ಕನ್ನಡಪ್ರಭ ವಾರ್ತೆ ಮಂಡ್ಯ

ಸಾಮಾಜಿಕವಾಗಿ ಸರ್ಕಾರಗಳು ಆಳುವ ವರ್ಗಗಳಾಗಿ ಜಾತಿ, ಪುರೋಹಿತಶಾಹಿಯನ್ನೇ ಮುಖ್ಯವನ್ನಾಗಿಸಿಕೊಂಡಿವೆ. ಅದರಂತೆ ಸಾಂಸ್ಕೃತಿಕವಾಗಿ ಧರ್ಮ, ಸಂಸ್ಕೃತಿ ಎಂಬ ಹೆಸರಿನಲ್ಲಿ ಸಮೂಹ ಸನ್ನಿ ಸೃಷ್ಟಿಸಿ ತಮಗೆ ಬೇಕಾದಂತೆ ಭೌತಿಕ ಹಾಗೂ ಬೌದ್ಧಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಹಿರಿಯ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ವತಿಯಿಂದ ‘ಡಾ.ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ ಪ್ರದಾನ ಹಾಗೂ ‘ಕಕರುಡಿ ಉಗಾದಿ’ ತೆಲುಗು ಅನುವಾದ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಗಾಂಧೀಜಿಯವರು ಶ್ರೀರಾಮನ ಭಕ್ತರಾಗಿದ್ದರು. ಆದರೆ, ಎಂದೂ ಶ್ರೀರಾಮನನ್ನು ತಮ್ಮ ವೈಯಕ್ತಿಕ ಪ್ರಚಾರಕ್ಕೆ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ಬಳಸಿಕೊಳ್ಳಲಿಲ್ಲ. ಸಾಮಾಜಿಕ ಹಾಗೂ ಸಾಂಸ್ಕೃತಿಕ ಯಜಮಾನಿಕೆಯನ್ನು ಆಳುವ ವರ್ಗಗಳು ಹಾಗೂ ರಾಜಕೀಯದವರು ಚೆನ್ನಾಗಿ ಬಳಸಿಕೊಳ್ಳುತ್ತಾರೆ ಎಂದು ವಿಶ್ಲೇಷಿಸಿದರು.

ಡಾ.ಬೆಸಗರಹಳ್ಳಿ ರಾಮಣ್ಣ ಅವರು ಮಾನವೀಕರಣ ಹಾಗೂ ಪ್ರಜಾಪ್ರಭುತ್ವೀಕರಣದ ಕೇಂದ್ರ ಪ್ರಜ್ಞೆ ಇಟ್ಟುಕೊಂಡು ಕಥೆಗಳನ್ನು ರಚಿಸುತ್ತಿದ್ದರು. ಇವರ ಕಥೆಗಳಲ್ಲಿ ಸಾಮಾಜಿಕ ನೈತಿಕತೆ, ಬದ್ಧತೆ ಇತ್ತು . ಅವರ ಕಥೆಗಳಲ್ಲಿ ಬಿರುಕು, ಬೆಸುಗೆ, ಹಳ್ಳಿ, ನಗರ, ಶೋಷಿತರು, ದಲಿತರು, ಸಂತ್ರಸ್ತರ ಪರವಾಗಿರುವುದ್ದವು. ಮಾನವೀಕರಣ ಹಾಗೂ ಪ್ರಜಾಪ್ರಭುತ್ವೀಕರಣ ಕಥೆಗಳನ್ನು ನೀಡುತ್ತಿದ್ದರು. ಲೇಖಕನಿಗಿಂತ ಮನುಷ್ಯತ್ವ ಹೆಚ್ಚಿತ್ತು ಎಂದು ಶ್ಲಾಘಿಸಿದರು.

ಪ್ರಜಾಪ್ರಭುತ್ವೀಕರಣದಲ್ಲಿ ಸಂವಾದ ಹೆಚ್ಚಾಗಬೇಕು. ಆದರೆ, ಪ್ರಸ್ತುತ ಪ್ರಜಾಪ್ರಭುತ್ವಕ್ಕಿಂತ ವಾಗ್ವಾದಗಳು ಹೆಚ್ಚಾಗಿವೆ. ವಾಗ್ವಾದಗಳನ್ನು ಸಂವಾದಗೊಳಿಸುವ ಶಕ್ತಿ ಪ್ರಜಾಪ್ರಭುತ್ವಕ್ಕೆ ಇದೆ. ಬೆಸಗರಹಳ್ಳಿ ರಾಮಣ್ಣನವರಲ್ಲಿ ಗಾಂಧಿತನವೂ ಇತ್ತು. ಸಂವಾದವೂ ಕೂಡ ಇತ್ತು. ಸಾಮಾಜಿಕ ಹಾಗೂ ಸಾಂಸ್ಕೃತಿಕ ಯಜಮಾನಿಕೆಗೆ ಮುಖಾಮುಖಿಯಾಗಿರುತ್ತಿದ್ದರು. ಅದನ್ನು ನಿರ್ಭೀತಿಯಿಂದಲೇ ಎದುರಿಸುತ್ತಿದ್ದರು ಎಂದರು.


ಡಾ.ಬೆಸಗರಹಳ್ಳಿ ರಾಮಣ್ಣನವರು ಕಾಲದ ಜೊತೆಗೆ ಕಳಕಳಿ ಮತ್ತು ಕಾಳಗ ಮಾಡಿಕೊಂಡು ಬಂದಿದ್ದರು. ಪ್ರಸ್ತುತ ಸೋಷಿಯಲ್ ಕರೆನ್ಸಿ ಸಂಸ್ಕೃತಿ ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಜಾತಿ, ಧರ್ಮ, ಸಂಸ್ಕೃತಿಯ ನಡುವಿನ ಕಲಹ ಹೆಚ್ಚಾಗಿದೆ. ಜನರ ಜೀವನದ ವಿಧಾನವೇ ಸಂಸ್ಕೃತಿಯಾಗಿದೆ. ಆದರೆ ಸಾಮಾಜಿಕ ವಹಿವಾಟಿನ ಸಂಸ್ಕೃತಿ ಹೆಚ್ಚಾದಂತೆ ಜನರ ಜೀವನ ವಿಧಾನದ ಸಂಸ್ಕೃತಿಯೇ ಇಲ್ಲದಂತಾಗಲಿದೆ ಎಂದು ಎಚ್ಚರಿಸಿದರು.

ಡಾ.ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿಗೆ ಆಯ್ಕೆಯಾಗಿರುವ ರಘುನಾಥ್.ಚ.ಹ ಅವರ ‘ಇಲ್ಲಿಂದ ಮುಂದೆಲ್ಲ ಕಥೆಯು ಬೆಸಗರಹಳ್ಳಿ ರಾಮಣ್ಣ ಅವರ ಕಥೆಗಳಿಗೆ ಹೋಲಿಕೆಯಾಗುತ್ತದೆ. ರಾಮಣ್ಣನವರ ಕಥೆಗಳು ಲೋಕಾಂತದಿಂದ ಏಕಾಂತಕ್ಕೆ ಕೊಂಡೊಯ್ದರೆ, ರಘುನಾಥ್.ಚ.ಹ ಅವರ ಕಥೆಗಳು ಏಕಾಂತದಿಂದ ಲೋಕಾಂತಕ್ಕೆ ಕರೆದೊಯ್ಯುತ್ತವೆ. ಏಕಾಂತ ಹಾಗೂ ಲೋಕಾಂತ ಒಂದಕ್ಕೊಂದು ಬೆಸುಗೆ ಇದೆ. ಇಬ್ಬರು ಲೋಕಾಂತ-ಏಕಾಂತ ಒಂದು ಮಾಡಿಕೊಂಡು ಹೋಗುತ್ತಾರೆ ಎಂದರು.

ಸರ್ಕಾರಿ ಶಾಲೆ ಉಳಿಸಬೇಕು ಎಂಬ ಮಾತನ್ನು ಹಿಂದೆಯೇ ರಾಮಣ್ಣನವರು ಹೇಳಿದ್ದರು. ಅದು ಇದೀಗ ನಿಜವಾಗುತ್ತಿದೆ. ರಾಜ್ಯದಲ್ಲಿ ೯೬೪ ಶಾಲೆಗಳು ಶೂನ್ಯ ದಾಖಲಾತಿಯಾಗಿವೆ. ೩೫೪೨ ಶಾಲೆಗಳಲ್ಲಿ ೧ರಿಂದ ೫ ಮಂದಿ ಇದ್ದಾರೆ. ೬೬೯೯೬ ಶಾಲೆಗಳಲ್ಲಿ ೬ರಿಂದ ೨೦ ಮಕ್ಕಳಿದ್ದಾರೆ ಎಂದು ಸರ್ಕಾರ ವರದಿ ನೀಡಿದೆ. ಈ ಪರಿಸ್ಥಿತಿ ಬದಲಾಗಬೇಕಾದರೆ ಸರ್ಕಾರ ಮೊದಲು ಕನ್ನಡ ಮಾತನಾಡಬೇಕು. ಸರ್ಕಾರಿ ಶಾಲೆಗಳ ಉನ್ನತೀಕರಣ ಮಾಡಲು ಮುಂದಾಗಬೇಕು. ಮೇಲಧಿಕಾರಿಗಳೊಂದಿಗೆ ಮಾತನಾಡುವುದಕ್ಕಿಂತ ಶಿಕ್ಷಕರು, ಅಧ್ಯಾಪಕರೊಂದಿಗೆ ಚರ್ಚೆ ನಡೆಸಬೇಕು. ಆದರೆ ರಾಮಣ್ಣನವರ ಸರ್ಕಾರಿ ಶಾಲೆ ಉಳಿಸಬೇಕು ಎಂಬ ಕಳಕಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಸಾಹಿತಿ ರಘುನಾಥ್.ಚ.ಹ ಅವರ ‘ಇಲ್ಲಿಂದ ಮುಂದೆಲ್ಲ ಕಥೆ ಕೃತಿ ಕುರಿತಂತೆ ಪುಸ್ತಕ ಆಯ್ಕೆ ಸಮಿತಿಯ ಕನ್ನಡ ಪ್ರಾಧ್ಯಾಪಕ ಡಾ.ನಿತ್ಯಾನಂದ ಬಿ.ಶೆಟ್ಟಿ ಮಾತನಾಡಿದರು. ಡಾ.ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿಯನ್ನು ರಘುನಾಥ್.ಚ.ಹ ಅವರಿಗೆ ಪ್ರದಾನ ಮಾಡಲಾಯಿತು. ‘ಕಕರುಡಿ ಉಗಾದಿ ತೆಲುಗು ಅನುವಾದ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಹಿರಿಯ ಸ್ತ್ರೀವಾದಿ, ಲೇಖಕಿ ಡಾ.ಸಬಿಹಾಭೂಮಿಗೌಡ, ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಎಚ್.ಆರ್.ಸುಜಾತ, ಪ್ರತಿಷ್ಠಾನದ ಅಜೀವ ಸದಸ್ಯೆ ರಾಜಮ್ಮ, ಐಪಿಎಸ್ ಅಧಿಕಾರಿ ರವಿಕಾಂತೇಗೌಡ ಸೇರಿದಂತೆ ಮತ್ತಿತರರಿದ್ದರು.