ಕಂದಾಯ ಉಪ ಗ್ರಾಮಗಳ ಹಕ್ಕು ಪತ್ರ ವಿತರಣೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಅರಸು ಕಾಲದಲ್ಲಿ ಉಳುವವನೇ ಭೂಮಿ ಒಡೆಯ. ಇದೀಗ ವಾಸಿಸುವವನೇ ಮನೆಯ ಒಡೆಯ. ಇವು ಕಾಂಗ್ರೆಸ್‌ ಸರ್ಕಾರ ಜನ ಸಾಮಾನ್ಯರಿಗೆ ನೀಡುತ್ತಿರುವ ಕೊಡುಗೆ ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ಹೇಳಿದರು.

ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಕಂದಾಯ ಉಪ ಗ್ರಾಮಗಳ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿ ಇಂದಿರಾ ಗಾಂಧಿ ಪ್ರಧಾನಿ, ದೇವರಾಜ ಅರಸ್‌ ಮುಖ್ಯಮಂತ್ರಿ ಆಗಿದ್ದಾಗ ಭೂಮಿ ಯಾರು ಉಳುಮೆ ಮಾಡುತ್ತಿದ್ದಾರೋ ಅವರಿಗೆ ಭೂಮಿ ಕೊಟ್ಟರು. ಕಳೆದ 35 ವರ್ಷಗಳಿಂದ ತುಂಬಾ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಆದರೆ, ಅವುಗಳಿಗೆ ಹಕ್ಕುಪತ್ರ ಅಥವಾ ಖಾತೆ ಇರಲಿಲ್ಲ.

ಹಾಗಾಗಿ, ಅಂತಹ ಮನೆಗಳಿಗೆ ಹಕ್ಕುಪತ್ರ ನೀಡಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಂದಿನ ಕಂದಾಯ ಸಚಿವ ಕೃಷ್ಣ ಭೈರೇಗೌಡ ತೀರ್ಮಾನಿಸಿ ಪ್ರಥಮ ಹಂತದಲ್ಲಿ ರಾಜ್ಯದಲ್ಲಿ ಒಂದು ಲಕ್ಷ ಹಕ್ಕುಪತ್ರಗಳನ್ನು ವಿತರಣೆಮಾಡಿದರು ಎಂದರು.ವಾಸಿಸುವವನೇ ಒಡೆಯ ಕಾರ್ಯಕ್ರಮದಡಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲೂ 500 ಹಕ್ಕುಪತ್ರಗಳನ್ನು ನೀಡ ಲಾಗಿದೆ. ಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇನಹಳ್ಳಿ, ಹಲಸಬಾಳು, ಹಾಲೆಹೊಳೆ, ನಿಂಗೇನ ಹಳ್ಳಿಯಲ್ಲಿ 94 ಡಿ ಕಂದಾಯ ಉಪ ಗ್ರಾಮಗಳ 209 ಜನರಿಗೆ ಹಕ್ಕುಪತ್ರವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.ಮಲ್ಲೇನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ₹2.25 ಕೋಟಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸುಮಾರು ₹40 ಲಕ್ಷ ವೆಚ್ಚದಲ್ಲಿ ಮಲ್ಲೇನಹಳ್ಳಿ ದೇವಾಲಯದ ರಸ್ತೆಯ ಮೋರಿ ನಿರ್ಮಾಣ ಹಾಗೂ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ.


ಸಿಆರ್‌ಐಎಫ್ ಯೋಜನೆಯಡಿ ₹6 ಕೋಟಿ ವೆಚ್ಚದಲ್ಲಿ ಹೆಬ್ಬಳ್ಳಿಯಿಂದ ಮಲ್ಲೇನಹಳ್ಳಿ, ಭಕ್ತರಹಳ್ಳಿ ಮುಖ್ಯರಸ್ತೆ ನಿರ್ಮಿಸಲಾಗಿದೆ. ಅಭಿವೃದ್ಧಿಯಲ್ಲೂ ರಾಜ್ಯ ಸರ್ಕಾರ ಹಿಂದೆ ಬಿದ್ದಿಲ್ಲ. ಜನರ ಬದುಕನ್ನು ಕಟ್ಟಿ ಕೊಡುವುದರಲ್ಲೂ ಹಿಂದೆ ಬಿದ್ದಿಲ್ಲ ಎಂದರು.ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಉಚಿತ ಊಟ, ಸಮವಸ್ತ್ರ ಇತರೆ ಸವಲತ್ತು ನೀಡುತ್ತಿದೆ. ಇದರ ಸದುಪಯೋಗ ಪಡೆಯಬೇಕೆಂದು ಕರೆ ನೀಡಿದರು.ಚಿಕ್ಕಮಗಳೂರು ತಹಸೀಲ್ದಾರ್ ರೇಷ್ಮಾ ಶೆಟ್ಟಿ, ಮಲ್ಲೇನಹಳ್ಳಿ ಗ್ರಾಪಂ ಪಿಡಿಒ ಸುಶ್ಮಿತಾ ಗೌಡ, ತಾಪಂ ಸಹಾಯಕ ನಿರ್ದೇಶಕ ಪರಮೇಶ್, ಅಶೋಕ್, ಪ್ರವೀಣ್ ಉಪಸ್ಥಿತರಿದ್ದರು.

ಫೋಟೋಚಿಕ್ಕಮಗಳೂರುತಾಲೂಕಿನ ಮಲ್ಲೇನಹಳ್ಳಿಯ ಸಮುದಾಯ ಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕಂದಾಯ ಉಪ ಗ್ರಾಮಗಳ ಹಕ್ಕುಪತ್ರಗಳನ್ನು ಶಾಸಕ ಎಚ್.ಡಿ. ತಮ್ಮಯ್ಯ ವಿತರಿಸಿದರು. ತಹಸೀಲ್ದಾರ್ ರೇಷ್ಮಾ ಶೆಟ್ಟಿ ಹಾಗೂ ಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಸುಶ್ಮಿತಾ ಗೌಡ ಮೊದಲಾದವರಿದ್ದರು.