ಬೆಳಗಾವಿ ಅವೃದ್ಧಿಯಲ್ಲಿ ರುದ್ರಾಕ್ಷಿ ಮಠ ಪಾತ್ರ ಹಿರಿದು

| Published : Jun 23 2024, 02:07 AM IST

ಸಾರಾಂಶ

ನಾಡಿನ ಜನತೆಗೆ ಅನ್ನ, ಅರಿವು, ಅಕ್ಷರ ದಾಸೋಹ ನೀಡುತ್ತಾ ಕನ್ನಡ ಉಳಿಸಿ ಬೆಳೆಸುವುದರ ಜೊತೆಗೆ ಬೆಳಗಾವಿಯ ಅಭಿವೃದ್ಧಿಯಾಗುವಲ್ಲಿ ನಾಗನೂರು ರುದ್ರಾಕ್ಷಿ ಮಠದ ಪಾತ್ರ ಹಿರಿದಾಗಿದೆ ಎಂದು ಬೆಳಗಾವಿ ನೂತನ ಸಂಸದ ಜಗದೀಶ ಶೆಟ್ಟರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಾಡಿನ ಜನತೆಗೆ ಅನ್ನ, ಅರಿವು, ಅಕ್ಷರ ದಾಸೋಹ ನೀಡುತ್ತಾ ಕನ್ನಡ ಉಳಿಸಿ ಬೆಳೆಸುವುದರ ಜೊತೆಗೆ ಬೆಳಗಾವಿಯ ಅಭಿವೃದ್ಧಿಯಾಗುವಲ್ಲಿ ನಾಗನೂರು ರುದ್ರಾಕ್ಷಿ ಮಠದ ಪಾತ್ರ ಹಿರಿದಾಗಿದೆ ಎಂದು ಬೆಳಗಾವಿ ನೂತನ ಸಂಸದ ಜಗದೀಶ ಶೆಟ್ಟರ ಹೇಳಿದರು.

ಶಿವಬಸವ ನಗರದ ಎಸ್‌.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಭವನದಲ್ಲಿ ಶುಕ್ರವಾರ ನಾಗನೂರು ರುದ್ರಾಕ್ಷಿ ಮಠದ ವತಿಯಿಂದ ಅಪ್ರತಿಮ ಮಹಿಳಾ ಸಾಧಕಿ ಪದ್ಮಾವತಿ ಷಣ್ಮುಖಪ್ಪ ಅಂಗಡಿ ಅವರ ಸ್ಮರಣಾರ್ಥ ನೀಡಲಾಗುವ ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಜರುಗಿದ ವಿಶ್ವಕನ್ನಡ ಸಮ್ಮೇಳನ, ಪ್ರಥಮ ವಿಧಾನಸಭೆ ಅಧಿವೇಶನ, ಕನ್ನಡ ನಾಡು ನುಡಿ ಕುರಿತಾದ ಜನ ಜಾಗೃತಿಯಂತಹ ಹಲವಾರು ಕಾರ್ಯಕ್ರಮಗಳಲ್ಲಿ ನಾಗನೂರು ರುದ್ರಾಕ್ಷಿ ಮಠ ಮಾಡಿದ ದಾಸೋಹ ಸೇವೆ ಸದಾ ಸ್ಮರಣೀಯ. 12ನೇ ಶತಮಾನದಲ್ಲಿ ಬಸವಾದಿ ಶಿವ ಶರಣರು ಕಂಡ ಜಾತ್ಯತೀತ ಹಾಗೂ ಲಿಂಗ ಸಮಾನತೆಯ ಕನಸು ನಾಗನೂರು ರುದ್ರಾಕ್ಷಿ ಮಠದಲ್ಲಿ ಅಕ್ಷರಶಃ ಅನುಷ್ಠಾನವಾಗುತ್ತಿದೆ ಎಂದರು.ಧಾರವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಪ್ರಜ್ಞಾ ಮತ್ತಿಹಳ್ಳಿ ಮಾತನಾಡಿ, ನಮಗೆ ಜನ್ಮ ನೀಡಿದವಳು, ಮಾತು ಕಲಿಸಿದವಳು, ಉಣಿಸಿ ಬೆಳೆಸಿದವಳು ಮಾತ್ರ ತಾಯಿಯಲ್ಲ. ಸಮಾಜದಲ್ಲಿ ನೊಂದವರಿಗೆ, ಬೆಂದವರಿಗೆ ಅಂತಃಕರಣದ ತುಡಿತದಿಂದ ಕರುಣೆ, ಪ್ರೀತಿ, ವಾತ್ಸಲ್ಯ ತೋರುವವಳೂ ತಾಯಿಯೇ. ಮಾತೃತ್ವ ಎನ್ನುವುದು ಕೇವಲ ಸೃಷ್ಟಿ ಮಾತ್ರವಲ್ಲ. ಅದು ಅದರಾಚೆ ವಿಶ್ವವ್ಯಾಪಿಯಾಗಿ ಬೆಳೆದಿರುವಂಥಹದ್ದು ಎಂದರು.ಯಡಿಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ವಿಶ್ವವಿದ್ಯಾಲಯದಿಂದ ಜ್ಞಾನಗಳಿಸಿದವರಿಗಿಂತ ಬದುಕಿನ ಅನುಭವಗಳಿಂದ ಕಲಿತವರು ಸಮಾಜದಲ್ಲಿ ವಿಶೇಷ ಸಾಧನೆ ಮಾಡುತ್ತಾರೆ. ಅಂತವರ ಸಾಲಿಗೆ ಪದ್ಮಾವತಿ ಅಂಗಡಿಯವರು ಸೇರುತ್ತಾರೆ. ಕೇವಲ ನಾಲ್ಕನೇ ತರಗತಿ ಓದಿರುವ ಇವರು ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಅಂತವರ ಸ್ಮರಣೆಯಲ್ಲಿ ನೀಡಲಾಗುವ ಮಹಿಳಾ ರತ್ನ ಪ್ರಶಸ್ತಿ ಪಡೆದಿರುವವರು ಇನ್ನೂ ಹೆಚ್ಚು ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಸಮಾರಂಭದ ನೇತೃತ್ವ ವಹಿಸಿದ್ದರು‌. ಕಲಬುರ್ಗಿ ವಿವಿ ವಿಶ್ರಾಂತ ಪ್ರಾಧ್ಯಾಪಕಿ ಉಜ್ವಲಾ ಹಿರೇಮಠ ಮಾತನಾಡಿ, ಪದ್ಮಾವತಿ ಅಂಗಡಿ ಅವರ ಸಾಧನೆಗಳನ್ನು ಸ್ಮರಿಸಿಕೊಂಡರು.ಸಮಾರಂಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪ್ರೇಮಕ್ಕ ಅಂಗಡಿ ಹಾಗೂ ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಹಾಗೂ ಖ್ಯಾತ ಸುಗಮ ಸಂಗೀತ ಕಲಾವಿದೆ ನಯನಾ ಗಿರಿಗೌಡರ ಅವರಿಗೆ ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕಿ ವೀಣಾ ಪುರಾಣಿಕಮಠ ಸ್ವಾಗತಿಸಿದರು. ಅನಿತಾ ಪಾಟೀಲ ನಿರೂಪಿಸಿದರು.

ಮೀಸಲಾತಿ ಹೊರತಾಗಿಯೂ ಮಹಿಳೆಯರು ತಮ್ಮಲ್ಲಿ ನಾಯಕತ್ವ ಗುಣ ಬೆಳೆಸಿಕೊಂಡು ತಮ್ಮ ಪ್ರತಿಭೆಗೆ ತಕ್ಕಂತೆ ಸ್ಥಾನಮಾನಗಳಿಸಿಕೊಳ್ಳುವಷ್ಟು ಸ್ವಾವಲಂಬಿಗಳಾಗಬೇಕು. ಬಸವ ತತ್ವ ಕೇವಲ ಭಾಷಣಕ್ಕೆ ಸೀಮಿತವಾಗದೇ ಸಮಾಜದಲ್ಲಿ ನೈಜ ಅನುಷ್ಠಾನಗೊಳ್ಳಬೇಕು. ಹೀಗಾದಾಗ ಮಾತ್ರ ಸದೃಢ ಸಮಾಜ ನಿರ್ಮಾಣವಾಗುತ್ತದೆ.

-ಜಗದೀಶ ಶೆಟ್ಟರ,

ಬೆಳಗಾವಿ ನೂತನ ಸಂಸದ.