ಪಾಂಚಜನ್ಯ ಮೊಳಗಿಸಿದ್ದ ಮಾಜಿ‌ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ : ಕೆ.ಎಸ್.ಸಿದ್ದಲಿಂಗಪ್ಪ

| Published : Dec 12 2024, 12:32 AM IST / Updated: Dec 12 2024, 09:45 AM IST

SM Krishna
ಪಾಂಚಜನ್ಯ ಮೊಳಗಿಸಿದ್ದ ಮಾಜಿ‌ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ : ಕೆ.ಎಸ್.ಸಿದ್ದಲಿಂಗಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ‌ ಮುಖ್ಯಮಂತ್ರಿ ಕೃಷ್ಣ ಅವರು ಕರ್ನಾಟಕದಲ್ಲಿ ಪಾಂಚಜನ್ಯ ಮೊಳಗಿಸಿ ಆ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿ ಪಟ್ಟವನ್ನಲಂಕರಿಸಿದ ಧೀಮಂತ ನಾಯಕ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ನುಡಿದರು.

 ತುಮಕೂರು : ಮಾಜಿ‌ ಮುಖ್ಯಮಂತ್ರಿ ಕೃಷ್ಣ ಅವರು ಕರ್ನಾಟಕದಲ್ಲಿ ಪಾಂಚಜನ್ಯ ಮೊಳಗಿಸಿ ಆ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿ ಪಟ್ಟವನ್ನಲಂಕರಿಸಿದ ಧೀಮಂತ ನಾಯಕ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ನುಡಿದರು.

ಅವರು ಜಿಲ್ಲಾ ಕಸಾಪ. ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಎಸ್.ಎಂ.ಕೃಷ್ಣರವರ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನುಡಿನಮನ ಸಲ್ಲಿಸಿದರು.

ರಾಜಕಾರಣದಲ್ಲಿ ಯುವಕರ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದ ಅವರು ತಾವು ಮುಖ್ಯಮಂತ್ರಿಯಾಗಿದ್ದಾಗ ಅಪಾರ ಸವಾಲುಗಳನ್ನು ಎದುರಿಸಬೇಕಾಯಿತು. ಈ ಎಲ್ಲ ಸವಾಲುಗಳನ್ನು ಜಾಣ್ಮೆಯಿಂದ ಬಗೆಹರಿಸಿ ಸರ್ಕಾರವನ್ನು ಮುನ್ನಡೆಸಿದ ಮುತ್ಸದ್ಧಿ ರಾಜಕಾರಣಿಯಾಗಿದ್ದಾರೆ. ದೂರದ ಅಮೇರಿಕಾದಲ್ಲಿ ವಿದ್ಯಾಭ್ಯಾಸವಾಗಿದ್ದರೂ ತಮ್ಮ ಶಿಸ್ತಿನ ದಿನಚರಿಯಿಂದ ಅವರು ಎಲ್ಲರ ಗಮನ ಸೆಳೆಯುತ್ತಾರೆ. ಇವರ ಮರಣ ರಾಜಕಾರಣ, ಕಲೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ಡಾ. ಡಿ.ಎನ್.ಯೋಗೀಶ್ವರಪ್ಪ ಬೆಂಗಳೂರಿಗೆ ಐಟಿಬಿಟಿ ಕಂಪನಿಗಳನ್ನು ತರುವ ಮೂಲಕ ನವ ಬೆಂಗಳೂರು ನಿರ್ಮಾಪಕರೆನಿಸಿಕೊಂಡಿದ್ದಾರೆ. ತುಮಕೂರು ಜಿಲ್ಲೆಯ ಜೊತೆ ಒಡನಾಟ ಹೊಂದಿದ್ದ ಇವರು 2092ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ತುಮಕೂರಿನಲ್ಲಿ ನಡೆದಾಗ ಅದರ ಉದ್ಘಾಟನೆ ನೆರವೇರಿಸಿ ಪ್ರಸ್ತುತ ಕನ್ನಡ ಭವನಕ್ಕೆ ಶಿಲಾನ್ಯಾಸವನ್ನು ಮಾಡಿದುದನ್ನು ಸ್ಮರಿಸಿದ ಅವರು ಆ ಸಮ್ಮೇಳನಕ್ಕೆ 50 ಲಕ್ಷ ರೂಗಳನ್ನು ಸರ್ಕಾರದಿಂದ ಬಿಡುಗಡೆ ಮಾಡಿ ಸಾಹಿತ್ಯದ ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆ ಎಂದರು.

ನಿವೃತ್ತ ಪ್ರಾಂಶುಪಾಲರಾದ ಡಾ. ಟಿ.ಆರ್.ಲೀಲಾವತಿ ಮಾತನಾಡಿ ಅಜಾತಶತ್ರುವಾಗಿದ್ದ ಎಸ್.ಎಂ.ಕೃಷ್ಣರವರು ಭಾರತದ ವಿದೇಶಾಂಗ ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸಿದವರು. ಕರ್ನಾಟಕದಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟದ ಯೋಜನೆಯನ್ನು ಜಾರಿಗೊಳಿಸಿದ ಶ್ರೇಷ್ಠ ರಾಜಕಾರಣಿ ಎಂದರು.ನಿವತ್ತ ಇತಿಹಾಸಕಾರವ ಡಾ. ಸಿದ್ದಲಿಂಗಯ್ಯನವರು ಮಾತನಾಡಿ ಸೋಮನಹಳ್ಳಿ ಎಂಬ ಕುಗ್ರಾಮದಲ್ಲಿ ಜನಿಸಿ ಅಧಿಕಾರದ ಎಲ್ಲ ಮಜಲುಗಳ ಅನುಭವ ಪಡೆದುಕೊಂಡಿದ್ದ ಎಸ್.ಎಂ.ಕೃಷ್ಣರವರು ರಾಜಕಾರಣದ ಅನಭಿಶಕ್ತ ದೊರೆಯಂತಿದ್ದು ಎಲ್ಲ ಪಕ್ಷಗಳ ನಾಯಕರಿಗೆ ಪ್ರೀತಿಪಾತ್ರರಾಗಿದ್ದರು ಎಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್, ಕೋಶಾಧ್ಯಕ್ಷ ಎಂ.ಹೆಚ್.ನಾಗರಾಜು, ಬೆಸ್ಟೆಕ್ಸ್ ರಾಮರಾಜು, ಜಿ.ಹೆಚ್.ಮಹದೇವಪ್ಪ, ನಟರಾಜು, ಚಾಂದು ಇತರರಿದ್ದರು.