ಕನ್ನಡಪ್ರಭ ವಾರ್ತೆ, ತುಮಕೂರು
ವರ್ಷದಿಂದ ವರ್ಷಕ್ಕೆ ಪ್ರಗತಿಯಲ್ಲಿ ಸಾಗುತ್ತಿರುವ ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ 8.5ಕೋಟಿ ರೂ. ಲಾಭ ಗಳಿಸಿದೆ. ಸಂಘವು ವ್ಯಾವಾರಿಕ ಅಭಿವೃದ್ಧಿಗೆ ಸೀಮಿತವಾಗದೆ ಸಮಾಜಿಕ ಸೇವಾ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಂಡಿದೆ ಎಂದು ಸಂಘದ ಅಧ್ಯಕ್ಷ ಬಿ.ಎಸ್. ಮಂಜುನಾಥ್ ಹೇಳಿದರು.ಶನಿವಾರ ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ನಡೆದ ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ಸಂಘದ 18ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ನಗರದ ಎಸ್.ಎಸ್. ಪುರಂ, ಬಿ.ಎಚ್. ರಸ್ತೆ ಅಥವಾ ಪ್ರಮುಖ ಬಡಾವಣೆಗಳಲ್ಲಿ ನಿವೇಶನ ಖರೀದಿಸಿ ಸ್ವಂತ ಕಟ್ಟಡ ನಿರ್ಮಿಸಿ ಹೊಸ ಶಾಖೆ ಪ್ರಾರಂಭಿಸುವ ಗುರಿ ಹೊಂದಲಾಗಿದೆ. 2009ರಲ್ಲಿ ಪ್ರಾರಂಭಗೊಂಡ ಸಹಕಾರಿಯು ಎಲ್ಲಾ ಸದಸ್ಯರ, ಗ್ರಾಹಕರ ಸಹಕಾರ, ಮಾರ್ಗದರ್ಶನ ಮತ್ತು ಪ್ರೋತ್ಸಾಹದಿಂದ ಪ್ರಗತಿಯನ್ನು ಸಾಧಿಸುತ್ತಾ 17 ವರ್ಷಗಳಲ್ಲಿ ಈ ಘಟ್ಟವನ್ನು ತಲುಪಿರುತ್ತದೆ. ಮುಂದೆ ಇನ್ನಷ್ಟು ಸದೃಢವಾಗಿ ಸಂಘವನ್ನು ಬೆಳೆಸುವ ಹಾದಿಯಲ್ಲಿ ಆಡಳಿತ ಮಂಡಳಿ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದು ತಿಳಿಸಿದರು.ನಮ್ಮ ಸದಸ್ಯರಿಗೆ ಹಾಗೂ ಸಿಬ್ಬಂದಿಗೆ ಸಹಕಾರಿಯಿಂದ ಅಪಘಾತ ವಿಮೆ ಮೊತ್ತವನ್ನು 5 ಲಕ್ಷ ರು.ಗಳಿಗೆ ಹೆಚ್ಚಿಸಲಾಗಿದೆ, 2014-15ರಿಂದ ಸದಸ್ಯರಿಗೆ ಹತ್ತು ಸಾವಿರ ರು. ಮರಣೋತ್ತರ ನಿಧಿ ಸ್ಥಾಪಿಸಲಾಗಿದೆ. ಯಶಸ್ವಿನಿ ಸಹಕಾರಿ ಆರೋಗ್ಯ ರಕ್ಷಣಾ ಯೋಜನೆ ಜಾರಿಯಲ್ಲಿದೆ ಎಂದು ಹೇಳಿದರು.
ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್ ಅತಿಥಿಯಾಗಿ ಭಾಗವಹಿಸಿದ್ದರು. ಸಹಕಾರಿಯ ಉಪಾಧ್ಯಕ್ಷ ಟಿ.ಎಸ್. ಲೋಕೇಶ್ಕುಮಾರ್, ನಿರ್ದೇಶಕರಾದ ಎಚ್.ಆರ್. ನಾಗೇಶ್, ಟಿ.ಎಸ್. ನಳಿನಾ, ಟಿ.ಬಿ. ಮೃತ್ಯುಂಜಯ, ಎಚ್.ಎನ್. ಶಿವಕುಮಾರ್, ಪ್ರಭಾಕರ್, ಕೆ.ಎಸ್. ಸುರೇಶ್, ಓ.ಕೆ. ಅರುಣ್ಕುಮಾರ್, ಟಿ.ಎಸ್. ಪೃಥ್ವಿಪ್ರಸಾದ್, ಟಿ. ಶಾಂತಕುಮಾರಿ, ಟಿ.ಎಸ್. ಚಿದಾನಂದ್, ಕೃಷ್ಣಪ್ಪ, ಸುಷ್ಮ ಹೆಚ್.ಎಸ್, ವಿಶೇಷ ಆಹ್ವಾನಿತರಾದ ಡಾ.ಡಿ.ಎಸ್. ಸುರೇಶ್, ಟಿ.ಎಸ್. ಜಗದೀಶ್, ಗಣೇಶ್ ಎಂ ಬಾವಿಕಟ್ಟೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ಮಂಜುನಾಥ್ ಸೇರಿದಂತೆ ಸದಸ್ಯರು, ಸಿಬ್ಬಂದಿ, ವೀರಶೈವ ಸಮಾಜದ ಹಲವು ಪ್ರಮುಖರು ಭಾಗವಹಿಸಿದ್ದರು.
