ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು
ಗ್ರಾಮೀಣ ಭಾಗದಲ್ಲಿ ಬಡ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ, ಗುಣಮಟ್ಟದ ಶಿಕ್ಷಣ ಒದಗಿಸುವ ಸಲುವಾಗಿ ಮಹಾದೇವ ತಾತ ಭಕ್ತ ಮಂಡಳಿ ವತಿಯಿಂದ ಸದ್ಗುರು ಮಹಾದೇವ ತಾತ ಪ್ರಾಥಮಿಕ ಶಾಲೆಯ ನೂತನ ಭವ್ಯ ಕಟ್ಟಡ ನಿರ್ಮಾಣವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.ಸಂಗಮ ಕ್ಷೇತ್ರದಲ್ಲಿರುವ ಶ್ರೀ ಸದ್ಗುರು ಮಹಾದೇವ ತಾತ ಭಕ್ತ ಮಂಡಳಿ ವತಿಯಿಂದ ನಿರ್ಮಿಸಲಾಗಿರುವ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನಿಗೆ ಜ್ಞಾನವೇ ಸಂಪತ್ತು, ವಿದ್ಯಾ ಸರ್ವತ್ರ ಪೂಜ್ಯತೆ ಎಂಬಂತೆ ಜ್ಞಾನ ಸಂಪಾದಿಸಿದಲ್ಲಿ ಎಲ್ಲ ಕಡೆ ಗೌರವಿಸಲ್ಪಡುತ್ತಾನೆ, ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಕೃತಕ ಬುದ್ಧಿಮತ್ತೆ ಮೂಲಕ ಮನುಷ್ಯನ ಅನೇಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತದೆ, ಜೊತೆಗೆ ಅಂತಹ ಕೃತಕ ಬುದ್ಧಿಮತ್ತೆ ಯುಗದಲ್ಲಿ ಮನುಷ್ಯ ಜ್ಞಾನ ಸಂಪಾದಿಸಿದಲ್ಲಿ ಮಾತ್ರ ಬದುಕಲು ಸಾಧ್ಯ, ಆದ್ದರಿಂದ ಮನುಷ್ಯನ ಆತ್ಮವಿಕಾಶಕ್ಕೆ ವ್ಯಕ್ತಿತ್ವದ ವಿಕಾಸಕ್ಕೆ ಶಿಕ್ಷಣ, ಜ್ಞಾನ ಸಂಪಾದಿಸಬೇಕು, ಗ್ರಾಮೀಣ ಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವ ಸಲುವಾಗಿ ಹಾಗೂ ಉತ್ತಮ ಧಾರ್ಮಿಕ ವಾತಾವರಣದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಂಸ್ಕಾರಯುತ, ಗುಣಮಟ್ಟದ ಶಿಕ್ಷಣ ಒದಗಿಸುವ ಸಲುವಾಗಿ ಸದ್ಗುರು ಮಹಾದೇವ ತಾತ ಭಕ್ತ ಮಂಡಳಿ ವತಿಯಿಂದ ನೂತನ ಶಾಲಾ ಕಟ್ಟಡ ಪ್ರಾರಂಭೋತ್ಸವ ಮಾಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಆಧುನಿಕತೆಯ ಭರಾಟೆಯ ನಡುವೆ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಘಟಿಸುತ್ತಿವೆ, ಅಂತಹ ಬದಲಾವಣೆಗೆ ಹೊಂದಿಕೊಂಡು ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು ಮೌಲ್ಯಯುತ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ದೊರಕಿಸಿಕೊಡಿ ಎಂದು ಕಿವಿಮಾತು ಹೇಳಿದರು.
ಸೂಕ್ಷ್ಮಮತಿ ಉತ್ತಮ ಜ್ಞಾನಿಗಳಾಗಿದ್ದರುಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಸದ್ಗುರು ಮಹಾದೇವ ತಾತಾ ಅವರು ಸೂಕ್ಷ್ಮಮತಿ ಉತ್ತಮ ಜ್ಞಾನಿಗಳಾಗಿದ್ದರು, ಅವರು ಜನರಿಗಾಗಿ ಬದುಕಿದ್ದರು, ಅವರು ಪ್ರೇರಕ ಶಕ್ತಿಯಾಗಿ ಇಂದಿಗೂ ಎಲ್ಲಾ ಭಕ್ತರಿಗೆ ಪ್ರೇರಣೆ ನೀಡುತ್ತಿದ್ದಾರೆ, ಶಾಮನೂರು ಶಿವಶಂಕರಪ್ಪ ಅವರ ಕುಟುಂಬ ಸದ್ಗುರು ಮಹಾದೇವತಾತ ಅವರ ಬಗ್ಗೆ ಅಪಾರ ಭಕ್ತಿಯನ್ನು ಇಟ್ಟಿದ್ದಾರೆ, ಆದ್ದರಿಂದಲೇ ಈ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಲು ಶಿಕ್ಷಣ ಸಂಸ್ಥೆಯನ್ನು ನಿರ್ಮಿಸಿದ್ದಾರೆ, ದಾನಿಗಳ ನೆರವಿನಿಂದ ಇಲ್ಲಿ ಉತ್ತಮ ಶಾಲಾ ಕಟ್ಟಡ ನಿರ್ಮಿಸಿದ್ದಾರೆ ಎಂದರು.
ಮಾಜಿ ಶಾಸಕ ಬಿ. ಹರ್ಷವರ್ಧನ್ ಮಾತನಾಡಿ, ಸಂಗಮ ಕ್ಷೇತ್ರ ಪವಾಡ ಕ್ಷೇತ್ರವಾಗಿದ್ದು, ಬಸವಣ್ಣನವರ ದಾಸೋಹ ಕಾಯಕ ಶಿಕ್ಷಣಕ್ಕೆ ಆದ್ಯತೆ ನೀಡಿ ಕೆಲಸ ಮಾಡುತ್ತಿದೆ, ಪ್ರವಾಹದ ವೇಳೆ ಈ ಕ್ಷೇತ್ರ ಮುಳುಗಡೆಯಾಗಿತ್ತು, ಪ್ರವಾಹ ತಪ್ಪಿಸುವ ಸಲುವಾಗಿ ನಾನು ಶಾಸಕನಾಗಿದ್ದ ವೇಳೆ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿ ತಡೆಗೋಡೆ ನಿರ್ಮಿಸಿ ಕೊಟ್ಟಿದ್ದೇನೆ ಎಂದರು.ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿದ್ಯಾರ್ಥಿ ನಿಲಯವನ್ನು ಪ್ರಾರಂಭಿಸಿ ಉತ್ತಮ ಶಿಕ್ಷಣ ದೊರಕಿಸಿಕೊಡಲು ನೆರವಾಗಿ ಎಂದರು.
ದೇವನೂರು ಗುರುಮಲ್ಲೇಶ್ವರ ಮಠದ ಮಹಾಂತ ಸ್ವಾಮೀಜಿ, ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಉಕ್ಕಿನಕಂತೆ ಮಠದ ಸಾಂಬ ಸದಾಶಿವ ಸ್ವಾಮೀಜಿ, ಶಿರಮಳ್ಳಿ ಮಠದ ಇಮ್ಮಡಿಮುರಘೀ ಸ್ವಾಮೀಜಿ, ಹುಲ್ಲಹಳ್ಳಿ ಮಠದ ಚನ್ನಮಲ್ಲದೇಶಕೇಂದ್ರ ಸ್ವಾಮೀಜಿ ಸೇರಿದಂತೆ ಹರ ಗುರು ಚರಮೂರ್ತಿಗಳು ಸಾನಿಧ್ಯ ವಹಿಸಿದ್ದರು.ಶಾಸಕರಾದ ಅನಿಲ್ ಚಿಕ್ಕಮಾದು, ಎಚ್.ಎಂ. ಗಣೇಶ್ ಪ್ರಸಾದ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎಸ್.ಎಂ. ಕೆಂಪಣ್ಣ, ಶ್ರೀ ಮಹಾದೇವ ತಾತ ಭಕ್ತ ಮಂಡಳಿಯ ಅಧ್ಯಕ್ಷ ಶಿವರಾಜಪ್ಪ, ನಿರ್ದೇಶಕರಾದ ಎಚ್.ಎಂ. ಕೆಂಡಗಣ್ಣಪ್ಪ, ಎಂ. ಮಾದಪ್ಪ, ಸಂಗಣ್ಣ ಇದ್ದರು.