ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬೆಂಗಳೂರು ಬನ್ನೇರುಘಟ್ಟರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ರೋಬೋಟಿಕ್ ಸಹಾಯದೊಂದಿಗೆ ನಡೆಸಿದ ಕೀಲು ಬದಲಿ ಶಸ್ತ್ರಚಿಕಿತ್ಸೆಯಲ್ಲಿ ಶಿವಮೊಗ್ಗದ ಇಬ್ಬರು ರೋಗಿಗಳಿಗೆ ಹೊಸ ಜೀವನ ನೀಡಿದೆ ಎಂದು ಆಸ್ಪತ್ರೆಯ ಮೂಳೆ ಮತ್ತು ಕೀಲು ಬದಲಿ ಶಸ್ತ್ರಚಿಕಿತ್ಸಾ ವಿಭಾಗದ ಹಿರಿಯ ನಿರ್ದೇಶಕ ಡಾ. ಮೋಹನ್ ಪುಟ್ಟಸ್ವಾಮಿ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾವತಿಯ ಪ್ರವೀಣ್ ಕುಮಾರ್ ಅವರು 20 ವರ್ಷಗಳಿಂದ ಗಾಲಿಕುರ್ಚಿಗೆ ಸೀಮಿತವಾಗಿದ್ದರು. ಎರಡೂ ಮೊಣಕಾಲುಗಳಲ್ಲಿ ತೀವ್ರ ಮೊಣಕಾಲು ಕೀಲು ನೋವಿನಿಂದ ಬಳಲುತ್ತಿದ್ದರು. ಇದೊಂದು ಅಪರೂಪದ ಪ್ರಕರಣವಾಗಿತ್ತು. ಅವರು ಎಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿ ಕೊನೆಗೆ ನಮ್ಮನ್ನು ಸಂಪರ್ಕಿಸಿದರು. ನಮ್ಮ ಆಸ್ಪತ್ರೆಯ ವೈದ್ಯರ ತಂಡ ಅವರ ಎರಡು ಮೊಣಕಾಲುಗಳಿಗೆ ರೋಬೊಟ್ ಆಧಾರಿತ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ. ಈಗ ಅವರು ಯಾರ ಸಹಾಯವಿಲ್ಲದೆ ಸ್ವತಂತ್ರವಾಗಿ ನಡೆಯುತ್ತಿದ್ದಾರೆ. ಇದು ಫೋರ್ಟಿಸ್ ಆಸ್ಪತ್ರೆಯ ಹೆಮ್ಮೆಯಾಗಿದೆ ಎಂದರು.
ಇವರ ಜೊತೆಗೆ ದಿಲೀಪ್ ಹಾಗೂ ಶಹೀದಾ ಎಂಬುವರಿಗೂ ರೋಬೋಟ್ ಆಧಾರಿತದಲ್ಲಿಯೇ ಶಸ್ತ್ರಚಿಕಿತ್ಸೆ ನಡೆಸಿದ್ದು, ಇವರಿಬ್ಬರು ಕೂಡ ಗುಣಮುಖರಾಗಿದ್ದಾರೆ ಎಂದರು.ಈ ಶಸ್ತ್ರಚಿಕಿತ್ಸೆಯಲ್ಲಿ ಅಂಟೆರೋಲಾಟರಲ್ ಅಪ್ರೋಚ್ ಎಂಬ ಅತ್ಯಾಧುನಿಕ ವಿಧಾನವನ್ನು ರೋಬೋಟಿಕ್ ತಂತ್ರಜ್ಞಾನದೊಂದಿಗೆ ಬಳಸಲಾಗಿದೆ. ಇದರಿಂದ ಶಸ್ತ್ರಚಿಕಿತ್ಸೆಯ ನಂತರ ಬೇಗ ಚೇತರಿಸಿಕೊಳ್ಳಲು, ಶಸ್ತ್ರಚಿಕಿತ್ಸಾ ನಂತರದ ನೋವು ಕಡಿಮೆ ಆಗಲು ಮತ್ತು ಆಸ್ಪತ್ರೆಯಲ್ಲಿ ಕಡಿಮೆ ದಿನ ಇರಲು ಸಾಧ್ಯವಾಗುತ್ತದೆ. ರೋಬೋಟಿಕ್ ತಂತ್ರಜ್ಞಾನವು ಶಸ್ತ್ರಚಿಕಿತ್ಸೆಯನ್ನು ಹೆಚ್ಚು ನಿಖರವಾಗಿ ಮಾಡಲು ಮತ್ತು ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಆಪರೇಶನ್ ಮಾಡಿಸಿಕೊಂಡ ಅನುಭವವನ್ನು ಹಂಚಿಕೊಂಡ ಪ್ರವೀಣ್ಕುಮಾರ್ ಮತ್ತು ದಿಲೀಪ್ ಅವರು, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಸೇವೆಗೆ ಕೃತಜ್ಞತೆ ಅರ್ಪಿಸಿದರು. ರೋಬೋಟಿಕ್ ತಂತ್ರಜ್ಞಾನದಿಂದ ತಮಗೆ ಹೊಸ ಜೀವನ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು..
ಗೋಷ್ಠಿಯಲ್ಲಿ ಆಸ್ಪತ್ರೆಯ ರಾಜೀವ್ ರಂಜನ್, ಮೋಹನ್ ಬಂಗಾರಪ್ಪ ಇದ್ದರು.
