ರಸ್ತೆ ಗುಂಡಿಗಳು ಪ್ರಯಾಣಿಕರ ಪಾಲಿನ ಕುಣಿ

| Published : Sep 25 2025, 01:01 AM IST

ಸಾರಾಂಶ

ರಸ್ತೆ ಗುಂಡಿ, ಸಂಚಾರಿಗಳ ಪಾಲಿಗೆ ಯಮಪಾಶಗಳಾಗಿವೆ. ರಸ್ತೆ ಅಭಿವೃದ್ಧಿ ಸ್ಥಳೀಯ ಶಾಸಕರು ಮರೆತಿದ್ದಾರೆ

ಕುಕನೂರು: ರಸ್ತೆ ದುರಸ್ತೆಗೊಳಿಸಿ ಜನರ ಜೀವ ಉಳಿಸಲು ಒತ್ತಾಯಿಸಿ ಪಟ್ಟಣದ ಗುದ್ನೆಪ್ಪನಮಠದ ನವೋದಯ ವಿದ್ಯಾಲಯ ಶಾಲೆ ಹತ್ತಿರ ಯಲಬುರ್ಗಾ ಬಿಜೆಪಿ ಮಂಡಲ ಹಾಗೂ ಜೆಡಿಎಸ್ ವತಿಯಿಂದ ರಸ್ತೆ ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಯಲಬುರ್ಗಾ ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ಯಲಬುರ್ಗಾ ಕ್ಷೇತ್ರದಲ್ಲಿ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಇವುಗಳು ಸಂಚಾರಿಗಳ ಪ್ರಾಣ ತೆಗೆದುಕೊಳ್ಳುತ್ತಿವೆ. ಕಳೆದ ಕೆಲವು ದಿನಗಳ ಹಿಂದೆ ಯಡಿಯಾಪೂರ ಬಳಿ ಇಬ್ಬರು ಬೈಕ್ ಸವಾರರು ಬಿದ್ದು ಅನಾಹುತಕ್ಕೆ ಗುರಿಯಾಗಿದ್ದಾರೆ. ಕ್ಷೇತ್ರದಲ್ಲಿನ ರಸ್ತೆಗಳ ಮೇಲೆ ಬಿದ್ದಿರುವ ಗುಂಡಿಗಳು ಪ್ರಯಾಣಿಕರ ಪಾಲಿನ ಕುಣಿಗಳಾಗಿವೆ ಎಂದರು.

ಮಾಜಿ ಸಚಿವ ಹಾಲಪ್ಪ ಆಚಾರ್ ತಹಸೀಲ್ದಾರ್‌ ಕಚೇರಿಗೆ ಮಂಜೂರು ಮಾಡಿಸಿದ 18 ಎಕರೆ ಜಮೀನು ರದ್ದು ಮಾಡಿ, ಗುದ್ನೆಪ್ಪನಮಠದ ಜಾಗವನ್ನು ಶಾಸಕ ಬಸವರಾಜ ರಾಯರಡ್ಡಿ ಕಬಳಿಕೆಗೆ ಯತ್ನಿಸಿದ್ದಾರೆ. ಕ್ಷೇತ್ರದಲ್ಲಿ ದನಕರು ಓಡಾಡದಂತಹ ರಸ್ತೆಗಳಿವೆ. ಕ್ಷೇತ್ರವನ್ನು ರಾಯರಡ್ಡಿ ಅವರು ಸಿಂಗಾಪೂರ್ ಮಾಡುತ್ತೇವೆ ಎಂದು ಹೇಳಿ ಜನರನ್ನು ಮರಳು ಮಾಡಿ ಅಭಿವೃದ್ಧಿ ಮರೆತಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್ ವಕ್ತಾರ ಮಲ್ಲನಗೌಡ ಕೋನನಗೌಡ್ರು ಮಾತನಾಡಿ, ರಸ್ತೆ ಗುಂಡಿ, ಸಂಚಾರಿಗಳ ಪಾಲಿಗೆ ಯಮಪಾಶಗಳಾಗಿವೆ. ರಸ್ತೆ ಅಭಿವೃದ್ಧಿ ಸ್ಥಳೀಯ ಶಾಸಕರು ಮರೆತಿದ್ದಾರೆ. ಗುದ್ನೆಪ್ಪನಮಠದ ದೇವಸ್ಥಾನದ ಭೂಮಿಯನ್ನು ಶಾಸಕ ರಾಯರೆಡ್ಡಿ ಅವರು ತಾಲೂಕಾಡಳಿತ ಕಚೇರಿಗೆ ನೀಡಲು ಮುಂದಾಗಿರುವುದು ಜನರಿಗೆ ಮಾಡುತ್ತಿರುವ ಅನ್ಯಾಯದ ಪ್ರತೀಕ. 2028 ರಲ್ಲಿ ಶಾಸಕ ರಾಯರಡ್ಡಿ ಅವರಿಗೆ ಸೋಲು ಖಚಿತ ಎಂದರು.

ಬನ್ನಿಕೊಪ್ಪ ಗ್ರಾಪಂ ಅಧ್ಯಕ್ಷ ನಾಗರಾಜ ವೆಂಕಟಾಪುರ ಮಾತನಾಡಿ, ಡಿಕೆಶಿ ತಮ್ಮ ತಾಟಿನಲ್ಲಿ ಏನು ಬಿದ್ದಿದೆ ಅಂತ ನೋಡ್ಬೇಕು, ಪಿಎಂ ನರೇಂದ್ರ ಮೋದಿ ಮನೆ ಮುಂದಿನ ರಸ್ತೆ ಗುಂಡಿ ಬಗ್ಗೆ ಮಾತನಾಡುತ್ತಾರಲ್ಲಾ, ಶೇ.60 ಕಮಿಷನ್ ಕೈ ಬಿಟ್ಟು ರಸ್ತೆ ಮಾಡಿ ಎಂದರು.

ಮುಖಂಡ ಮಹಾಂತೇಶ ಹೂಗಾರ ಮಂಜುನಾಥ ನಾಡಗೌಡ ಮಾತನಾಡಿದರು. ಈ ವೇಳೆ ಬಿಜೆಪಿ ಮುಖಂಡರಾದ ಅನಿಲ್ ಆಚಾರ್, ಪ್ರಕಾಶ ತಹಸೀಲ್ದಾರ್, ಕರಬಸಯ್ಯ ಬಿನ್ನಾಳ, ಸಿದ್ಲಿಂಗಯ್ಯ ಬಂಡಿ, ಪಪಂ ಸದಸ್ಯರಾದ ಶಿವರಾಜಗೌಡ, ಸಿದ್ಲಿಂಗಯ್ಯ ಉಳ್ಳಾಗಡ್ಡಿ, ಜಗನ್ನಾಥ ಭೋವಿ, ಲಕ್ಷ್ಮಣ ಕಾಳಿ, ಜಗದೀಶ್ ಸೂಡಿ, ಪ್ರಕಾಶ ಭೋರಣ್ಣನವರ್, ವಿನಾಯಕ ಯಾಳಗಿ, ಪ್ರಶಾಂತ ಕರುಗಲ್ಲ, ವಿರೇಶ ಸಬರದ, ಬಸವರಾಜ ಹಾಳಕೇರಿ, ಕುಮಾರ ಬಳಗೇರಿ, ಪ್ರಕಾಶ ಹಿರೇಮನಿ, ವಿನಯ್ ಸರಗಣೇಚಾರ, ಶರಣಯ್ಯ ಹುಣಸಿನಮರದ, ನಾಗಯ್ಯ, ಮಹಾಂತೇಶ ಹೂಗಾರ, ಮಲ್ಲಿಕಾರ್ಜುನ ಗೊರ್ಲೆಕೊಪ್ಪ, ಹನುಮಂತಪ್ಪ ಬನ್ನಿಕೊಪ್ಪ, ದೇವಪ್ಪ ಮನ್ನಾಪೂರ, ಪ್ರವೀಣ್ ಬೀಡಿನಾಳ, ಮಂಜುನಾಥ ನಾಡಗೌಡರ್, ಕನಕಪ್ಪ ಬ್ಯಾಡರ್, ಸಂಗಯ್ಯ ಬಂಡಿ, ಮಂಜುನಾಥ ಚನ್ನಪ್ಪನಹಳ್ಳಿ ಇತರರಿದ್ದರು.