ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಅಂತರ್ಜಾಲ ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿದ್ದು, ಅದನ್ನು ಬಳಕೆ ಮಾಡುವಲ್ಲಿ ಸುರಕ್ಷಿತ ಹಾಗೂ ಜಾಗೃತಿ ವಹಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಹೇಳಿದರು.ಜಿಪಂ ಸಭಾಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ ಹಾಗೂ ಎನ್.ಐ.ಸಿ ಸಹಯೋಗದಲ್ಲಿ ಹಮ್ಮಿಕೊಂಡ ಸುರಕ್ಷಿತ ಅಂತರ್ಜಾಲ ದಿನ ಉದ್ಘಾಟಿಸಿ ಮಾತನಾಡಿ, ಬಹುತೇಕ ಜನ ಇಂಟರ್ನೆಟ್ ಇಲ್ಲದೆ, ಚಡಪಡಿಸುವ ಕಾಲ ಇದಾಗಿದೆ. ದಿನಕ್ಕೆ ಒಂದು 1 ರಿಂದ 3 ಜಿಬಿವರೆಗೆ ಡಾಟಾ ಬಳಕೆ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣವನ್ನು ನಿರ್ದಿಷ್ಟ ಚೌಕಟ್ಟಿನೊಳಗೆ ಬಳಸಬೇಕಿದೆ ಎಂದು ಹೇಳಿದರು.
ಇತ್ತೀಚೆಗೆ ಸೈಬರ್ ಕಳ್ಳರು ಚಾಲಾಕಿತನ ತೋರುತ್ತಿದ್ದು, ಜನರು ಜಾಗೃತರಾಗಬೇಕಿದೆ. ಇಂಟರ್ನೆಟ್ ಹಾಗೂ ಸಾಮಾಜಿಕ ಜಾಲತಾಣಗಳ ನಿಯಮಿತ ಬಳಕೆಯಿಂದ ದೂರ ಉಳಿಯಬೇಕು. ಅಂತರ್ಜಾಲದ ಸುರಕ್ಷತೆ ಹಾಗೂ ಜಾಗೃತಿಯ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಲು ಕೋರಿದರು.ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ವಿವಿಧ ಆಸೆ, ಆಮಿಷಗಳಿಗೆ ಬಲಿಯಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಸೈಬರ್ ವಂಚನೆಗೆ ಕಳೆದ ವರ್ಷ ₹28 ಸಾವಿರ ಕೋಟಿ ಕಳೆದುಕೊಂಡಿದ್ದಾರೆ. ಸೈಬರ್ ವಂಚನೆ ಪ್ರಕರಣ ಶೇ.35 ರಿಂದ 40ರವರೆಗೆ ಹೆಚ್ಚಾಗಿವೆ. ಇದು ಇನ್ನೂ ಆರಂಭಿಕ. ಬೆಂಗಳೂರು ಸೇರಿ ಬೇರೆ ನಗರಗಳಲ್ಲೂ ಸೈಬರ್ ವಂಚನೆ ಪ್ರಕರಣ ಕಂಡುಬರುತ್ತಿವೆ ಎಂದರು.
ಸೈಬರ್ ಕ್ರೈಂಗಳಲ್ಲಿ ಹಣ ಕಳೆದುಕೊಂಡವರು ಹೆಚ್ಚಿನವರು ವಿದ್ಯಾವಂತರೇ ಎಂಬುದು ಸೋಜಿಗದ ಸಂಗತಿ. ಇದಕ್ಕೆ ಜನರ ದುರಾಸೆ ಕಾರಣವಾಗಿದೆ. ಪೊಲೀಸ್ ಇಲಾಖೆ ಪತ್ರಿಕೆಗಳ ಮೂಲಕ 21 ದಿನಗಳ ಕಾಲ ನಿರಂತರವಾಗಿ ಮಾಹಿತಿ ನೀಡಲಾಗಿದೆ ಎಂದರು.ಜಿಪಂ ಜಿಇಒ ಶಶಿಧರ ಕುರೇರ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಆಮಿಷಗಳಿಗೆ ಮರುಳಾಗದೇ ಜಾಗೃತಿಯಿಂದ ಪಾಸ್ ವರ್ಡ್ಗಳನ್ನು ಕಾಲಕಾಲಕ್ಕೆ ಬದಲಾಯಿಸಿಕೊಳ್ಳಬೇಕು ಎಂದರು.
ಎನ್.ಐ.ಸಿ ಅಧಿಕಾರಿ ಗಿರಿಯಾಚಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೈಬರ್ ಕ್ರೈಂ ವಿಭಾಗದ ಡಿವೈಎಸ್ಪಿ ಮಂಜುನಾಥ ದಂಗಲ್ ಸೈಬರ್ ವಂಚನೆ ಬಗ್ಗೆ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಆಹಾರ ಇಲಾಖೆ ಜಂಟಿ ನಿರ್ದೇಶಕರು ಸ್ವಾಗತಿಸಿದರು.ನಿಮ್ಮ ಒಂದು ತಪ್ಪಿನಿಂದ ನಿಮ್ಮ ಸಂಪೂರ್ಣ ಡಾಟಾ ಬೇರೆಯವರ ಕೈ ಸೇರುತ್ತದೆ. ಇದರ ಮೂಲಕ ಜಗತ್ತಿನ ಯಾವುದೇ ಮೂಲೆಯಿಂದ ನಿಮ್ಮ ಅಕೌಂಟ್ ಖಾಲಿ ಮಾಡಬಹುದಾಗಿದೆ. ವಂಚನೆಗೊಳಗಾದ 1 ಗಂಟೆಯೊಳಗೆ ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಿದಲ್ಲಿ ಹಣ ಮರಳಿಸುವ ಕಾರ್ಯ ಮಾಡಲಾಗುತ್ತದೆ.-ಅಮರನಾಥ ರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ