ಸಾರಾಂಶ
ಟೈಮ್ಸ್ ಕಾಲೇಜಿನಿಂದ ವಿವಿಧ ಸಾಧಕರಿಗೆ ಸನ್ಮಾನ । ಬೀಳ್ಕೊಡುಗೆ ಸಮಾರಂಭಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಮಕ್ಕಳು ಪಠ್ಯದ ಜತೆ ಸಂಸ್ಕಾರ ಕಲಿಯುವುದು ಅತೀ ಮುಖ್ಯವಾಗಿದೆ ಏಕೆಂದರೆ ಭಾರತ ಸರ್ಕಾರ ನೀಡುವ ಉನ್ನತ ಪದಕಗಳು ಕೇವಲು ಹಣವಿದ್ದವರಿಗೆ ಅಲ್ಲ, ಸಮಾಜಕ್ಕೆ ಕೊಡುಗೆ ನೀಡಿದವರಿಗೆ ಮಾತ್ರ ಎಂದು ಟೈಮ್ಸ್ ಕಾಲೇಜಿನ ಕಾರ್ಯದರ್ಶಿ ಗಂಗಾಧರ್ ಹೇಳಿದರು.ಪಟ್ಟಣದ ಟೈಮ್ಸ್ ಕಾಲೇಜು ವತಿಯಿಂದ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ವಿವಿಧ ಸಾಧಕರಿಗೆ ಸನ್ಮಾನಿಸಿ ಮಾತನಾಡಿ, ‘ತಾಲೂಕಿನಲ್ಲಿ ಅನೇಕ ಸಾಧಕರನ್ನು ಗುರುತಿಸಿ ಸಂಸ್ಥೆ ವತಿಯಿಂದ ಸನ್ಮಾನಿಸುತ್ತಿರುವುದು ನಿಜಕ್ಕೂ ಮಾದರಿಯಾಗಿದೆ. ಕೇಂದ್ರ ಸರ್ಕಾರಗಳು ಭಾರತ ರತ್ನ, ಪದ್ಮಶ್ರೀ ರೀತಿ ಅನೇಕ ಪುರಸ್ಕಾರಗಳನ್ನು ನೀಡುವುದು ಎಷ್ಟು ಹಣ, ಜನ, ಆಸ್ತಿ ಇವೆ ಎಂದು ಅಲ್ಲ. ಕೇವಲ ಸಮಾಜಕ್ಕೆ ಕೊಡಗೆ ಏನು, ಮಾಡುವ ಕೆಲಸ ಕಾರ್ಯಗಳನ್ನು ಪರಿಗಣಿಸಿ ಮಾತ್ರ ಪುರಸ್ಕಾರ ನೀಡಲಾಗುತ್ತದೆ, ಸಮಾಜ ನಮಗೆ ಏನು ಕಡುತ್ತದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನನ್ನು ನೀಡುತ್ತೇವೆ ಎಂಬುದು ಮುಖ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನಲ್ಲಿ ಮೊದಲು ಶೌಚಾಲಯ ಹಾಗೂ ಕಾಲೇಜನ್ನು ಸ್ವಚ್ಛಗೊಳಿಸುವ ವ್ಯಕ್ತಿಗಳನ್ನು ಗೌರವದಿಂದ ಕಾಣಿ, ಕೇವಲ ಅಂಕಗಳಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸಂಸ್ಕಾರ ಕಲಿತ ಮಕ್ಕಳು ಸಮಾಜದಲ್ಲಿ ಗುರುತರವಾಗಿ ಉಳಿದುಕೊಳ್ಳಲಿದ್ದಾರೆ. ತಂದೆ, ತಾಯಿಗೆ ಹೆಚ್ಚು ಗೌರವಕೊಡಿ, ಇತ್ತೀಚಿಗೆ ಅನಾಥಾಶ್ರಮಗಳು ಹೆಚ್ಚಾಗುತ್ತಿದ್ದು, ಈಗಿನ ಕಾಲದಲ್ಲಿ ಪೋಷಕರಿಗೆ ಮಕ್ಕಳು ಎಷ್ಟು ಆದ್ಯತೆ ನೀಡುತ್ತಾರೆ ಎಂಬುದು ತೋರಿಸುತ್ತದೆ. ಕಾಲೇಜಿನಲ್ಲಿ ಶಿಕ್ಷಕರಿಗೆ ಗೌರವ ಕೊಡುವುದನ್ನು ಕಲಿಯಿರಿ. ಆಗ ವಿದ್ಯೆ ತಾನಾಗಿಯೇ ಒಲಿಯುತ್ತದೆ ಎಂದರು.ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸೊಪ್ಪಿನಹಳ್ಳಿ ಶಿವಣ್ಣ, ಕಲಾವಿದ ಪ್ರಸನ್ನ, ವೈದ್ಯಕೀಯ ಸೇವೆಯಲ್ಲಿ ಪ್ರಕಾಶ್, ಸಮಾಜ ಸೇವೆಯಲ್ಲಿ ಬಸವಣ್ಣಪ್ಪ, ಶಿಕ್ಷಣ ಕ್ಷೇತ್ರದಲ್ಲಿ ಬಿ. ಟಿ. ತ್ರಿಪುರಾಂಬ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಎಂ.ಮಹಾಲಿಂಗಯ್ಯ, ಪರಿಸರ ಪ್ರೇಮಿ ಸಿ.ಎನ್.ಅಶೋಕ್, ಕಾಲೇಜಿನ ಅಧ್ಯಕ್ಷ ಎ.ಬಿ.ಸುರೇಂದ್ರಕುಮಾರ್, ಪ್ರಾಂಶುಪಾಲ ಸುನಿಲ್ ಇದ್ದರು.ಚನ್ನರಾಯಪಟ್ಟಣದ ಟೈಮ್ಸ್ ಕಾಲೇಜು ವತಿಯಿಂದ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸೊಪ್ಪಿನಹಳ್ಳಿ ಶಿವಣ್ಣ ಹಾಗೂ ಮತ್ತಿತರರಿಗೆ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.