ಸಾರಾಂಶ
ಸಾಗರ ಪಟ್ಟಣದ ನಗರಸಭೆ ಆಡಳಿತಾಧಿಕಾರಿ ಆರ್.ಯತೀಶ್ ₹೧.೧೬ ಕೋಟಿ ಮೊತ್ತದ ಉಳಿತಾಯ ಬಜೆಟ್ ಮಂಡಿಸಿದರು. ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ₹೪೪.೫೩ ಕೋಟಿಗಳ ಆದಾಯ ಜಾಗೂ ₹೪೩.೩೭ ಕೋಟಿ ವೆಚ್ಚದ ಬಜೆಟ್ ಮಂಡಿಸಿದರು.
ಕನ್ನಡಪ್ರಭ ವಾರ್ತೆ ಸಾಗರ ಪಟ್ಟಣದ ನಗರಸಭೆ ಆಡಳಿತಾಧಿಕಾರಿ ಆರ್.ಯತೀಶ್ ₹೧.೧೬ ಕೋಟಿ ಮೊತ್ತದ ಉಳಿತಾಯ ಬಜೆಟ್ ಮಂಡಿಸಿದರು.
ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ₹೪೪.೫೩ ಕೋಟಿಗಳ ಆದಾಯ ಜಾಗೂ ₹೪೩.೩೭ ಕೋಟಿ ವೆಚ್ಚದ ಬಜೆಟ್ ಮಂಡಿಸಿದರು.ಪಟ್ಟಣದ ಸಮಗ್ರ ಅಭಿವೃದ್ಧಿ ಯೋಜನೆ, ಸದಸ್ಯರ ಭವನ ನಿರ್ಮಾಣ, ನಗರಸಭೆ ಕಚೇರಿ ಕಟ್ಟಡದ ಮೇಲ್ಭಾಗದಲ್ಲಿ ಸೋಲಾರ್ ಅಳವಡಿಸಿ ವಿದ್ಯುತ್ ಸ್ವಾವಲಂಬನೆಯತ್ತ ಮುಖ ಮಾಡುವುದು, ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವ ₹೪.೧೯ ಕೋಟಿ ವೆಚ್ಚದ ಯೋಜನೆಗಳು ಸೇರಿದಂತೆ ಒಟ್ಟಾರೆ ₹೪೪ ಕೋಟಿ ಮೊತ್ತದ ಆಯವ್ಯಯ ಮಂಡಿಸಲಾಗಿದೆ.
ಮುಖ್ಯವಾಗಿ ಪಟ್ಟಣದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಆರೋಗ್ಯ ಮೇಳ, ಉದ್ಯೋಗ ಸೃಜಿಸಲು ಖಾಸಗಿ ಕಂಪೆನಿಗಳ ಸಹಭಾಗಿತ್ವದಲ್ಲಿ ಉದ್ಯೋಗ ಮೇಳ, ಪ.ಜಾ. ಹಾಗೂ ಪ.ಪಂ., ಹಿಂದುಳಿದ ವರ್ಗಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವ ಹಲವು ಯೋಜನೆಗಳು ಸೇರಿವೆ.ಬಜೆಟ್ನ ಪ್ರಮುಖ ಅಂಶ:
ಪಟ್ಟಣದ ವಿವಿಧ ಭಾಗದಲ್ಲಿ ಸಮುದಾಯ ಭವನ ಹಾಗೂ ರಂಗ ಮಂದಿರಗಳ ನಿರ್ಮಾಣ ಹಾಗೂ ಅಭಿವೃದ್ಧಿಗೆ ₹೩೫ ಲಕ್ಷ, ಬೀದಿದೀಪ ಮತ್ತು ನೀರು ಸರಬರಾಜು ನಿರ್ವಹಣೆಗೆ ವಿದ್ಯುತ್ ವೆಚ್ಚ ₹೭.೪೬ ಕೋಟಿ, ರಸ್ತೆ ಮತ್ತು ಚರಂಡಿ ದುರಸ್ತಿ ನಿರ್ವಹಣೆಗೆ ₹೫೦ ಲಕ್ಷ, ವಿದ್ಯುತ್ ಉಳಿತಾಯ ಮತ್ತು ಪರಿಸರ ಸ್ನೇಹಿ ಯೋಜನೆಗೆ ₹೧೦ ಲಕ್ಷ, ನೌಕರರಿಗೆ ವಸತಿ ಸೌಲಭ್ಯ ನಿರ್ಮಿಸಲು ಮತ್ತು ವಸತಿ ದುರಸ್ತಿಗಾಗಿ ₹೫೦ ಲಕ್ಷ, ಗೋಪಾಲಗೌಡ ಕ್ರೀಡಾಂಗಣವನ್ನು ಇನ್ನಷ್ಟು ಆಧುನೀಕರಣಗೊಳಿಸಿ ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯಕಲ್ಪಿಸುವುದಕ್ಕೆ ₹೫೦ ಲಕ್ಷ, ಆಟದ ಮೈದಾನ, ಖಾಲಿ ಭೂಮಿಗಳ ಅಭಿವೃದ್ಧಿ ಕಾಮಗಾರಿಗೆ ₹೨೫ ಲಕ್ಷ, ಫುಡ್ ಕೋರ್ಟ್ ನಿರ್ಮಾಣಕ್ಕೆ ₹೨೫ ಲಕ್ಷ, ಪ್ರವಾಸಿಗರು, ಜನರ ಅನುಕೂಲಕ್ಕಾಗಿ ಹಲವೆಡೆ ಸಾರ್ವಜನಿಕ ಶೌಚಾಲಯ ನಿರ್ಮಿಸಲು ₹೨೫ ಲಕ್ಷ, ಕೆರೆಗಳ ಅಭಿವೃದ್ಧಿ ಮತ್ತ ಅಂತರ್ಜಲಮಟ್ಟ ವೃದ್ಧಿಸಲು ₹೫೦ ಲಕ್ಷ, ಸಾರ್ವಜನಿಕ ಸ್ಥಳದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ₹೧೦ ಲಕ್ಷ, ಉದ್ಯಾನಗಳ ಅಭಿವೃದ್ಧಿ ಮತ್ತು ಮಕ್ಕಳ ಆಟಿಕೆ, ವ್ಯಾಯಾಮ ಸಲಕರಣೆ ಅಳವಡಿಸಲು ₹೫೦ ಲಕ್ಷ, ಸುಸಜ್ಜಿತ ರಂಗಮಂದಿರ ನಿರ್ಮಿಸಲು ₹೪.೮೦ ಕೋಟಿ ಸೇರಿದಂತೆ ವಿವಿಧ ಉದ್ದೇಶವಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ.ಸಭೆಯಲ್ಲಿ ಪೌರಾಯುಕ್ತ ಎಚ್.ಕೆ. ನಾಗಪ್ಪ, ಪರಿಸರ ಅಭಿಯಂತರ ಮದನ್ ಹಾಗೂ ನಗರಸಭೆ ಸದಸ್ಯರು ಇದ್ದರು.
- - - -೧ಕೆ.ಎಸ್.ಎ.ಜಿ.೧:ಸಾಗರ ನಗರಸಭೆಯಲ್ಲಿ ೨೦೨೪-೨೫ನೇ ಸಾಲಿನ ಆಯವ್ಯಯವನ್ನು ಮಂಡಿಸಲಾಯಿತು.