ಕಾಂಗ್ರೆಸ್ ಪಕ್ಷದ ಏಕೈಕ ಬಂಜಾರ ಸಮುದಾಯದ ಶಾಸಕ ಹಾವೇರಿಯ ರುದ್ರಪ್ಪ ಲಮಾಣಿ ಅವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡುವಂತೆ ಜಿಲ್ಲಾ ಬಂಜಾರ ಸಮುದಾಯದ ಮುಖಂಡ ಕೆ.ಪಿ.ನಾಗರಾಜ ನಾಯ್ಕ ಆಡಳಿತ ಪಕ್ಷದ ಹೈಕಮಾಂಡ್ಗೆ ಒತ್ತಾಯಿಸಿದ್ದಾರೆ.
- ವಿಧಾನ ಪರಿಷತ್ಗೆ ಬಂಜಾರರನ್ನು ನೇಮಿಸಲು ಕಾಂಗ್ರೆಸ್ ವರಿಷ್ಠರಿಗೆ ಸಮಾಜ ಆಗ್ರಹ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ಕಾಂಗ್ರೆಸ್ ಪಕ್ಷದ ಏಕೈಕ ಬಂಜಾರ ಸಮುದಾಯದ ಶಾಸಕ ಹಾವೇರಿಯ ರುದ್ರಪ್ಪ ಲಮಾಣಿ ಅವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡುವಂತೆ ಜಿಲ್ಲಾ ಬಂಜಾರ ಸಮುದಾಯದ ಮುಖಂಡ ಕೆ.ಪಿ.ನಾಗರಾಜ ನಾಯ್ಕ ಆಡಳಿತ ಪಕ್ಷದ ಹೈಕಮಾಂಡ್ಗೆ ಒತ್ತಾಯಿಸಿದ್ದಾರೆ.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆಲ್ಲಾ ಕಾಂಗ್ರೆಸ್, ಬಿಜೆಪಿ ಸರ್ಕಾರಗಳಲ್ಲಿ ಬಂಜಾರ ಸಮುದಾಯಕ್ಕೆ ಸಚಿವ ಸ್ಥಾನ ನೀಡಲಾಗುತ್ತಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರದಲ್ಲಿ ಬಂಜಾರ ಸಮಾಜಕ್ಕೆ ಸಚಿವ ಸ್ಥಾನ ನೀಡಲಿಲ್ಲ. ಎಲ್ಲೋ ಒಂದು ಕಡೆ ಕಾಂಗ್ರೆಸ್ ನಮ್ಮ ಸಮುದಾಯದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆಯೇನೋ ಎನಿಸುತ್ತಿದೆ ಎಂದರು.
ರಾಜ್ಯದಲ್ಲಿ 3600ಕ್ಕೂ ಅಧಿಕ ಲಂಬಾಣಿ ತಾಂಡಾಗಳಿವೆ. 35 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಬಂಜಾರ ಸಮುದಾಯದಿಂದ ಆಯ್ಕೆಯಾದ ಏಕೈಕ ಶಾಸಕ ರುದ್ರಪ್ಪ ಲಮಾಣಿಗೆ ಹಿಂದಿನ ಅವಧಿಯಲ್ಲೇ ಸಚಿವ ಸ್ಥಾನ ನೀಡಬೇಕಾಗಿತ್ತು. ಆದರೆ, ಯಾವ ಕಾರಣಕ್ಕಾಗಿ ಸಚಿವ ಸ್ಥಾನ ತಪ್ಪಿತೋ ಇಂದಿಗೂ ಗೊತ್ತಾಗಿಲಿಲ್ಲ. ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಲಿರುವ ಡಿ.ಕೆ.ಶಿವಕುಮಾರ ತಮ್ಮ ಸಂಪುಟದಲ್ಲಾದರೂ ರುದ್ರಪ್ಪ ಲಮಾಣಿಗೆ ಸಚಿವ ಸ್ಥಾನ ನೀಡಿ, ಸಮಾಜದ ಬೇಡಿಕೆಗೆ ಸ್ಪಂದಸಲಿ ಎಂದು ಆಗ್ರಹಿಸಿದರು.ಲಂಬಾಣಿ ಸಮುದಾಯಕ್ಕೆ ಸಂಪುಟದಲ್ಲಿ ಸ್ಥಾನ ನೀಡದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನೇ ಬಂಜಾರ ಸಮುದಾಯ ಕೈ ಬಿಡಬೇಕಾಗುತ್ತದೆ. ಬಂಜಾರ ಸಮುದಾಯದ ಅನೇಕ ಸಮಸ್ಯೆಗಳ ಪರಿಹಾರಕ್ಕೆ ನಮ್ಮದೇ ಸಮಾಜದ ಸಚಿವರು ಇಲ್ಲದಂತಹ ಸ್ಥಿತಿ ಇದೆ. ಸಂಪುಟದಲ್ಲಿ ಪ್ರಾತಿನಿಧ್ಯವಿಲ್ಲದೇ ಸಮಾಜದ ಯಾವುದೇ ಕೆಲಸ, ಕಾರ್ಯಗಳೂ ಆಗುತ್ತಿಲ್ಲ. ಹಾಗಾಗಿ, ನಮ್ಮ ಸಮುದಾಯದ ಪ್ರತಿನಿಧಿ ರುದ್ರಪ್ಪ ಲಮಾಣಿಗೆ ಸಚಿವ ಸ್ಥಾನ ನೀಡಲಿ ಎಂದು ಮನವಿ ಮಾಡಿದರು.
ವಿಧಾನ ಪರಿಷತ್ಗೆ ಲಂಬಾಣಿ ಸಮುದಾಯದ ಓರ್ವರಿಗೆ ಸದಸ್ಯರಾಗಿ ಮಾಡಬೇಕು. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮನಸ್ಸು ಮಾಡಿ, ಪರಿಷತ್ಗೆ ಲಂಬಾಣಿ ಸಮುದಾಯದ ಓರ್ವರನ್ನು ನೇಮಕ ಮಾಡಬೇಕು ಎಂದು ನಾಗರಾಜ ನಾಯ್ಕ ಒತ್ತಾಯಿಸಿದರು.ಸಮಾಜದ ಮುಖಂಡರಾದ ವೆಂಕಟೇಶ ನಾಯ್ಕ, ಕವಿತಾ ಚಂದ್ರಶೇಖರ, ಗೋಪಿನಾಯ್ಕ, ಎಸ್.ನಂಜಾ ನಾಯ್ಕ, ಲಿಂಗರಾಜ ನಾಯ್ಕ, ಮಂಜಾನಾಯ್ಕ, ರವಿ ನಾಯ್ಕ ಇತರರು ಇದ್ದರು.
- - --31ಕೆಡಿವಿಜಿ3: ದಾವಣಗೆರೆಯಲ್ಲಿ ಭಾನುವಾರ ಜಿಲ್ಲಾ ಬಂಜಾರ ಸಮುದಾಯದ ಮುಖಂಡ ಕೆ.ಪಿ.ನಾಗರಾಜ ನಾಯ್ಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.