ಸಾರಾಂಶ
ಕಂಪನಿಯಿಂದಾದ 33 ಕೋಟಿ ರು. ನಷ್ಟದ ಮಾಹಿತಿ ಸರ್ಕಾರಕ್ಕೆ ರವಾನೆ । ಕರಾರಿನಂತೆ ನಷ್ಟದ ಬಾಬ್ತು ಸರಿದೂಗಿಸುವುದಕ್ಕೆ ಬದ್ಧ
ಕನ್ನಡಪ್ರಭ ವಾರ್ತೆ ಮಂಡ್ಯಕಳೆದ ಸಾಲಿನಲ್ಲಿ ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ನುರಿಸಿರುವ ಆರ್.ಬಿ.ಟೆಕ್ ಕಂಪನಿಯವರಿಗೆ 18 ಕೋಟಿ ರು.ಗಳನ್ನು ಮಾತ್ರ ಪಾವತಿಸಿರುವುದಾಗಿ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಸ್ಪಷ್ಟಪಡಿಸಿದರು.
ಕರಾರು ಒಪ್ಪಂದದಂತೆ ಪ್ರತಿ ಟನ್ಗೆ 900 ರು.ನಂತೆ 2.50 ಲಕ್ಷ ಮೆಟ್ರಿಕ್ ಟನ್ಗೆ 22.50 ಕೋಟಿ ರು. ಪಾವತಿಸಬೇಕಿತ್ತು. ಕಂಪನಿ 2 ಲಕ್ಷ ಟನ್ ಕಬ್ಬು ಅರೆದಿರುವುದರಿಂದ 18 ಕೋಟಿ ರು. ಪಾವತಿಸಿ 4.50 ಕೋಟಿ ರು. ಪಾವತಿ ಮಾಡಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.ಕಳೆದ ಹಂಗಾಮಿನಲ್ಲಿ ಆರ್.ಬಿ.ಟೆಕ್ ಕಂಪನಿಯಿಂದ ಮೈಷುಗರ್ಗೆ ಆದ 33 ಕೋಟಿ ರು. ನಷ್ಟದ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಬೇಕಿರುವುದು ನನ್ನ ಜವಾಬ್ದಾರಿ. ಕಂಪನಿಯು ಹಣ ಬಿಡುಗಡೆ ಮಾಡಿರುವ ವಿಚಾರದಲ್ಲಿ ಅಧಿಕಾರಿಗಳು ಲೋಪವೆಸಗಿರುವ ಬಗ್ಗೆಯೂ ಸರ್ಕಾರದ ಗಮನ ಸೆಳೆದಿದ್ದೇನೆ ಎಂದು ಹೇಳಿದರು.
ಕಾರ್ಖಾನೆಗೆ ನಷ್ಟ ಉಂಟುಮಾಡಿರುವ ಆರ್.ಬಿ.ಟೆಕ್ ಕಂಪನಿಯಿಂದಲೇ ಕಾರ್ಯಾಚರಣೆ ಮುಂದುವರಿಸುವುದು ಅನಿವಾರ್ಯವಾಗಿದೆ. ಮೈಷುಗರ್ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಕರೆದ ಟೆಂಡರ್ನಲ್ಲಿ ಆರ್.ಬಿ.ಟೆಕ್ ಕಂಪನಿಯೊಂದೇ ಭಾಗವಹಿಸುತ್ತಿದೆ. ಬೇರೆ ಯಾರೂ ಕಂಪನಿ ಮುನ್ನಡೆಸುವುದಕ್ಕೆ ಬಾರದ ಹಿನ್ನೆಲೆಯಲ್ಲಿ ಅವರನ್ನೇ ಕರಾರಿನಂತೆ ಮುಂದುವರಿಸಲಾಗುತ್ತಿದೆ ಎಂದರು.ಆರ್.ಬಿ.ಟೆಕ್ ಕಂಪನಿಯನ್ನು ಮುಂದುವರಿಸುವುದಕ್ಕೆ ಕಂಪನಿಯ ತಕರಾರು ಇದ್ದರೂ ಕಾನೂನು ವಿಭಾಗದವರು ಒಮ್ಮೆ ಈ ಹಂತದಲ್ಲಿ ಕಂಪನಿಯನ್ನು ತೆರವುಗೊಳಿಸಿದರೆ ಕಾನೂನಿನ ಮೊರೆ ಹೋಗಿ ಕಂಪನಿಯ 2025- 26ನೇ ಹಂಗಾಮಿಗೆ ತೊಂದರೆಯಾಗಬಹುದು ಎಂದಿದ್ದರಿಂದ ಆರ್.ಬಿ.ಟೆಕ್ ಕಂಪನಿಯಿಂದಲೇ ಜೂನ್ ಅಂತ್ಯಕ್ಕೆ ಆರಂಭ ಮಾಡುವುದಾಗಿ ಭರವಸೆ ನೀಡಿದರು.
2023- 24ನೇ ಸಾಲಿನಲ್ಲಿ ಆರ್.ಬಿ.ಟೆಕ್ ಕಂಪನಿಯಿಂದ ಮೈಷುಗರ್ಗೆ ಉಂಟಾಗಿರುವ ನಷ್ಟದ ಕುರಿತು ಹದಿನೈದು ದಿನಗಳೊಳಗೆ ಮಾಹಿತಿ ನೀಡಲಾಗುವುದು ಎಂದ ಅವರು, 2024- 25ನೇ ಸಾಲಿಗೆ ಬಿಬಿಎಂಪಿಗೆ ಕೊಡಬೇಕಿದ್ದ 6 ಕೋಟಿ ರು. ಆಸ್ತಿ ತೆರಿಗೆಯನ್ನು ಒಂದೇ ಕಂತಿನಲ್ಲಿ ಉಪಯೋಗ ಪಡೆದು 3.50 ಕೋಟಿ ರು. ನೀಡಿದ್ದೇವೆ. ಕೋ- ಜನ್ ಸಂಬಂಧ ಹೊಸ ರೋಟರಿ ಅಳವಡಿಸಲು 4 ಕೋಟಿ ರು., ಇಲಾಖೆಯ ಪ್ರಮಾಣದಲ್ಲಿ 4 ಮತ್ತು 5ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕಾರ್ಮಿಕರಿಗೆ ಸುಮಾರು 4 ಕೋಟಿ ರು. ಹಾಗೂ ಪ್ರಸಕ್ತ ಹಂಗಾಮಿಗೆ ಈಗಾಗಲೇ 6.50 ಕೋಟಿ ರು.ಗಳನ್ನು ಕಾರ್ಮಿಕರಿಗೆ ಮತ್ತು ಉಪಕರಣಗಳಿಗೆ ನೀಡಿದೆ. ಇವೆಲ್ಲವನ್ನೂ ಸರ್ಕಾರದ ಹಣಕಾಸಿನ ನೆರವಿಲ್ಲದೆ ನೀಡಿರುವುದಾಗಿ ವಿವರಿಸಿದರು.ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆಯನ್ನು ಸಮರ್ಥವಾಗಿ ಮುನ್ನಡೆಸುವುದರೊಂದಿಗೆ ಶೇ.8ರಷ್ಟು ಇಳುವರಿ ಬರುವಂತೆ ಕಾರ್ಯಾಚರಣೆ ನಡೆಸಲಾಗುವುದು. ಕಾರ್ಖಾನೆಗೆ ನಷ್ಟವಾಗದಂತೆ ಕ್ರಮ ಜರುಗಿಸಲು ಪೂರ್ವಭಾವಿಯಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದರು.
ಗೋಷ್ಠಿಯಲ್ಲಿ ರುದ್ರಪ್ಪ, ಸುಂಡಹಳ್ಳಿ ಮಂಜುನಾಥ್, ಅಪ್ಪಾಜಿಗೌಡ, ವಿಜಯ್ಕುಮಾರ್, ಕೃಷ್ಣಪ್ಪ ಇತರರಿದ್ದರು.