ಸಾಹಿತ್ಯ ಸಮ್ಮೇಳನ ಒಗ್ಗಟ್ಟಿನಿಂದ ಆಚರಿಸೋಣ: ಗದ್ದುಗೆ

| Published : Feb 13 2024, 12:47 AM IST

ಸಾಹಿತ್ಯ ಸಮ್ಮೇಳನ ಒಗ್ಗಟ್ಟಿನಿಂದ ಆಚರಿಸೋಣ: ಗದ್ದುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಶಹಾಪುರ ಸಮೀಪದ ಭೀಮರಾಯನಗುಡಿಯಲ್ಲಿ 4ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡಪರ ಹಾಗೂ ಸರಕಾರಿ ಮತ್ತು ಸರಕಾರೇತರ ಸಂಘ-ಸಂಸ್ಥೆಗಳ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಶಹಾಪುರ

ಫೆಬ್ರವರಿ ಕೊನೆಯ ವಾರದಲ್ಲಿ ನಡೆಯಲಿರುವ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಲ್ಲಾ ಸಂಘ-ಸಂಸ್ಥೆಗಳ ಕಾರ್ಯಕರ್ತರು ಒಗ್ಗಟ್ಟಿನಿಂದ ಹಾಗೂ ಸಡಗರ- ಸಂಭ್ರಮದಿಂದ ಆಚರಿಸಿ ಇತಿಹಾಸ ನಿರ್ಮಿಸೋಣ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕ ಭಾಗದ ಅಧ್ಯಕ್ಷ ಶರಣು ಗದ್ದುಗೆ ಅವರು ಮನವಿ ಮಾಡಿದರು.

ಶಹಾಪುರದಲ್ಲಿ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ, ಭಾನುವಾರ ಸಮೀಪದ ಭೀಮರಾಯನಗುಡಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಕನ್ನಡಪರ ಹಾಗೂ ಸರಕಾರಿ ಮತ್ತು ಸರಕಾರೇತರ ಸಂಘ-ಸಂಸ್ಥೆಗಳ ಸಭೆಯಲ್ಲಿ ಅವರು ಮಾತನಾಡಿದರು.

ಉಪನ್ಯಾಸಕ ಅಂಬ್ಲಯ್ಯ ಸೈದಾಪುರ ಮಾತನಾಡಿ, ಸಮ್ಮೇಳನದಲ್ಲಿ ಕನ್ನಡದ ವರ್ತಮಾನದ ಬಿಕ್ಕಟ್ಟುಗಳು ಎಂಬ ಗೋಷ್ಠಿ ಏರ್ಪಡಿಸಬೇಕು ಎಂದರು. ಡಾ. ಗೋವಿಂದರಾಜ ಆಲ್ದಾಳ ಮಾತನಾಡಿ, ಸಮ್ಮೇಳನದ ಮೆರವಣಿಗೆಯಲ್ಲಿ ಶಹಾಪುರ ತಾಲೂಕಿನ ಜಾನಪದ ಕಲೆಗಳು ಅನಾವರಣಗೊಳ್ಳಬೇಕು ಎಂದು ಸಲಹೆ ನೀಡಿದರು.

ದಲಿತಪರ ಸಂಘಟಕ ನಾಗಣ್ಣ ಬಡಿಗೇರ, ಶ್ರೀಶೈಲ ಬಿರಾದಾರ್, ಬಿ.ಆರ್.ಸಿ. ಅಧಿಕಾರಿ ಮಷಾಕ್ ಇನಾಂದಾರ, ಬಸವರಾಜ ಹಿರೇಮಠ, ಭೀಮಣ್ಣಗೌಡ ಎನ್. ಪಾಟೀಲ್ ಮುಂತಾದವರು ಸಮ್ಮೇಳನದ ಸ್ವರೂಪದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಕಸಾಪ ತಾಲೂಕಾಧ್ಯಕ್ಷ ಡಾ. ರವೀಂದ್ರನಾಥ ಹೊಸ್ಮನಿ ಮಾತನಾಡಿ, ಕನ್ನಡ ನಾಡು-ನುಡಿಯ ಸಂಸ್ಕೃತಿಯನ್ನು ಪ್ರತಿಭಿಂಬಿಸುವ ಸಮ್ಮೇಳನ ಅಚ್ಚುಕಟ್ಟಾಗಿ ಮತ್ತು ಯಶಸ್ವಿಯಾಗಿ ನಡೆದು ಹೊಸ ಸಾಧ್ಯತೆಗಳಿಗೆ ನಾಂದಿಯಾಡಲು ಕನ್ನಡಪರ ಮತ್ತು ವಿವಿಧ ಸಂಘಟನೆಗಳ ಸಹಕಾರ, ಮಾರ್ಗದರ್ಶನ ಮತ್ತು ಪ್ರೋತ್ಸಾಹ ಅಗತ್ಯ ಎಂದರು.

ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಶಾಂತರಡ್ಡಿ, ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಕಾರ್ಯದರ್ಶಿ ಗುರುಲಿಂಗಪ್ಪ ಸಾಗರ, ಭೀಮರಾಯನಗುಡಿ ವಲಯ ಕಸಾಪ ಅಧ್ಯಕ್ಷ ಶರಣಬಸವ ಪೊಲೀಸ್ ಬಿರಾದಾರ್, ಸಗರ ವಲಯ ಕಸಾಪ ಅಧ್ಯಕ್ಷ ಡಾ. ದೇವಿಂದ್ರಪ್ಪ ಹಡಪದ, ತಾಲೂಕು ಕಸಾಪ ಕೋಶಾಧ್ಯಕ್ಷ ಶಂಕರ ಹುಲ್ಕಲ್, ಗೌರವ ಕಾರ್ಯದರ್ಶಿಗಳಾದ ಸುರೇಶಬಾಬು ಅರುಣಿ, ರಾಘವೇಂದ್ರ ಹಾರಣಗೇರಾ, ಮಾಳಪ್ಪ ಪೂಜಾರಿ, ಮರೆಪ್ಪ ಇನಾಂದಾರ, ಸುಭಾಷ್ ಹೋತಪೇಟ, ಮಲ್ಲಿನಾಥ ಬಡಿಗೇರ, ಹೊನ್ನಪ್ಪ ಗಂಗನಾಳ, ರಾಮಚಂದ್ರಪ್ಪ ಸಗರ, ಕಾಶಿಂಸಾಬ ನಡಿಗೇರಿ ಇತರರಿದ್ದರು.