ಕೆಕೆಆರ್‌ಡಿಬಿಯಿಂದ ಹರಪನಹಳ್ಳಿಗೆ ₹68 ಕೋಟಿ ನಿಗದಿ: ಶಾಸಕಿ ಎಂ.ಪಿ. ಲತಾ

| Published : Sep 18 2024, 01:52 AM IST / Updated: Sep 18 2024, 01:53 AM IST

ಕೆಕೆಆರ್‌ಡಿಬಿಯಿಂದ ಹರಪನಹಳ್ಳಿಗೆ ₹68 ಕೋಟಿ ನಿಗದಿ: ಶಾಸಕಿ ಎಂ.ಪಿ. ಲತಾ
Share this Article
  • FB
  • TW
  • Linkdin
  • Email

ಸಾರಾಂಶ

ರು. 68 ಕೋಟಿಯಲ್ಲಿ ಹರಪನಹಳ್ಳಿ ತಾಲೂಕಿನ ಜಗಳೂರು ವಿಧಾನಸಭಾ ಕ್ಷೇತ್ರದ 7 ಗ್ರಾಮ ಪಂಚಾಯ್ತಿಗಳಿಗೆ ರು. 10 ಕೋಟಿ ಹಂಚಿಕೆಯಾಗಿದೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.

ಹರಪನಹಳ್ಳಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಈ ವರ್ಷ ಹರಪನಹಳ್ಳಿ ತಾಲೂಕಿಗೆ ₹68 ಕೋಟಿ ಅನುದಾನ ನಿಗದಿಯಾಗಿದೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

₹68 ಕೋಟಿಯಲ್ಲಿ ಹರಪನಹಳ್ಳಿ ತಾಲೂಕಿನ ಜಗಳೂರು ವಿಧಾನಸಭಾ ಕ್ಷೇತ್ರದ 7 ಗ್ರಾಮ ಪಂಚಾಯ್ತಿಗಳಿಗೆ ₹10 ಕೋಟಿ ಹಂಚಿಕೆಯಾಗಿದ್ದು, ಉಳಿದ ₹58 ಕೋಟಿ ಅನುದಾನ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ವಿನಿಯೋಗವಾಗುತ್ತದೆ ಎಂದು ಹೇಳಿದರು.ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನವನ್ನು ಶಾಲಾ ಕಟ್ಟಡ ನಿರ್ಮಾಣ, ದುರಸ್ತಿ, ಹಾಸ್ಟೆಲ್‌ ಕಟ್ಟಡಗಳ ದುರಸ್ತಿ, ಕೃಷಿ, ತೋಟಗಾರಿಕೆ, ಆರೋಗ್ಯ ಕ್ಷೇತ್ರ ಹಾಗೂ ರಸ್ತೆ ಅಭಿವೃದ್ಧಿಗೆ ಉಪಯೋಗಿಸಲಾಗುತ್ತದೆ. ಈ ಅನುದಾನವನ್ನು ಕ್ಷೇತ್ರದ ಎಲ್ಲ ಹಳ್ಳಿಗಳಿಗೂ ನೀಡುತ್ತಿದ್ದೇನೆ ಎಂದು ಅವರು ಹೇಳಿದರು.

ವಿಶ್ವಕರ್ಮ ದಿನಾಚರಣೆ ಕುರಿತು ಮಾತನಾಡಿದ ಶಾಸಕರು ವಿಶ್ವಕರ್ಮ ಅಭಿವೃದ್ಧಿ ನಿಗಮ ಹಾಗೂ ಕೇಂದ್ರ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಅನೇಕ ಸೌಲಭ್ಯಗಳಿವೆ. ಅವುಗಳ ಸದುಪಯೋಗ ಪಡಿಸಿಕೊಂಡು ಮುಖ್ಯ ವಾಹಿನಿಗೆ ಬರಬೇಕು ಎಂದು ವಿಶ್ವಕರ್ಮ ಸಮಾಜದವರಿಗೆ ಹೇಳಿದರು.

ಕಲ್ಯಾಣ ಕರ್ನಾಟಕದ ವಿಮೋಚನಾ ದಿನ ಕುರಿತು ಉಪನ್ಯಾಸ ನೀಡಿದ ಸಾಹಿತಿ ಇಸ್ಮಾಯಿಲ್‌ ಎಲಿಗಾರ, ಹೈದರಾಬಾದ್ ಕರ್ನಾಟಕ ವಿಮೋಚನೆ ಆಗಿದ್ದು ಎರಡನೇ ಸ್ವಾತಂತ್ರ್ಯವಾದಂತೆ. ಸರ್ದಾರ್ ವಲ್ಲಭಭಾಯಿ ಪಟೇಲ್‌ ಅವರ ದಿಟ್ಟ ನಿರ್ಧಾರದಿಂದ ನಾವು ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾದೆವು. ಹರಪನಹಳ್ಳಿ ತಾಲೂಕನ್ನು ಹೈದರಾಬಾದ್ ಕರ್ನಾಟಕದ 371ಜೆ ಗೆ ಸೇರಿಸಿದ ಕೀರ್ತಿ ಮಾಜಿ ಶಾಸಕ ದಿ.ಎಂ.ಪಿ. ರವೀಂದ್ರ ಅವರಿಗೆ ಸಲ್ಲಬೇಕು ಎಂದು ಹೇಳಿದರು.

ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಚ್‌. ಚಂದ್ರಶೇಖರ ಮಾತನಾಡಿ, ಹೈದರಾಬಾದ್ ಕರ್ನಾಟಕದ ಮೀಸಲಾತಿಯಿಂದಲೇ ನಾನು ಈ ಸ್ಥಾನಕ್ಕೆ ಬಂದಿದ್ದು. ಕಲ್ಯಾಣ ಕರ್ನಾಟಕದ ಸೌಲಭ್ಯಗಳನ್ನು ಈ ಭಾಗದ ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಂಡು ಮುಖ್ಯ ವಾಹಿನಿಗೆ ಬರಬೇಕು ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ಚಿದಾನಂದಗುರುಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವಕರ್ಮ ದಿನಾಚರಣೆ ಕುರಿತು ಶಂಕರಾಚಾರ್ಯ ಅವರು ಉಪನ್ಯಾಸ ನೀಡಿದರು.

ಪುರಸಭಾ ಹಿರಿಯ ಸದಸ್ಯ ಎಂ.ವಿ. ಅಂಜಿನಪ್ಪ, ಲಾಟಿ ದಾದಾಪೀರ, ಉದ್ದಾರ ಗಣೇಶ, ತಹಸೀಲ್ದಾರ್ ಬಿ.ವಿ. ಗಿರೀಶಬಾಬು, ಕ್ಷೇತ್ರಶಿಕ್ಷಣಾಧಿಕಾರಿ ಎಚ್‌. ಲೇಪಾಕ್ಷಪ್ಪ, ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಎಇಇ ಕುಬೇಂದ್ರ ನಾಯ್ಕ, ಆರ್‌ಎಫ್‌ಒ ದೇವರಾಜ, ಸಮಾಜ ಕಲ್ಯಾಣ ಇಲಾಖೆಯ ಗಂಗಪ್ಪ, ಸಿಡಿಪಿಒ ಅಶೋಕ, ಬಿಸಿಎಂ ಅಧಿಕಾರಿ ವಿಜಯಲಕ್ಷ್ಮೀ ಹತ್ತಿಕಾಳು, ಸಹಾಯಕ ಕೃಷಿ ನಿರ್ದೆಶಕ ಉಮೇಶ, ತೋಟಗಾರಿಕೆಯ ಎಡಿ ಜಯಸಿಂಹ, ಬಿಆರ್‌ ಸಿ ಹೊನ್ನತ್ತೆಪ್ಪ ಪಾಲ್ಗೊಂಡಿದ್ದರು.