ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಅಶೋಕ ಪ್ರೌಢಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ಸಭಾಭವನವನ್ನು ಜಿಲ್ಲಾ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಡಾ. ಶಶಿಭೂಷಣ ಹೆಗಡೆ ದೊಡ್ಮನೆ ಉದ್ಘಾಟಿಸಿದರು.
ಸಿದ್ದಾಪುರ: ರಾಜ್ಯ ಸರ್ಕಾರ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಬೋಧಕ ಹಾಗೂ ಬೋಧಕೇತರ ಶಿಕ್ಷಕರನ್ನು ನೇಮಕ ಮಾಡುವುದಕ್ಕೆ ಇರುವ ನಿಯಮಾವಳಿ ಸಡಿಲಕರಣಗೊಳಿಸಬೇಕು. ಯಾವುದೇ ತಾರತಮ್ಯ ಮಾಡಬಾರದು ಎಂದು ಜಿಲ್ಲಾ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಡಾ. ಶಶಿಭೂಷಣ ಹೆಗಡೆ ದೊಡ್ಮನೆ ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾ ಅಶೋಕ ಪ್ರೌಢಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ಸಭಾಭವನ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದೇ ಒಂದು ಸವಾಲಾಗಿದೆ. ರಾಜ್ಯ ಸರ್ಕಾರ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ವೇತನ ಮಾತ್ರ ನೀಡುತ್ತಿದ್ದು, ಹಲವು ವರ್ಷಗಳಿಂದ ನಿರ್ವಹಣಾ ವೆಚ್ಚ ನೀಡುತ್ತಿಲ್ಲ. ಖಾಲಿ ಇರುವ ಹುದ್ದೆ ತುಂಬುವುದಕ್ಕೂ ಅವಕಾಶ ನೀಡುತ್ತಿಲ್ಲ. ಇದರಿಂದ ಜಿಲ್ಲೆಯ ಕೆಲವು ಶಿಕ್ಷಣ ಸಂಸ್ಥೆಗಳು ಮುಚ್ಚುವಂತಾಗಿದೆ. ಇದು ಶಿಕ್ಷಣ ಸಂಸ್ಥೆ ನಡೆಸುತ್ತಿರುವ ದೊಡ್ಡ ಸವಾಲಾಗಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗಿಂತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.ಪ್ರೌಢಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಗಣಪತಿ ಹೆಗಡೆ ಕುಂಬಾರಕುಳಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕೆ.ಪಿ. ಗೌಡರ್ ಹೂಕಾರ, ಹಾರ್ಸಿಕಟ್ಟಾ ಕೆವಿಜಿ ಬ್ಯಾಂಕ್ ವ್ಯವಸ್ಥಾಪಕ ರವಿಶಂಕರ ಜಿ., ಹಾರ್ಸಿಕಟ್ಟಾ ವಿಎಸ್ಎಸ್ ಅಧ್ಯಕ್ಷ ಅನಂತ ಹೆಗಡೆ ಗೊಂಟನಾಳ, ಪಿಡಿಒ ರಾಜೇಶ ನಾಯ್ಕ, ಹಳೆಯ ವಿದ್ಯಾರ್ಥಿಗಳ ಪ್ರತಿನಿಧಿ ನವೀನ ಎನ್. ಹೆಗಡೆ ಉಪಸ್ಥಿತರಿದ್ದರು.
ಇದೇ ಸಂದರ್ಭ ಪ್ರೌಢಶಾಲೆಯ ಅಧ್ಯಕ್ಷ ಗಣಪತಿ ಹೆಗಡೆ ಕುಂಬಾರಕುಳಿ, ನಿವೃತ್ತ ಶಿಕ್ಷಕಿ ಕೃಷ್ಣಾಬಾಯಿ ಶಾನಭಾಗ್, ವಿಶೇಷ ದಾನಿಗಳಾದ ಆರ್.ಎಸ್. ಹೆಗಡೆ ದಂಪತಿ ಹಿರೇಕೈ, ಎಬಿವಿಪಿ ರಾಜ್ಯ ಕಾರ್ಯದರ್ಶಿ ದರ್ಶನ ಎಂ. ಹೆಗಡೆ, ಯಕ್ಷರಂಗದ ಉದಯೋನ್ಮುಖ ಕಲಾವಿದ ಯುವರಾಜ್ ನಾಯ್ಕ, ಕಲಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಡೈರೆಕ್ಟರ್ ಅಜಿತ್ ಪಿ. ನಾಯ್ಕ, ಬರಹಗಾರ್ತಿ ಸಹನಾ ಆರ್. ಹೆಗಡೆ ಅವರನ್ನು ಗೌರವಿಸಲಾಯಿತು. ಹಳೆಯ ವಿದ್ಯಾರ್ಥಿಗಳು ನಿವೃತ್ತ ಶಿಕ್ಷಕರಾದ ಎಲ್.ಜಿ. ಹೆಗಡೆ, ಎಸ್.ಕೆ. ಹೆಗಡೆ, ಜಿ.ಜಿ. ಹೆಗಡೆ, ಕೃಷ್ಣಾಬಾಯಿ ಶಾನಭಾಗ್ ಅವರನ್ನು ಸನ್ಮಾನಿಸಿದರು.ಪ್ರೌಢಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಎಂ.ಎ. ಹೆಗಡೆ ಮತ್ತಿಗಾರ ಸ್ವಾಗತಿಸಿದರು. ನಿರ್ದೇಶಕ ಪಿ.ವಿ. ಹೆಗಡೆ ಹೊಸಗದ್ದೆ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಾಧ್ಯಾಪಕ ರಾಜೇಂದ್ರ ಕಾಂಬಳೆ ವಂದಿಸಿದರು. ಶಿಕ್ಷಕ ಶ್ರೀಪಾದ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದದವರು ಹಾಗೂ ಆಡಳಿತ ಮಂಡಳಿ ಸದಸ್ಯರು, ವಿದ್ಯಾರ್ಥಿ ಪ್ರತಿನಿಧಿಗಳು ಸಹಕರಿಸಿದರು.