ಸಾರಾಂಶ
ಹುಬ್ಬಳ್ಳಿ: ನಗರದ ದಾಜಿಬಾನ್ ಪೇಟೆಯ ದುರ್ಗಾದೇವಿ ದೇವಸ್ಥಾನದಲ್ಲಿ ಎಸ್ಎಸ್ಕೆ ಪಂಚ ಟ್ರಸ್ಟ್ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಕಳೆದ ಆರು ದಿನಗಳಿಂದ ನಡೆಯುತ್ತಿರುವ ಶ್ರೀ ಸಹಸ್ರ ಚಂಡಿಕಾಯಾಗ ಗುರುವಾರವು ಮುಂದುವರಿದಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.
ಬೆಳಗ್ಗೆ 6ಕ್ಕೆ ದೇವಿಗೆ ಅಲಂಕಾರ ಪೂಜೆ, ಶ್ರೀರುದ್ರಪಾರಾಯಣ, ಶ್ರೀರುದ್ರ ಏಕಾದಶಿ ಹೋಮ ನಡೆಯಿತು. ಸಂಜೆ 5ಕ್ಕೆ ಶ್ರೀ ದುರ್ಗಾದೇವಿ ದೇವಸ್ಥಾನದ ಹಿಂದಿನ ಶಾಲೆಯ ಆವರಣದಲ್ಲಿ ಶ್ರೀ ಸಹಸ್ರಚಂಡಿಕಾ ಯಾಗದ ಕಲಶ ಸ್ಥಾಪನೆ, ಮಂಡಲಾರಾಧನೆ, ಅಷ್ಟಾವಧಾನ ಸೇವೆ, ಹೋಮ ತಯಾರಿ ನಡೆದವು.ಸಂಜೆ 6ರಿಂದ ರಾತ್ರಿ 8ರವರೆಗೆ ಪಂಜಿನ ಬೆಳಕಿನಲ್ಲಿ ಉಯ್ಯಾಲೆಯಲ್ಲಿರುವ ಅಮ್ಮನವರ ಪೂಜೆ, ಮಂಡಲಪೂಜೆ ಮತ್ತು ಗುರುವೃಂದದವರಿಂದ ವಿಶೇಷ ಪ್ರವಚನ ಜರುಗಿತು.
ಸಹಸ್ರ ಚಂಡಿಕಾಯಾಗದ ಪೂಜಾ ಕಾರ್ಯಗಳ ನೇತೃತ್ವ ವಹಿಸಿರುವ ಬೆಂಗಳೂರಿನ ವೇದಬ್ರಹ್ಮ ಶ್ರೀ ಚಂದ್ರೇಶ ಶರ್ಮಾ, ಹುಬ್ಬಳ್ಳಿಯ ವೇದಬ್ರಹ್ಮ ಶ್ರೀ ರವೀಂದ್ರಾಚಾರ್ಯ ಅವರನ್ನೊಳಗೊಂಡ 100 ಜನ ಪುರೋಹಿತರಿಂದ 1 ಸಾವಿರ ಸಂಖ್ಯೆ ಶ್ರೀ ದುರ್ಗಾಸಪ್ತಶತೀ ಪಾರಾಯಣ ಸಂಖ್ಯಾ ಪರಿಪೂರ್ತಿಗಾಗಿ ಪಾರಾಯಣವು 4ನೇ ದಿನವು ಮುಂದುವರಿಯಿತು.ಶ್ರೀದೇವಿಗೆ ನಿತ್ಯ ಬೆಳಗ್ಗೆ ಪಂಚಾಮೃತ ಅಭಿಷೇಕ, ಮಹಾಭಿಷೇಕ, ವಿಶೇಷ ಅಲಂಕಾರ, ವಿಶೇಷ ನೈವೇದ್ಯ, ಮಹಾಮಂಗಳಾರತಿ, ದೇವಿಯ ಸಾನ್ನಿನಿಧ್ಯ ವೃದ್ಧಿಗೆ ಕಲಾ ಹೋಮಾದಿಗಳು ನಡೆದವು. ಸಂಪೂರ್ಣ ಚತುರ್ವೇದ ಪಾರಾಯಣ, ಮಾರ್ಕಂಡೇಯ ಪುರಾಣ ಪಾರಾಯಣ ನಡೆಯಿತು. ನಂತರ 250 ದಂಪತಿಗಳಿಂದ ಸಂಕಲ್ಪ ಪೂಜೆ ನಡೆಯಿತು. ಸಾವಿರಾರು ಜನ ಭಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು.
ಸಮಾರಂಭದಲ್ಲಿ ಎಸ್ಎಸ್ಕೆ ಪಂಚ ಟ್ರಸ್ಟ್ ಕಮಿಟಿ ಗೌರವ ಕಾರ್ಯದರ್ಶಿ ಭಾಸ್ಕರ ಎನ್. ಜಿತೂರಿ, ಜಾಯಿಂಟ್ ಚೀಫ್ ಟ್ರಸ್ಟಿ ನೀಲಕಂಠ ಜಡಿ, ಚೀಫ್ ಟ್ರಸ್ಟಿ ತಾರಾಸಾ ಧೋಂಗಡಿ, ಕೋಶಾಧಿಕಾರಿ ಅಶೋಕ ಕೆ. ಕಲಬುರ್ಗಿ, ಟ್ರಸ್ಟಿಗಳಾದ ನಾಗೇಂದ್ರ ಹಬೀಬ, ಅಶೋಕ ಪವಾರ ಸೇರಿದಂತೆ ಪಂಚಾಯಿತಿ ಘಟಕದ ಹಿರಿಯರು, ಯುವಕರು, ಮಹಿಳಾ ಮಂಡಳ ಸದಸ್ಯರು ಭಾಗವಹಿಸಿದ್ದರು.ಇಂದಿನ ಕಾರ್ಯಕ್ರಮ
ಮೇ 9ರಂದು ಬೆಳಗ್ಗೆ 5.30ಕ್ಕೆ 10 ಜನ ಋುತ್ವಿಜರಂತೆ 10 ಹೋಮಕುಂಡಗಳಲ್ಲಿ ಒಟ್ಟು 100 ವಿದ್ವಜ್ಜನ ಪುರೋಹಿತರಿಂದ 50 ಸಹಾಯಕ ಪುರೋಹಿತ ವೃಂದದಿಂದ ಸಹಸ್ರಚಂಡಿಕಾಹೋಮ ನಡೆಯಲಿದೆ. ನಂತರ ತರ್ಪಣೆ, ನಮಸ್ಕಾರ, ಮಹಾಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ ಇರಲಿದೆ. ಮಧ್ಯಾಹ್ನ 12ಕ್ಕೆ ಗಣ್ಯದಾನಿಗಳಿಂದ ಶ್ರೀ ಸಹಸ್ರಚಂಡಿಕಾಯಾಗದ ಪೂಜಾಫಲ ಅರ್ಪಣೆ ನಂತರ ವಿದ್ವಜ್ಜನ ಬ್ರಾಹ್ಮಣರಿಗೆ ಫಲಸಹಿತ ತಾಂಬೂಲ-ಗೌರವಾರ್ಪಣೆ, ಮಧ್ಯಾಹ್ನ ಮಹಾಪ್ರಸಾದ ಇರಲಿದೆ. ಸಂಜೆ 6ಕ್ಕೆ ಅವಭೃತಸ್ನಾನ, ಶ್ರೀದೇವಿಯ ಪೂಜಾ ಮೂರ್ತಿ ಮೆರವಣಿಗೆ ಹಾಗೂ ಇಂದಿರಾ ಗ್ಲಾಸ್ಹೌಸ್ ಬಾವಿಯಲ್ಲಿ ಮೂರ್ತಿಯ ವಿಸರ್ಜನೆ ನಡೆಯಲಿದೆ.