾನುವಾರ ರಾತ್ರಿ ಲಕ್ಷ್ಮಮ್ಮ ನಾಗರಾಜು ಎಂಬುವರ ಭತ್ತದ ಗದ್ದೆಯಲ್ಲಿ ದಾಳಿ ನಡೆಸಿ ಭತ್ತದ ಬೆಳೆ ಮತ್ತು ಬಾಳೆ ಗಿಡಗಳನ್ನು ನಾಶ ಗೊಳಿಸಿವೆ, ಹುಲಿಬಲೆ ಸಮೀಪದಲ್ಲಿನ ಹನುಮಗೌಡರ ಜಮೀನಿನಲ್ಲಿ ದಾಳಿ ನಡೆಸಿ ರಾಗಿ ಮತ್ತು ಭತ್ತದ ಫಸಲನ್ನು ನಾಶಗೊಳಿಸಿವೆ. ಕಾಡಾನೆಗಳು ನಿರಂತರ ದಾಳಿ ನಡೆಸುತ್ತಿದ್ದರೂ ಅರಣ್ಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಸರ್ಕಾರದಿಂದ ಸಿಗುವ ಸಣ್ಣ ಪರಿಹಾರದಿಂದ ರೈತರಿಗೆ ಆಗುವ ನಷ್ಟ ತುಂಬುವುದಿಲ್ಲ, ಕಾಡಾನೆಗಳಿಂದ ಸಾವು- ನೋವು ಸಂಭವಿಸುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳನ್ನು ಶಾಶ್ವತವಾಗಿ ಕಾಡಿಗಟ್ಟುವ ಕೆಲಸ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.