‘ಕಿಶೋರ ಯಕ್ಷಗಾನ ಸಂಭ್ರಮ 2025’ ಅಭಿಯಾನದ ಕುಂದಾಪುರ ವಿಧಾನ ಸಭಾ ವ್ಯಾಪ್ತಿಯ ಎಂಟು ಶಾಲೆಗಳ ಪ್ರದರ್ಶಗಳ ಸಮಾರೋಪ ಮಂಗಳವಾರ ಜರಗಿತು.

ಬ್ರಹ್ಮಾವರ: ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ವತಿಯಿಂದ ಸಾಲಿಗ್ರಾಮದ ಗುರು ನರಸಿಂಹ ದೇವಳದ ಸಹಯೋಗದಲ್ಲಿ ಆಯೋಜಿಸಿದ್ದ ‘ಕಿಶೋರ ಯಕ್ಷಗಾನ ಸಂಭ್ರಮ 2025’ ಅಭಿಯಾನದ ಕುಂದಾಪುರ ವಿಧಾನ ಸಭಾ ವ್ಯಾಪ್ತಿಯ ಎಂಟು ಶಾಲೆಗಳ ಪ್ರದರ್ಶಗಳ ಸಮಾರೋಪ ಮಂಗಳವಾರ ಜರಗಿತು.

ದೇವಳದ ಆಡಳಿತ ಸಮಿತಿಯ ಅಧ್ಯಕ್ಷ ಡಾ. ಕೆ. ಎಸ್. ಕಾರಂತ ಅಧ್ಯಕ್ಷತೆ ವಹಿಸಿದ್ದರು. ಬಹು ಮೇಳಗಳ ಯಜಮಾನ ಪಿ. ಕಿಶನ್ ಹೆಗ್ಡೆ ಪ್ರಮಾಣ ಪತ್ರ ವಿತರಿಸಿದರು. ಯಶಸ್ವಿ ಕಲಾವೃಂದ ತೆಕ್ಕಟ್ಟೆ ಇದರ ಕಾರ್ಯದರ್ಶಿ ವೆಂಕಟೇಶ ವೈದ್ಯ, ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಸುಜಯೀಂದ್ರ ಹಂದೆ, ಶಿಕ್ಷಕ ಸಹಕಾರಿ ಬ್ಯಾಂಕಿನ ಪ್ರಬಂಧಕರಾದ ಕೆ. ಸಂತೋಷ್ ಕುಮಾರ ಶೆಟ್ಟಿ, ಯಕ್ಷದೇಗುಲದ ಸುದರ್ಶನ ಉರಾಳ ಅಭ್ಯಾಗತರಾಗಿದ್ದರು.ಟ್ರಸ್ಟ್ ಕೋಶಾಧಿಕಾರಿ ಗಣೇಶ ಬ್ರಹ್ಮಾವರ, ಕಲಾರಂಗದ ಡಾ. ರಾಜೇಶ ನಾವಡ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅರುಷ, ಉನ್ನತಿ, ಸೃಷ್ಟಿ, ಭರತ್ ಯಕ್ಷಶಿಕ್ಷಣದಿಂದ ತಮಗೊದಗಿದ ಅವಿಸ್ಮರಣೀಯ ಅನುಭವ ಹಂಚಿಕೊಂಡರು.

ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ. ಎಂ ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ಮೊದಲು ಶ್ರೀ ನಾರಾಯಣ ಗುರು ವಸತಿ ಶಾಲೆ, ವಡ್ಡರ್ಸೆ ಇಲ್ಲಿನ ವಿದ್ಯಾರ್ಥಿಗಳಿಂದ ‘ಸೂರ್ಯ ರತ್ನ’ ಅನಂತರ ವಿವೇಕ ಪದವಿಪೂರ್ವ ಕಾಲೇಜಿನ ಬಾಲಕರ ವಿಭಾಗದಿಂದ ‘ತಾಮ್ರಧ್ವಜ ಕಾಳಗ’ ಪ್ರಸಂಗಗಳು ಪ್ರಸ್ತುತಗೊಂಡವು.