ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಅಭಿವೃದ್ಧಿ ಕಲಿಕೆ ಕಾರ್ಯಕ್ರಮದಡಿಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿ-ಕಲಿಸುವಲ್ಲಿ ಸಾಧನೆ ಮಾಡಿದ ಸಾಹೆ ವಿಶ್ವವಿದ್ಯಾಲಯಕ್ಕೆ ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ಕೊಡಮಾಡುವ 2025 ನೇ ವರ್ಷದ ಪ್ರೋಸ್ಪೆಕ್ಟ್ ರಾಷ್ಟ್ರೀಯ ಪ್ರಶಸ್ತಿ ಗೆ ಮತ್ತೊಮ್ಮೆ ಪಾತ್ರವಾಗಿದೆ. ಪ್ರಶಸ್ತಿ ಪಡೆದ ದಕ್ಷಿಣ ಭಾರತದ ರಾಜ್ಯಗಳಲ್ಲಿ, ಅದರಲ್ಲೂ ಕರ್ನಾಟಕದ ಬೆರಳೆಣಿಕೆಯಷ್ಟು ಕಾಲೇಜುಗಳಲ್ಲಿ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು ಕೂಡ ಒಂದಾಗಿದೆ. ಈ ಸಾಲಿನ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಅಭಿವೃದ್ದಿ ಕಾರ್ಯಕ್ರಮ ದಡಿಯಲ್ಲಿ ಸುಮಾರು 1300 ವಿದ್ಯಾರ್ಥಿಗಳು ನೋಂದಾಯಿಸಿ ಆನ್ಲೈನ್ ಮೂಲಕ ಪರೀಕ್ಷೆಯಲ್ಲಿ ಭಾಗವಹಿಸಿದ್ದಾರೆ.ಸಾಹೇ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಶ್ರೀ ಸಿದ್ದಾರ್ಥ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅತಿ ಹೆಚ್ಚಿನ ವಿದ್ಯಾರ್ಥಿಗಳು ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಅಭಿವೃದ್ಧಿ ಕಲಿಕೆ ಯೋಜನೆಯಲ್ಲಿ ಭಾಗವಹಿಸಿರುವ ಹಿನ್ನೆಲೆಯಲ್ಲಿ ಖರಗಪುರದ ಐಐಟಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಸಾಹೇ ನೋಡಲ್ ಅಧಿಕಾರಿ ಡಾ. ಪ್ರವೀಣ್ ಕುಮಾರ್. ಸಿ, ಅವರು ಭಾಗವಹಿಸಿ ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯ ಪ್ರಶಸ್ತಿಯನ್ನು ಸ್ವೀಕರಿಸಿದರು.ತಾಂತ್ರಿಕ ಮಾಹಿತಿ ಭಂಡಾರವನ್ನು ದೇಶದ ಎಲ್ಲಾ ತಾಂತ್ರಿಕ ವಿದ್ಯಾರ್ಥಿಗಳು ತಮ್ಮ ಆಲೋಚನೆ ಅಭಿವೃದ್ಧಿ ಗುಣಮಟ್ಟದ ವಿಷಯಗಳನ್ನು ಕಲಿಯುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಶ್ರೀ ಸಿದ್ದಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಾಹೇ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಈ ಯೋಜನೆಯ ಸದಾವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ. ತಾಂತ್ರಿಕ ಮಾಹಿತಿ ಭಂಡಾರವನ್ನು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಬಳಸಿಕೊಳ್ಳಲು ವೇದಿಕೆಯನ್ನು ಸಿದ್ಧಪಡಿಸಲಾಗಿದೆ.ಈ ಕಾರ್ಯಕ್ರಮದ ಯೋಜನೆಯಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಎನ್ಪಿಟಿಇಎಲ್ ಕಾರ್ಯಕ್ರಮದಲ್ಲಿ ನೋಂದಾಯಿಸಲು ಹೆಚ್ಚಿನ ಆಸಕ್ತಿ ತೆಗೆದುಕೊಳ್ಳಲಾಗುವುದು. ಇದರಿಂದ ವಿದ್ಯಾರ್ಥಿಗಳ ತಾಂತ್ರಿಕ ಉನ್ನತಿಗೆ ಹಾಗೂ ಉನ್ನತ ಸಂಸ್ಥೆಗಳಲ್ಲಿನ ನೌಕರಿಗೆ ಸಹಾಯಕವಾಗಲಿದೆ ಎಂದು ಶ್ರೀ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎಸ್.ರವಿಪ್ರಕಾಶ ಅವರು ಅಭಿಪ್ರಾಯಪಟ್ಟಿದ್ದಾರೆ.ಯೋಜನೆಯ ಸಂಯೋಜಕ ಡಾ.ಪ್ರವೀಣ್ ಅವರು, ಖರಗಪುರದ ಪಡೆದ ಪ್ರಶಸ್ತಿಯನ್ನು ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ಕುಲಾಧಿಪತಿಗಳ ಸಲಹೆಗಾರರಾದ ಡಾ.ವಿವೇಕ್ ವೀರಯ್ಯ, ಪ್ರಾಂಶುಪಾಲರಾದ ಡಾ. ಎಂ.ಎಸ್.ರವಿಪ್ರಕಾಶ ಅವರ ಸಮ್ಮುಖದಲ್ಲಿ ಸಾಹೇ ವಿವಿಗೆ ಹಸ್ತಾಂತ್ತರಿಸಿದರು. ಸಾಹೇ ವಿವಿಯ ಯೋಜನೆಯ ಸಂಯೋಜಕ ಡಾ.ಪ್ರವೀಣ್,ಕಾಲೇಜಿನ ಸಂಯೋಜಕಿ ಡಾ.ರೂಪ ಎನ್. ಕೆ ಸೇರಿದಂತೆ ತಂಡದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಡಾ. ಜಿ.ಪರಮೇಶ್ವರ ಶ್ಲಾಘನೆ:ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಗೆ ವೇಗವರ್ಧಕವಾಗಿ ತಾಂತ್ರಿಕ ಶಿಕ್ಷಣದ ಪಾತ್ರವು ಅನಿವಾರ್ಯವಾಗಿದೆ. ಶಿಕ್ಷಣದಲ್ಲಿ ಉತ್ಕೃಷ್ಟತೆ ಮತ್ತು ನಾವೀನ್ಯತೆಯನ್ನು ಬೆಳೆಸಲು ಮತ್ತು ಪ್ರಗತಿಯತ್ತ ದಾಪುಗಾಲು ಹಾಕುವ ನಿಟ್ಟಿನಲ್ಲಿ ಸಾಹೇ ವಿಶ್ವವಿದ್ಯಾಲಯವೂ ಮುಂಚೂಣಿಯಲ್ಲಿ ನಿಲ್ಲುತ್ತದೆ ಎಂದು ಸಾಹೇವಿವಿ ಕುಲಾಧಿಪತಿ ಡಾ. ಜಿ.ಪರಮೇಶ್ವರ ಅವರು, ಪ್ರಶಸ್ತಿಗೆ ಭಾಜನರಾದ ಕಾಲೇಜು ಮತ್ತು ಪ್ರಾಧ್ಯಾಪಕ ತಂಡದ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.