ಕನ್ನಡಪ್ರಭ ವಾರ್ತೆ ಮಂಡ್ಯ

ವರ್ತಮಾನದಲ್ಲಿ ಘಟಿಸುವ ಆವಿಷ್ಕಾರಗಳು ಮತ್ತು ಬದಲಾವಣೆಗಳು ಸಂಸ್ಕ್ರತಿಯನ್ನು ಆಧರಿಸಿರುತ್ತವೆ. ಸಮಾಜದಲ್ಲಿ ಬದಲಾವಣೆ ತರುವ ಪ್ರತಿಯೊಂದು ಅಂಶವು ಸಂಸ್ಕೃತಿಯಲ್ಲೂ ಬದಲಾವಣೆ ತರುತ್ತದೆ ಎಂದು ಲೇಖಕ ಕೊತ್ತತ್ತಿ ರಾಜು ತಿಳಿಸಿದರು.

ನಗರದ ಗಾಂಧಿಭವನದಲ್ಲಿ ಜ್ಞಾನದೀಪ ವಿದ್ಯಾಲಯ ಎಜುಕೇಷನ್ ಟ್ರಸ್ಟ್ ಹಾಗೂ ಅಗಮ್ಯ ಕಿಡ್ಸ್ ಕಾರ್ನರ್ ವತಿಯಿಂದ ಆಯೋಜಿಸಿದ್ದ ಅಗಮ್ಯ ಉತ್ಸವ-೧೧ ಹಾಗೂ ಅಗಮ್ಯ ರತ್ನ ಅವಾರ್ಡ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಶಸ್ತಿಯೂ ಒಬ್ಬ ವ್ಯಕ್ತಿಯ ಮಹೋನ್ನತ ಸೇವೆಗೆ ಗೌರವ. ಮತ್ತು ಸಾಧಕನ ಜವಾಬ್ದಾರಿಯನ್ನು ಹೆಚ್ಚಿಸುವ ಸಂಬಂಧ ಹೊಂದಿದೆ. ಸಾಧಕರು ವರ್ತಮಾನದಲ್ಲಿ ಜೀವಿಸುತ್ತಾ ಇತಿಹಾಸದಲ್ಲಿ ದಾಖಲಾಗಿ ಉಳಿಯುತ್ತಾರೆ. ಸಾಧಕರಿಗೆ ಸಾವಿದ್ದರೂ ಸಾಧನೆಗೆ ಎಂದಿಗೂ ಸಾವಿರುವುದಿಲ್ಲ ಎಂದರು.

ರಕ್ತದಾನ ಮಾಡುವುದೆಂದರೆ ಜೀವದಾನ ಮಾಡಿದಂತೆ. ಈವರೆಗೆ ೭೫ ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿರುವವರು ಪಿ.ಲಂಕೇಶ್ ಇದು ಮನುಷ್ಯ ಪ್ರೀತಿಯ, ಮಾನವತೆಯ ಕೈಂಕರ್ಯ ಎಂದರು.


ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಎಲ್.ರಮ್ಯಾ, ನೆಲದನಿ ಬಳಗದ ಅಧ್ಯಕ್ಷ ಮಂಗಲ ಪಿ.ಲಂಕೇಶ್ ಹಾಗೂ ಪ್ರತಿನಿಧಿ ಜಿಲ್ಲಾ ಹಿರಿಯ ವರದಿಗಾರ ಬಿ.ಜೆ. ಸೋಮಶೇಖರ್ ಅವರಿಗೆ ಅಗಮ್ಯ ರತ್ನ ಅವಾರ್ಡ್ ನೀಡಿ ಗೌರವಿಸಲಾಯಿತು.

ಅಗಮ್ಯ ಕಿಡ್ಸ್ ಕಾರ್ನರ್ ಮಕ್ಕಳು ನಿರರ್ಗಳವಾಗಿ ಭಗವದ್ಗೀತೆ ಪಠಣ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಅಗಮ್ಯ ಕಿಡ್ಸ್ ಕಾರ್ನರ್ ಅಧ್ಯಕ್ಷ ಬಿ.ಸೋಮಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಆರ್.ಗೀತಾ ಮಂಜು, ಕನ್ನಿಕಾ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಹೆಚ್.ಆರ್.ಕನ್ನಿಕ ಹಾಜರಿದ್ದರು.

ಇಂದು ಅಕ್ಷರ ಹೊಸ ಕಾವ್ಯ ವಸಂತ ಕವಿಗೋಷ್ಠಿ

ಮಂಡ್ಯ: ಪರಿಚಯ ಪ್ರಕಾಶನ ವತಿಯಿಂದ ನಗರದ ಗಾಂಧಿಭವನದಲ್ಲಿ ಫೆ.25ರಂದು ಅಕ್ಷರ ಹೊಸ ಕಾವ್ಯ ವಸಂತ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ. ಕವಿಗೋಷ್ಠಿಯನ್ನು ಸಾಹಿತಿ, ರಂಗಕರ್ಮಿ ಡಾ.ಸುಜಾತ ಅಕ್ಕಿ ಉದ್ಘಾಟಿಸುವರು. ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಅಧ್ಯಕ್ಷತೆ ವಹಿಸುವರು. ಪರಿಚಯ ಪ್ರಕಾಶನ ಸಂಸ್ಥಾಪಕ ಶಿವಕುಮಾರ್ ಆರಾಧ್ಯ ಪ್ರಾಸ್ತಾವಿಕವಾಗಿ ಮಾತನಾಡುವರು. ಅತಿಥಿಗಳಾಗಿ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್ ಕುಮಾರ್ , ಸಂಸ್ಕೃತಿ ಚಿಂತಕ ಪ್ರೊ.ಪ್ರಸನ್ನಕುಮಾರ್ ಕೆರಗೋಡು, ಕನ್ನಡ ಪರಿಚಾರಕ ಕೆ.ಟಿ.ಹನುಮಂತು, ಚಿತ್ರಕೂಟ ಮುಖ್ಯಸ್ಥ ಎಚ್.ಎಸ್.ಧನುಷ್ ಗೌಡ ಭಾಗವಹಿಸುವರು.