ಮನೆಗಳ ಮೇಲೆ ಉರುಳಿದ ಬಂಡೆ: ಐವರಿಗೆ ಗಾಯ

| Published : Oct 25 2024, 12:53 AM IST

ಸಾರಾಂಶ

ರಾಮನಗರ: ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ನಗರದ ಯಾರಬ್ ನಗರದ ಗೆಜ್ಜಲಗುಡ್ಡೆಯಲ್ಲಿ ಗುರುವಾರ ಬೆಳಗಿನ ಜಾವ 3 ಗಂಟೆಗೆ ಬಂಡೆಯೊಂದು ಉರುಳಿ ಮನೆಗಳಿಗೆ ಅಪ್ಪಳಿಸಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ.

ರಾಮನಗರ: ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ನಗರದ ಯಾರಬ್ ನಗರದ ಗೆಜ್ಜಲಗುಡ್ಡೆಯಲ್ಲಿ ಗುರುವಾರ ಬೆಳಗಿನ ಜಾವ 3 ಗಂಟೆಗೆ ಬಂಡೆಯೊಂದು ಉರುಳಿ ಮನೆಗಳಿಗೆ ಅಪ್ಪಳಿಸಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ.

ಘಟನೆಯಿಂದಾಗಿ ಮಹಮ್ಮದ್ ಗೌಸ್ ಅವರ ಕುಟುಂಬದ ಐವರಿಗೆ ತೀವ್ರ ಗಾಯಗಳಾಗಿವೆ. ಸೈಯದ್ ಗೌಸ್ (42) ಪತ್ನಿ ತಹಸಿನ್ ತಾಜ್ (32), ಮಕ್ಕಳಾದ ಸೈಯದ್ ಶರ್ಮಾನ್ (14), ಸೈಯದ್ ಹಾಕಿಲ್ (7), ಸೈಯದ್ ಕಬೀರ್ (10) ಗಾಯಗೊಂಡವರು.

ಜಿಲ್ಲಾಸ್ಪತ್ರೆಗೆ ದಾಖಲು:

ಧಾರಾಕಾರ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಗಾಯಾಳುಗಳನ್ನು ಬೆಳಗ್ಗೆ 6 ಗಂಟೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಇದರಲ್ಲಿ ಸೈಯದ್ ಕಬೀರ್‌ಗೆ ಕಿವಿ ಭಾಗಕ್ಕೆ ಗಾಯವಾಗಿದ್ದು ಒಳ ರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಗೌಸ್ ಅವರ ಪತ್ನಿ ಹಾಗೂ ಉಳಿದ ಮಕ್ಕಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಬುಧವಾರ ರಾತ್ರಿ 8 ಗಂಟೆಗೆ ಆರಂಭವಾದ ಮಳೆ ತಡರಾತ್ರಿ ತನಕ ಮುಂದುವರೆದಿತು. ಇಡೀ ರಾತ್ರಿ ಸುರಿದ ಮಳೆಯಿಂದಾಗಿ ರಾಮನಗರದ ಯಾರಬ್ ನಗರದ ಗೆಜ್ಜಲಗುಡ್ಡೆ ಪ್ರದೇಶದಲ್ಲಿ ಬೆಳಿಗ್ಗೆ 3 ಗಂಟೆ ಸುಮಾರಿಗೆ ಗೌಸ್ ಮನೆಯ ಮೇಲ್ಭಾಗದಲ್ಲಿರುವ ಬಂಡೆ ಪಕ್ಕಕ್ಕೆ ಜಾರಿ ಗೋಡೆಗೆ ಅಪ್ಪಳಿಸಿದೆ. ಅದರ ರಸಭಕ್ಕೆ ಗೋಡೆ ಕುಸಿದು ಮನೆಯೊಳಗೆ ಮಲಗಿದ್ದವರ ಮೇಲೆ ಬಿದ್ದಿದೆ. ಗೌಸ್ ಅವರ ಮನೆ ಸೇರಿ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ. ಇನ್ನು ಬಂಡೆ ಉರಳಿದ ರಭಸದಿಂದ ಗೌಸ್ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳೂ ಹಾನಿಯಾಗಿದೆ

ಬಾಕ್ಸ್‌.............

ಗಾಯಾಳುಗಳ ಆರೋಗ್ಯ ವಿಚಾರಿಸಿದ ಶಾಸಕ ಇಕ್ಬಾಲ್

ರಾಮನಗರ: ನಗರದ ಯಾರಬ್‌ನಗರ (ಗೆಜ್ಜಲಗುಡ್ಡೆ) ಪ್ರದೇಶದಲ್ಲಿ ಮಳೆಯಿಂದ ಬಂಡೆ ಉರುಳಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಶಾಸಕ ಇಕ್ಬಾಲ್‌ಹುಸೇನ್ ಗುರುವಾರ ಮಧ್ಯಾಹ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಈ ವೇಳೆ ಮಾತನಾಡಿದ ಇಕ್ಬಾಲ್ ಹುಸೇನ್, ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಅದರಂತೆ ಸ್ಥಳಕ್ಕೆ ಪೊಲೀಸ್ ಮತ್ತು ನಗರಸಭೆ ಪೌರಾಯುಕ್ತರು ಹಾಗೂ ತಹಸೀಲ್ದಾರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲು ಕ್ರಮ ವಹಿಸುತ್ತೇನೆ ಎಂದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಮಂಜುನಾಥ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್, ಡಾ.ನಾರಾಯಣಸ್ವಾಮಿ, ನಗರಸಭೆ ಸದಸ್ಯರಾದ ಅಸ್ಮತ್, ಆಯಿಷಾಬಾನು, ಮುಖಂಡರಾದ ವಾಸು, ಅನಿಲ್ ಜೋಗೇಂದರ್, ಜಗದೀಶ್, ವಸೀಂ, ರವಿ, ಬಾಲು, ವೆಂಕಟೇಶ್, ಸಂದೀಪ್, ಅತಾವುಲ್ಲಾ ಇತರರು ಹಾಜರಿದ್ದರು.

24ಕೆಆರ್ ಎಂಎನ್ 7.ಜೆಪಿಜಿಗೆಜ್ಜಲಗುಡ್ಡೆಯಲ್ಲಿ ಬಂಡೆ ಮನೆ ಮೇಲೆ ಉರುಳಿರುವುದು.