ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಅವಮಾನಕ್ಕೆ ಕುಗ್ಗದ ಅಂಬೇಡ್ಕರ್ ಅವರು ಸಮ ಸಮಾಜಕ್ಕಾಗಿ ಹೋರಾಟ ನಡಸಿದ್ದಾಗಿ ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಹೇಳಿದರು.ನಗರದ ಜೆ.ಎಲ್.ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನ, ಕರ್ನಾಟಕ ವಿಕಾಸ ವಾಹಿನಿ ಮತ್ತು ಸೌಹಾರ್ಧ ಬೀಡು ಸೇವಾ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ತತ್ತ್ವ ಸಿದ್ಧಾಂತ ಮತ್ತು ಸಂವಿಧಾನದ ಮಹತ್ವ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಅಂಬೇಡ್ಕರ್ ಅವರ ವಿಚಾರಗಳನ್ನು ಅಳವಡಿಸಿಕೊಂಡಾಗ ಮಾತ್ರ ಬದಲಾವಣೆ ಸಾಧ್ಯ. ವಿಚಾರಧಾರೆಗಳು ಮಾತಿಗಷ್ಟೇ ಸೀಮಿತವಾಗಬಾರದು. ಅವರು ಎಷ್ಟೇ ನೋವು ಅನುಭವಿಸಿದರೂ ಕುಗ್ಗದೆ ಗುರಿ ಸಾಧಿಸಲು ಮುಂದಾಗಿ ಸಮ ಸಮಾಜದ ನಿರ್ಮಾಣಕ್ಕೆ ಹೋರಾಟ ನಡೆಸಿದ್ದಾಗಿ ಹೇಳಿದರು.ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಒಂದು ಸಮುದಾಯ ಬಹಳ ನೋವು ಕೊಟ್ಟಿತು. ಆದರೂ ಆ ಜನಾಂಗದ ವಿರುದ್ಧ ಅವರು ದ್ವೇಷ ಸಾಧಿಸಲಿಲ್ಲ. ಈಗ ಮೇಲ್ವರ್ಗದವರಿಗೂ ಅವರ ವಿಚಾರಧಾರೆಗಳ ಅರಿವಾಗುತ್ತಿದೆ. ಸಂವಿಧಾನವನ್ನು ಯಾವುದೇ ಜಾತಿ- ಧರ್ಮದ ಮೇಲೆ ದ್ವೇಷವಿಲ್ಲದೆ ಸಮಾನತೆ ಆಶಯದೊಡನೆ ರಚಿಸಿದ್ದಾರೆ. ಹೀಗಾಗಿ ವಿವಿಧೆತೆಯಲ್ಲಿ ಏಕತೆ ಸಾಧಿಸಿರುವ ಬಹುಭಾಷೆ, ಬಹು ಸಂಸ್ಕೃತಿಯನ್ನು ಒಳಗೊಂಡ ಸುಂದರ ದೇಶ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದರು.ಇದೇ ವೇಳೆ ವಿಶ್ವಜ್ಞಾನ ಅವಲೋಕನ ಮಹಾ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಓಲೆ ಮಹದೇವ್, ದಸಂಸ ನವ ನಿರ್ಮಾಣ ವೇದಿಕೆಯ ಹರಿಹರ ಆನಂದಸ್ವಾಮಿ, ಸಂಸ್ಕೃತಿ ಚಿಂತಕ ಕೆ. ರಘುರಾಮ್ ವಾಜಪೇಯಿ, ಸೋಮಯ್ಯ ಮಲೆಯೂರು, ಮರದೂರು ಸಿದ್ದರಾಜು, ಡೀಡ್ ಸಂಸ್ಥೆಯ ಸಂಸ್ಥಾಪಕ ಡಾ.ಎಸ್. ಶ್ರೀಕಾಂತ್ , ಲೇಖಕ ಸಿದ್ದಸ್ವಾಮಿ, ವೆಂಕಟರಮಣ ಸ್ವಾಮಿ , ಡಿ. ಜಗನ್ನಾಥ್, ಸ್ಟಿಫನ್, ಪೂರೀಗಾಲಿ ಮರಡೇಶಮೂರ್ತಿ ಇದ್ದರು.