ಸಾರಾಂಶ
ಕನಿಷ್ಠ ವೇತನದಲ್ಲಿ ಕೆಲಸ ಮಾಡುತ್ತಿರುವ ಪಿಎಸ್ಎಸ್ಕೆ ಕಾರ್ಖಾನೆ ಕಾರ್ಮಿಕರ 36 ತಿಂಗಳ ವೇತನ ತಡೆ ಹಿಡಿದಿದ್ದ ಕಾರಣ ನೌಕರರು ಸಾಕಷ್ಟು ಸಂಕಷ್ಟಕ್ಕೆ ತುತ್ತಾಗಿದ್ದರು. ಶಾಸಕರು ಈ ವಿಚಾರವಾಗಿ ತುರ್ತು ಪತ್ರ ವ್ಯವಹಾರ ನಡೆಸಿ ಕೇನ್ ಕಮೀಷನರ್ ರನ್ನು ಹಲವು ಬಾರಿ ಭೇಟಿ ಮಾಡಿ 40 ಕಾರ್ಮಿಕರ 36 ತಿಂಗಳ ವೇತನ ಕೊಡಿಸುವಲ್ಲಿ ಸಫಲರಾದರು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಕಳೆದ 2 ವರ್ಷದ ವೇತನ ಬಾಕಿ ಉಳಿಸಿಕೊಂಡಿದ್ದ ಪಿಎಸ್ಎಸ್ಕೆ ಸಹಕಾರ ಸಕ್ಕರೆ ಕಾರ್ಖಾನೆ ನಾಲ್ಕು ವರ್ಷದ ಬಳಿಕ ಶಾಸಕರ ಕಾಳಜಿಯಿಂದ ಪಾವತಿ ಮಾಡಿದ ಹಿನ್ನೆಲೆಯಲ್ಲಿ ಕಾರ್ಮಿಕರು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಸನ್ಮಾನಿಸಿದರು.ಪಿಎಸ್ಎಸ್ಕೆ ಆಡಳಿತ ಮಂಡಳಿಯು 2017 ರಿಂದ 2020ರ ಜುಲೈ ವರೆಗೆ ಸುಮಾರು 40 ಕಾರ್ಮಿಕರ ವೇತನವನ್ನು ಕಾರಣಾಂತರದಿಂದ ತಡೆ ಹಿಡಿದಿತ್ತು. ಈ ಬಗ್ಗೆ ಕಾರ್ಮಿಕರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು.
ಕನಿಷ್ಠ ವೇತನದಲ್ಲಿ ಕೆಲಸ ಮಾಡುತ್ತಿರುವ ಪಿಎಸ್ಎಸ್ಕೆ ಕಾರ್ಖಾನೆ ಕಾರ್ಮಿಕರ 36 ತಿಂಗಳ ವೇತನ ತಡೆ ಹಿಡಿದಿದ್ದ ಕಾರಣ ನೌಕರರು ಸಾಕಷ್ಟು ಸಂಕಷ್ಟಕ್ಕೆ ತುತ್ತಾಗಿದ್ದರು. ಈ ಬಗ್ಗೆ ಪಿಎಸ್ಎಸ್ಕೆ ಕಾರ್ಮಿಕ ಸಂಘದ ಪದಾಧಿಕಾರಿಗಳು ಶಾಸಕ ದರ್ಶನ್ ಪುಟ್ಟಣ್ಣಯ್ಯರ ಗಮನಕ್ಕೆ ತಂದಾಗ ಶಾಸಕರು ಈ ವಿಚಾರವಾಗಿ ತುರ್ತು ಪತ್ರ ವ್ಯವಹಾರ ನಡೆಸಿ ಕೇನ್ ಕಮೀಷನರ್ ರನ್ನು ಹಲವು ಬಾರಿ ಭೇಟಿ ಮಾಡಿ 40 ಕಾರ್ಮಿಕರ 36 ತಿಂಗಳ ವೇತನವನ್ನು ಕೊಡಿಸುವಲ್ಲಿ ಸಫಲರಾದರು.ಈ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘದ ಕಚೇರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೇಟಿ ನೀಡಿ 40 ಜನ ಕಾರ್ಮಿಕರಿಗೆ ಬಾಕಿ ವೇತನದ ಚೆಕ್ ವಿತರಿಸಿದರು.
ಕಾರ್ಮಿಕ ಮುಖಂಡರು ಮಾತನಾಡಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕೇನ್ ಕಮೀಷನರ್ ಎಂ.ಆರ್.ರವಿಕುಮಾರ್ ಅವರೊಂದಿಗೆ ಮಾತನಾಡಿ ಬಾಕಿ ವೇತನ ಕೊಡಿಸಿದ್ದಾರೆ ಎಂದು ಶ್ಲಾಘಿಸಿದರು.40 ಕಾರ್ಮಿಕರ 36 ತಿಂಗಳ ಬಾಕಿ ವೇತನವನ್ನು 4 ವರ್ಷದ ಬಳಿಕ ಕೊಡಿಸುವಲ್ಲಿ ಕಬ್ಬು ಅಭಿವೃದ್ಧಿ ಆಯುಕ್ತರು, ಮಂಡ್ಯ ಜಿಲ್ಲಾಧಿಕಾರಿಗಳು, ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ನಾಗಭೂಷಣ್, ಜಿಲ್ಲಾ ರೈತಸಂಘದ ಅಧ್ಯಕ್ಷ ಎ.ಎಲ್. ಕೆಂಪೂಗೌಡ, ಪಿಎಸ್ಎಸ್ಕೆ ಮಾಜಿ ಉಪಾಧ್ಯಕ್ಷ ಕೆನ್ನಾಳು ನಾಗರಾಜು, ರೈತ ಮುಖಂಡ ಬಾಲಕೃಷ್ಣ, ಪಿಎಸ್ಎಸ್ಕೆ ಕಾರ್ಖಾನೆ ಕಾರ್ಮಿಕ ಮುಖಂಡ ಆರ್.ರಮೇಶ್ ಅವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಈ ವೇಳೆ ಕಾರ್ಮಿಕರಾದ ಕೆ.ಜಿ.ಮಧು, ಕೆ.ಎಂ.ಅಶ್ವಥ್, ಕೆ.ಜಿ.ಯೋಗೇಶ್, ಪ್ರಮೀಳ, ನಂದೀಶ್, ಭಾನುಪ್ರಿಯ ಮತ್ತಿತರರು ಇದ್ದರು.