ಈ ಭಾಗದ ಜನರ ಬಹುದಿನದ ಬೇಡಿಕೆ ಈಡೇರಿಕೆಗೆ ₹4 ಕೋಟಿ ಅನುದಾನ ಈಗಾಗಲೇ ರಸ್ತೆ ಕಾಮಗಾರಿಗೆ ನೀಡಲಾಗಿದೆ
ಕೊಪ್ಪಳ: ಜಿಲ್ಲಾ ಕೇಂದ್ರ ಕೊಪ್ಪಳ ನಗರಕ್ಕೆ ಹೊಂದಿಕೊಂಡಿರುವ ಭಾಗ್ಯನಗರ ಪಟ್ಟಣದ ಓಜಿನಹಳ್ಳಿ ಕ್ರಾಸ್ನಿಂದ ಗಣೇಶ ನಗರದವರೆಗೆ ನಿರ್ಮಿಸಲಾಗುತ್ತಿರುವ ರಸ್ತೆ ಕಾಮಗಾರಿ ಆದಷ್ಟು ಬೇಗನೆ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಭರವಸೆ ನೀಡಿದ್ದಾರೆ.
ನೂತನ ರಸ್ತೆ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ಗುರುವಾರ ಪರಿಶೀಲಿಸಿದ ಬಳಿಕ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಈಗ ಕೈಗೆತ್ತಿಕೊಳ್ಳಲಾಗಿರುವ ಈ ರಸ್ತೆ ಒಟ್ಟು 891 ಮೀಟರ್ ಉದ್ದ, 60 ಅಗಲವಿದ್ದು, ರಸ್ತೆಗೆ ಡಾಂಬರ್ ರಸ್ತೆಯನ್ನಾಗಿ ಮಾಡಲಾಗುತ್ತದೆ. ಎರಡು ಬದಿಯಲ್ಲಿ ಚರಂಡಿ, ಸಮರ್ಪಕ ಬೀದಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗುತ್ತದೆ. ಈ ಭಾಗದ ಜನರ ಬಹುದಿನದ ಬೇಡಿಕೆ ಈಡೇರಿಕೆಗೆ ₹4 ಕೋಟಿ ಅನುದಾನ ಈಗಾಗಲೇ ರಸ್ತೆ ಕಾಮಗಾರಿಗೆ ನೀಡಲಾಗಿದೆ. ಇನ್ನೂ ₹1 ಕೋಟಿ ಅನುದಾನದ ಅವಶ್ಯಕತೆ ಇದ್ದು, ಬರುವ ಏಪ್ರಿಲ್ ನಲ್ಲಿ ಅನುದಾನ ಒದಗಿಸುವ ಮೂಲಕ ಕಾಮಗಾರಿ ಪೂರ್ಣಗೊಳಿಸಲು ಎಲ್ಲ ರೀತಿಯಾಗಿ ಸಹಕಾರ ನೀಡಲಾಗುತ್ತದೆ. ಈ ರಸ್ತೆ ಕಾಮಗಾರಿ ಪೂರ್ಣಗೊಂಡರೇ ಭಾಗ್ಯನಗರ, ಓಜಿನಹಳ್ಳಿ ನಾಗರಿಕರಿಗೆ ನೇರವಾಗಿ ಕೊಪ್ಪಳ ಸಂಪರ್ಕಿಸಲು ಅನುಕೂಲವಾಗುತ್ತದೆ. ಗಣೇಶ ನಗರ ಪ್ರದೇಶದ ನಿವಾಸಿಗಳ ಓಡಾಟಕ್ಕೂ ಅನುಕೂಲವಾಗಲಿದೆ ಎಂದರು.ಓಜಿನಹಳ್ಳಿ ಕ್ರಾಸ್ನಿಂದ ಈ ರಸ್ತೆಯ ಕೊನೆ ಭಾಗದಲ್ಲಿ ಈಗಾಗಲೇ ರೇಲ್ವೆ ಕೇಳ ಸೇತುವೆ ನಿರ್ಮಿಸಲಾಗಿದೆ. ಅಲ್ಲಿ ರಸ್ತೆ ನಿರ್ಮಾಣಕ್ಕೆ ಎರಡೂ ಬದಿಯಲ್ಲಿ ಭೂ ಸ್ವಾಧೀನವಾಗಬೇಕಿದೆ. ಕೆಲವರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ಸಮಸ್ಯೆಯಾಗಿದ್ದು ಈ ಕುರಿತು ಸಂಸದರೊಂದಿಗೆ ಮಾತನಾಡಿ ಸಮಸ್ಯೆ ಸರಿಪಡಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಇದಾದ ಬಳಿಕ ಕೊಪ್ಪಳ ನಗರದ ಲೇಬರ್ ಸರ್ಕಲ್ನಿಂದ ಭಾಗ್ಯನಗರ ಪಟ್ಟಣದ ಅಂಬೇಡ್ಕರ್ ಸರ್ಕಲ್ವರೆಗೆ ಹೊಂದಿಕೊಂಡಿರುವ ಮುಖ್ಯರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಈ ಕಾಮಗಾರಿಗೆ ಸಂಬಂಧಿಸಿದ ಯೋಜನಾ ವರದಿ ಈಗಾಗಲೇ ಸಿದ್ದಪಡಿಸಲಾಗಿದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಭಾಗ್ಯನಗರ ಪಪಂ ಅಧ್ಯಕ್ಷ ರಮೇಶ ಹ್ಯಾಟಿ, ಸದಸ್ಯ ಜಗದೀಶ ಮಾಲಗಿತ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಪಪಂ ಮುಖ್ಯಾಧಿಕಾರಿ ಸುರೇಶ ಬಬಲಾದ, ಕೊಪ್ಪಳ ನಗರಸಭೆ ಪೌರಾಯುಕ್ತ ವೆಂಕಟೇಶ ನಾಗನೂರು, ನಗರಸಭೆ ಜೆಇ ಸೋಮು, ಲೋಕೋಪಯೋಗಿ, ಕೆಆರ್ಐಡಿಎಲ್ ಅಧಿಕಾರಿಗಳು,ಪಪಂ ಸದಸ್ಯರು ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.