ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಆರ್.ವಿ.ದೇಶಪಾಂಡೆಯವರು ತಕ್ಷಣವೇ ಮಹಿಳಾ ಪತ್ರಕರ್ತೆ ಹಾಗೂ ಸಮಗ್ರ ಮಹಿಳಾ ಸಮಾಜದ ಮುಂದೆ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಈ ಕುರಿತು ತೀವ್ರ ಹೋರಾಟ ನಡೆಸಲು ಹಿಂಜರಿಯುವುದಿಲ್ಲ ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಡಾ.ಸೋನಾಲಿ ಸರ್ನೊಬತ್ ಎಚ್ಚರಿಕೆ ನೀಡಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಹಿಳಾ ಪತ್ರಕರ್ತೆಯ ಸಾರ್ವಜನಿಕ ಹಿತ ಪ್ರಶ್ನೆಗೆ ಕಾಂಗ್ರೆಸ್ನ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ನೀಡಿದ ಅವಮಾನಕಾರಿ ಉತ್ತರ ತೀವ್ರ ಖಂಡನೀಯ. ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.ಅಭಿವೃದ್ಧಿ ಕುರಿತು ಪ್ರಶ್ನಿಸಿದಾಗ ವೈಯಕ್ತಿಕ ನಿಂದನೆ ಮಾಡುವ ಸಂಸ್ಕೃತಿ ಕಾಂಗ್ರೆಸ್ ಪಕ್ಷದವರದ್ದು ಈ ಮೂಲಕ ಸ್ಪಷ್ಟವಾಗಿದೆ. ಮಾಜಿ ಸಚಿವ ಹಾಗೂ ಹಿರಿಯ ಶಾಸಕರಿಂದಲೇ ಇಂತಹ ಕೀಳುಮಟ್ಟದ ಹೇಳಿಕೆ ಬರುವುದು ಕಾಂಗ್ರೆಸ್ ಸಂಸ್ಕೃತಿಯ ನಿಜ ಸ್ವರೂಪ ತೋರಿಸುತ್ತದೆ. ಇಂತಹ ವರ್ತನೆ ಯುವ ಪೀಳಿಗೆಗೆ ತಪ್ಪು ಸಂದೇಶ ನೀಡುತ್ತದೆ. ಸಾರ್ವಜನಿಕ ಅಭಿವೃದ್ಧಿಗೆ ಸಂಬಂಧಿಸಿದ ಪ್ರಶ್ನೆಗೆ ವೈಯಕ್ತಿಕ ನಿಂದನೆ ಮಾಡುವುದೇ ದುರದೃಷ್ಟಕರ ಎಂದು ಅಸಮಾಧಾನ ಹೊರಹಾಕಿದ್ದಾರೆ.ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಹೆರಿಗೆ ಆಸ್ಪತ್ರೆ ಯಾವಾಗ ನಿರ್ಮಾಣವಾಗುತ್ತದೆ? ಎಂದು ಮಹಿಳಾ ಪತ್ರಕರ್ತೆಯರು ಕೇಳಿದ ಪ್ರಶ್ನೆಗೆ ಆರ್.ವಿ.ದೇಶಪಾಂಡೆಯವರು ನಿನ್ನದೆನು ಹೆರಿಗೆ ಇದ್ದರೇ ಮಾಡಿಸುತ್ತೀನಿ ಎಂದು ಹೇಳಿರುವುದು ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತಾಗಿದೆ. ತಕ್ಷಣವೇ ಕಾಂಗ್ರೆಸ್ ಪಕ್ಷದಿಂದ ದೇಶಪಾಂಡೆಯವರನ್ನು ಉಚ್ಚಾಟನೆ ಮಾಡಬೇಕು.
-ಡಾ.ಸೋನಾಲಿ ಸರ್ನೊಬತ್, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ.