ನಾಲ್ಕು ಗಂಟೆಗಳ ಕಾಲ ರಿಕ್ಕಿ ರೈ ವಿಚಾರಣೆ

| Published : Jun 04 2025, 02:38 AM IST

ಸಾರಾಂಶ

ರಿಕ್ಕಿ ರೈನಿಂದ ಪ್ರಕರಣ ಕುರಿತು ಪೊಲೀಸರು ಸಂಪೂರ್ಣ ಹೇಳಿಕೆಯನ್ನು ವಿಡಿಯೋ ಚಿತ್ರೀಕರಣ ಮಾಡಿ ದಾಖಲಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಗರಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಲೋಕದ ಮಾಜಿ ದೊರೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈನನ್ನು ಬಿಡದಿ ಠಾಣೆ ಪೊಲೀಸರು ಸತತ ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದರು.ರಾಮನಗರ ಡಿವೈಎಸ್ಪಿ ಶ್ರೀನಿವಾಸ್ ಹಾಗೂ ಬಿಡದಿ ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ರವರು ರಿಕ್ಕಿ ರೈನನ್ನು ವಿಚಾರಣೆಗೆ ಒಳಪಡಿಸಿದರು. ರಿಕ್ಕಿ ರೈನಿಂದ ಪ್ರಕರಣ ಕುರಿತು ಪೊಲೀಸರು ಸಂಪೂರ್ಣ ಹೇಳಿಕೆಯನ್ನು ವಿಡಿಯೋ ಚಿತ್ರೀಕರಣ ಮಾಡಿ ದಾಖಲಿಸಿಕೊಂಡಿದ್ದಾರೆ.ವಿಚಾರಣೆ ಪೂರ್ಣಗೊಂಡ ಬಳಿಕ ಹೊರ ಬಂದು ಸುದ್ದಿಗಾರರೊಂದಿಗೆ ಮಾತನಾಡಿದ ರಿಕ್ಕಿ ರೈ, ಕಳೆದ ಏಪ್ರಿಲ್ 18ರಂದು ನನ್ನ ಮೇಲೆ ಅಟ್ಯಾಕ್ ಆಯಿತು. ಮನೆಯಿಂದ ಹೊರ ಬರುವಾಗ ಶೂಟರ್ ಕಾರಿನ ಮೇಲೆ ಫೈರಿಂಗ್ ಮಾಡಿದಾಗ ನನ್ನ ಮೂಗು ಕಟ್ ಆಗಿದ್ದು, ಕೈಗೂ ಗುಂಡು ತಗುಲಿತ್ತು. ದೇವರ ದಯೆಯಿಂದ ನನಗೆ ಏನೂ ಆಗಿಲ್ಲ. ನಾನು ಸ್ಟ್ರಾಂಗ್ ಆಗಿಯೇ ಇದ್ದೇನೆ ಎಂದರು.ಈ ಪ್ರಕರಣದಲ್ಲಿ ಇನ್ನೂ ಸಸ್ಪೆಕ್ಟ್ಸ್ ಇದ್ದಾರೆ. ಅದರ ಬಗ್ಗೆಯೂ ಪೊಲೀಸರಿಗೆ ವಿಚಾರಣೆ ವೇಳೆ ಮಾಹಿತಿ ನೀಡಿದ್ದೇನೆ. ಇನ್ನೂ ತನಿಖೆ ನಡೆಯುತ್ತಿರುವ ಕಾರಣ ಹೆಚ್ಚಿನದಾಗಿ ಏನನ್ನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.ಪೊಲೀಸರ ತನಿಖೆಯಿಂದ ನನಗೆ ನ್ಯಾಯ ಸಿಗುವ ವಿಶ್ವಾಸವಿದೆ. ಇಲ್ಲವಾದರೆ ನಾವೇ ಅವರನ್ನು ಹುಡುಕುತ್ತೇವೆ. ಪ್ರಕರಣದಲ್ಲಿ ಮಾಜಿ ಗನ್ ಮ್ಯಾನ್ ವಿಠ್ಠಲ್ ಬಂಧನವಾಗಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ, ಅದರ ಬಗ್ಗೆ ಕಮೆಂಟ್ ಮಾಡಲ್ಲ. ಈ ಬಗ್ಗೆ ಸಂಪೂರ್ಣ ತನಿಖೆಯಾಗಲಿ ನೋಡೋಣ ಎಂದು ರಿಕ್ಕಿ ರೈ ಪ್ರತಿಕ್ರಿಯಿಸಿದರು.

ಅನುಮಾನ ಇರುವವರ ವಿವರ ನೀಡಿದ ರಿಕ್ಕಿ ರೈ:ರಿಕ್ಕಿ ರೈ ಪರ ವಕೀಲ ನಾರಾಯಣ ಸ್ವಾಮಿ ಮಾತನಾಡಿ, ಫೈರಿಂಗ್ ನಲ್ಲಿ ಗಾಯಗೊಂಡ ಬಳಿಕ ರಿಕ್ಕಿ ರೈ ಅವರಿಗೆ ಮೂರರಿಂದ ನಾಲ್ಕು ಬಾರಿ ಶಸ್ತ್ರ ಚಿಕಿತ್ಸೆ ನಡೆದಿದೆ. ಪೊಲೀಸರು ನೋಟಿಸ್ ನೀಡಿದಾಗಲೆ ಆರೋಗ್ಯದಲ್ಲಿ ಚೇತರಿಕೆ ಕಂಡ ಬಳಿಕ ವಿಚಾರಣೆಗೆ ಹಾಜರಾಗುವುದಾಗಿ ರಿಕ್ಕಿ ರೈ ಹೇಳಿದ್ದರು. ಅದರಂತೆ ಕಾನೂನಿಗೆ ಗೌರವ ನೀಡಿ ವಿಚಾರಣೆಗೆ ಬಂದಿದ್ದಾರೆ. ಪ್ರಕರಣದಲ್ಲಿ ಯಾರ ಮೇಲೆ , ಯಾವ ಕಾರಣಕ್ಕೆ ಅನುಮಾನವಿದೆ ಎಂಬುದನ್ನು ವಿವರಿಸಿದ್ದಾರೆ ಎಂದರು.ರಿಕ್ಕಿ ರೈ ಅವರಿಗೆ ಹಣ ಅಥವಾ ಪ್ರಚಾರದ ಅವಶ್ಯಕತೆ ಇಲ್ಲ. ಆದರೂ ರಿಕ್ಕಿ ರೈಗೆ ಸ್ವಯಂ ಕೃತವಾಗಿ ಫೈರಿಂಗ್ ಮಾಡಿಸಿಕೊಳ್ಳುವ ಮತ್ತು ಅದರಿಂದ ಪ್ರಚಾರ ಗಿಟ್ಟಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಮಗಿರುವ ಮಾಹಿತಿ ಪ್ರಕಾರ ಫೈರಿಂಗ್ ನಲ್ಲಿ ರಿಕ್ಕಿ ರೈಗೆ ತೊಂದರೆಯಾದರೆ, ಅದರಲ್ಲಿ ಅವರ ಸಹೋದರನನ್ನು ಸಿಲುಕಿಸಿ ವಿದೇಶದಿಂದ ಬರದಂತೆ ಮಾಡಿ ಆಸ್ತಿ ಹೊಡೆಯುವ ಸಂಚು ರೂಪಿಸಿದ್ದರು. ಆದರೆ, ದೇವರ ದಯೆಯಿಂದ ಏನು ತೊಂದರೆಯಾಗಿಲ್ಲ ಎಂದು ಹೇಳಿದರು.ಈ ಪ್ರಕರಣದಲ್ಲಿ ಅಪಪ್ರಚಾರ ಮಾಡಿ ತನಿಖೆ ದಿಕ್ಕು ತಪ್ಪಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ, ರಿಕ್ಕಿ ರೈ ಅವರಿಗೆ ನ್ಯಾಯ ಸಿಗಲೇ ಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ನಾವೂ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ. ನಮಗೆ ಪೊಲೀಸರ ಮೇಲೆ ತುಂಬಾ ನಂಬಿಕೆಯಿದೆ. ನಮಗೆ ಯಾರ ಮೇಲೆ ಅನುಮಾನ ಇದೆ ಎಂಬುದನ್ನು ಪೊಲೀಸರಿಗೆ ವಿವರಿಸಿದ್ದೇವೆ ಎಂದು ತಿಳಿಸಿದರು.------3ಕೆಆರ್ ಎಂಎನ್ 1.ಜೆಪಿಜಿಬಿಡದಿ ಪೊಲೀಸ್ ಠಾಣೆಗೆ ವಿಚಾರಣೆಗೆ ಆಗಮಿಸುತ್ತಿರುವ ರಿಕ್ಕಿ ರೈ