ಶಿರಹಟ್ಟಿ: ಬಂಜಾರ ಸಮಾಜ ಮನುಕುಲದ ಏಳಿಗೆಯನ್ನು ಕುಲಗುರು ಸಂತ ಸೇವಾಲಾಲರು ಬಯಸಿದ್ದರು. ಸಂತ ಸೇವಾಲಾಲ್ ಮಹಾರಾಜರು ಕರ್ನಾಟಕದ ಪ್ರಮುಖ ದಾರ್ಶನಿಕರಲ್ಲಿ ಒಬ್ಬರು ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ ತಿಳಿಸಿದರು.ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ೨೮೭ನೇ ಸಂತ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಸೇವಾಲಾಲ್‌ ಅವರು ಬಂಜಾರ ಸಮುದಾಯದ ಆರಾಧ್ಯ ದೈವ. ಜನಾಂಗದಲ್ಲಿ ಅಪಾರ ಬದಲಾವಣೆ ತಂದು ಸಾಂಸ್ಕೃತಿಕ ರಾಯಭಾರಿಯಾದರು. ಅವರ ತತ್ವಾದರ್ಶಗಳು ಎಂದೆಂದಿಗೂ ಪ್ರಸ್ತುತವಾಗಿವೆ ಎಂದರು.

ಸೇವಾಲಾಲರು ವಿಶ್ವದ ಕಾಲಜ್ಞಾನಿಯಾಗಿದ್ದರು. ಮುಂದೆ ಆಗುವ ಘಟನೆಗಳನ್ನು ಮೊದಲೇ ಹೇಳುತ್ತಿದ್ದರು. ನಾಗರಿಕತೆಯ ಅರಿವೇ ಇಲ್ಲದ ಜನಾಂಗವೊಂದು ಸಂತ ಸೇವಾಲಾಲ್ ಮಹಾರಾಜರ ತತ್ವ, ಆದರ್ಶಗಳನ್ನು ಚಾಚು ತಪ್ಪದೇ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶ, ರಾಜ್ಯಕ್ಕೆ ತಮ್ಮ ಸಾಧನೆ ತೋರಿಸಿಕೊಟ್ಟಿದ್ದಾರೆ ಎಂದರು.ಅಹಿಂಸೆಯ ತತ್ವಗಳಡಿ ಬಾಳಬೇಕು. ಅಂದಾಗ ಮಾತ್ರ ಒಳ್ಳೆಯ ನಾಗರಿಕರಾಗಿ ಬೆಳೆಯಲು ಸಾಧ್ಯ ಎಂಬುದನ್ನು ಸೇವಾಲಾಲ್ ಮಹಾರಾಜರು ಸುಮಾರು ೨೫೦ ವರ್ಷಗಳ ಹಿಂದೆಯೇ ಸಮಾಜಕ್ಕೆ ನೀಡಿದ ಸಂದೇಶವನ್ನು ಅರಿತಿರುವ ಲಂಬಾಣಿ ಸಮುದಾಯ ಸುಧಾರಣೆ ಕಂಡಿದ್ದಾರೆ. ೧೭೩೯ರಲ್ಲಿ ಜನಿಸಿದ ಸಂತ ಸೇವಾಲಾಲ್ ಮಹಾರಾಜರ ತತ್ವ ನಾಗರಿಕ ಸಮಾಜಕ್ಕೆ ದಾರಿದೀಪಗಳಾಗಿವೆ ಎಂದರು.ತಾಪಂ ಮಾಜಿ ಅಧ್ಯಕ್ಷ ಜಾನು ಮಾಣಿ ಮಾತನಾಡಿ, ಭಾರತ ಸಾಧು, ಸಂತರ ನಾಡು. ಇಲ್ಲಿ ಸಂತರು, ಶರಣರು ಆಧ್ಯಾತ್ಮಿಕ ಸಾಧನೆಯಿಂದ ಸಮಾಜದಲ್ಲಿ ಜಾಗೃತಿ ಮೂಡಿಸುವ ಜತೆಗೆ ನಾಡಿನ ಪ್ರಗತಿಗೆ ಅಮೋಘ ಕೊಡುಗೆ ನೀಡಿದ್ದಾರೆ. ಜಾತಿ ಎಲ್ಲೆ ಮೀರಿ ಸಮಾಜದಲ್ಲಿ ಜಾತ್ಯತೀತ ಸಂದೇಶ ಸಾರಿದ ಸಂತರು, ಶರಣರ ಚಿಂತನೆಗಳು ನಮಗೆಲ್ಲ ಆದರ್ಶವಾಗಬೇಕು ಎಂದರು.ಸಂತ ಸೇವಾಲಾಲ್ ಮಹಾರಾಜರು ಬಾಲ್ಯದಲ್ಲಿಯೇ ಪವಾಡ ಪುರುಷರಾಗಿದ್ದರು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಅನೇಕ ಭವಿಷ್ಯವಾಣಿಗಳನ್ನು ನುಡಿದಿರುವ ಸೇವಾಲಾಲ್‌ ಅವರ ಆದರ್ಶಪಾಲನೆ ಇಂದಿನ ಅಗತ್ಯವಾಗಿದೆ. ಸತ್ಯ, ಧರ್ಮ, ನ್ಯಾಯ, ನೀತಿಗಳನ್ನು ಅಳವಡಿಸಿಕೊಂಡು ಎಲ್ಲರಂತೆ ಅರಿತು ಬಾಳಬೇಕು ಎಂದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕೀರೇಶ ರಟ್ಟೀಹಳ್ಳಿ, ತಿಪ್ಪಣ್ಣ ಲಮಾಣಿ, ಪರಶುರಾಮ ಡೊಂಕಬಳ್ಳಿ, ಮಲ್ಲಿಕಾರ್ಜುನ ಕಬಾಡಿ, ವಿನೋದ್ ಕಪ್ಪತ್ತನವರ ಹಾಗೂ ಇನ್ನುಳಿದ ಮುಖಂಡರು ಉಪಸ್ಥಿತರಿದ್ದರು.