ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಸಂದರ್ಭ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಹೇಳಿದರು.

ಕಾರ್ಕಳ : ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಸಂದರ್ಭ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಹೇಳಿದರು. ಕಾರ್ಕಳ ಎಎಸ್‌ಪಿ ಇಷಿತಾ ಗುಪ್ತ ಅವರ ನೇತೃತ್ವದಲ್ಲಿ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಕಾರ್ಕಳ ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ವಿವಿಧ ಧರ್ಮಗಳ ಸಮಿತಿ ಪ್ರತಿನಿಧಿಗಳನ್ನೊಳಗೊಂಡ ಶಾಂತಿ ಸಭೆಯಲ್ಲಿ ಮಾತನಾಡಿದರು.

ಗಣೇಶ ವಿಸರ್ಜನೆಗೆ ಬಳಸುವ ವಾಹನಗಳು ಸುಸ್ಥಿತಿಯಲ್ಲಿರಬೇಕು. ಚಾಲಕರಿಗೆ ಚಾಲನಾ ಪರವಾನಗಿ ಹೊಂದಿರಬೇಕು. ವಾಹನಕ್ಕೆ ಸೂಕ್ತ ವಿಮೆ ಇರಬೇಕು. ವಿಸರ್ಜನೆ ಸಂದರ್ಭದಲ್ಲಿ ನುರಿತ ಈಜುಗಾರರನ್ನು ನಿಯೋಜಿಸುವಂತೆ ಸೂಚಿಸಿದರು.

ಗ್ರಾಮಾಂತರ ಠಾಣೆ ಪಿಎಸ್ಐ ಪ್ರಸನ್ನ ಎಂ.ಎಸ್. ಸ್ವಾಗತಿಸಿ ಮಾತನಾಡಿ, ಗಣೇಶ ವಿಸರ್ಜನೆ ಸಂದರ್ಭ ರಾತ್ರಿ 10 ಗಂಟೆಯ ಬಳಿಕ ಡಿಜೆ ಸೇರಿದಂತೆ ಧ್ವನಿವರ್ಧಕಗಳನ್ನು ಬಳಸಲು ಅವಕಾಶವಿಲ್ಲ ಎಂದು ತಿಳಿಸಿದರು. ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆಯಲು ಪೊಲೀಸ್ ಇಲಾಖೆ ಕಾನೂನುಬದ್ಧವಾಗಿ ಅಗತ್ಯ ಸಹಕಾರ ನೀಡಲಿದೆ ಎಂದರು.ಕಾರ್ಕಳ ನಗರ ಠಾಣೆ ಪಿಎಸ್ಐ ಶಿವಕುಮಾರ್ ಗಣೇಶೋತ್ಸವ ಆಚರಣೆಯ ರೂಪುರೇಷೆ ಹಾಗೂ ಪೊಲೀಸ್ ಇಲಾಖೆಯ ಮಾರ್ಗಸೂಚಿಗಳನ್ನು ವಿವರಿಸಿದರು. ಗ್ರಾಮಾಂತರ ಕ್ರೈಂ ಎಸ್‌ಐ ನವೀನ್ ಪಿ. ಬೋರ್ಕರ್ ಉಪಸ್ಥಿತರಿದ್ದರು.