ಸಾರಾಂಶ
ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಪ್ರಯತ್ನಿಸಿದ ದೇಶದ 20 ನಗರ ಪಾಲಿಕೆಗಳನ್ನು ಗೌರವಿಸಲಾಯಿತು
ಹುಬ್ಬಳ್ಳಿ: ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಾಣ ಮಾಡಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾರ್ಯ ಇದೀಗ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಕೇಂದ್ರ ಸರ್ಕಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಇದಕ್ಕಾಗಿ ಪಾಲಿಕೆಯನ್ನು ಗೌರವಿಸಿದೆ.
ನವದೆಹಲಿಯ ಭಾರತ ಮಂಟಪದಲ್ಲಿ ಕೇಂದ್ರದ ಪರಿಸರ, ಅರಣ್ಯ ಹಾಗೂ ಜೀವಿಶಾಸ್ತ್ರ ಇಲಾಖೆ ಹಾಗೂ ಪರಿಸರ ಮಾಲಿನ್ಯ ಮಂಡಳಿಯಿಂದ ಒನ್ ನೇಷನ್, ಒನ್ ಮಿಷನ್; ಎಂಡ್ ಪ್ಲಾಸ್ಟಿಕ್ ಪೋಲೂಶನ್ ಎಂಬ ಘೋಷವಾಕ್ಯದೊಂದಿಗೆ ಪರಿಸರ ದಿನವನ್ನು ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಪ್ರಯತ್ನಿಸಿದ ದೇಶದ 20 ನಗರ ಪಾಲಿಕೆಗಳನ್ನು ಗೌರವಿಸಲಾಯಿತು. ಜತೆಗೆ ಆ ನಗರ ಪಾಲಿಕೆಗಳು ಪ್ಲಾಸ್ಟಿಕ್ ಮುಕ್ತಗೊಳಿಸಲು ಏನೇನು ಕ್ರಮ ಕೈಗೊಂಡಿವೆ ಎಂಬುದನ್ನು ತಿಳಿಸಲು ಮಳಿಗೆಗಳನ್ನು ಅಳವಡಿಸಲು ಅವಕಾಶಕಲ್ಪಿಸಿತ್ತು. ಜತೆಗೆ ಆ ಬಗ್ಗೆ ಮಾಹಿತಿ ನೀಡಲು ಚರ್ಚಾ ಕೂಟ ಆಯೋಜಿಸಲಾಗಿತ್ತು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೂ ಇಲ್ಲಿನ ಲಿಂಗರಾಜನಗರದಲ್ಲಿ ಪ್ಲಾಸ್ಟಿಕ್ ತ್ಯಾಜ್ ಬಳಸಿ 1.1 ಕಿಮೀ ರಸ್ತೆಯನ್ನು ನಿರ್ಮಿಸಿದೆ. ಈ ಮೂಲಕ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಮೊದಲು ಹೆಜ್ಜೆ ಇಟ್ಟಿದೆ. ಇದು ರಾಷ್ಟ್ರಮಟ್ಟದಲ್ಲಿ ಗಮನಸೆಳೆದಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯನ್ನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿತ್ತು. ಮೇಯರ್ ರಾಮಪ್ಪ ಬಡಿಗೇರ, ಆಯುಕ್ತ ರುದ್ರೇಶ ಘಾಳಿ, ಹೆಚ್ಚುವರಿ ಆಯುಕ್ತ ವಿಜಯಕುಮಾರ ಪಾಲಿಕೆ ಪರವಾಗಿ ಭಾಗವಹಿಸಿ ಗೌರವ ಸ್ವೀಕರಿಸಿದರು. ಮಳಿಗೆಯನ್ನು ಅಳವಡಿಸಿ ಮಾಹಿತಿಯನ್ನೂ ನೀಡಿದರು. ಜತೆಗೆ ಚರ್ಚಾಕೂಟದಲ್ಲಿ ಪಾಲ್ಗೊಂಡಿದ್ದರು.