ಸಾರಾಂಶ
ಚಾಮರಾಜನಗರ : ಕಾವೇರಿ ಆರ್ಭಟಕ್ಕೆ ಭರ್ತಿಯಾಗಿರುವ ಮೆಟ್ಟೂರು ಜಲಾಶಯದಲ್ಲಿ ಕಾವೇರಿ ಮಾತೆಗೆ ಸಾಲೂರು ಶ್ರೀ ಪೂಜೆ ಸಲ್ಲಿಸಿದರು.
ತಮಿಳುನಾಡಿನ ಮೆಟ್ಟೂರು ಶಾಸಕ ಸದಾಶಿವಂ ಅವರೊಟ್ಟಿಗೆ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಜಲಾಶಯಕ್ಕೆ ಭೇಟಿ ನೀಡಿ, ಕಾವೇರಿ ಮಾತೆಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಪ್ರತಿವರ್ಷವೂ ಕರ್ನಾಟಕ ಮತ್ತು ತಮಿಳುನಾಡಿಗೆ ಕಾವೇರಿ ಕೃಪೆ ಇರಲಿ, ಎರಡೂ ರಾಜ್ಯದ ರೈತರ ಉತ್ತಮ ನೀರು ಪಡೆದು ಬೆಳೆ ಚೆನ್ನಾಗಿ ಬೆಳೆಯಲಿ, ಕಾವೇರಿ ಆಶೀರ್ವಾದ ಸದಾ ಇರಲಿ ಎಂದು ಹಾರೈಸಿದರು.
ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟು ಮಾಡುವುದಿಲ್ಲ ಎಂದು ಮೆಟ್ಟೂರು ಶಾಸಕ ಸದಾಶಿವಂ ಹೇಳಿದ್ದಾರೆ. ಪೂಜೆ ಸಲ್ಲಿಕೆ ವೇಳೆ, ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿ ರಘು ಇತರರು ಇದ್ದರು.
ಕಾವೇರಿ ಆರ್ಭಟಕ್ಕೆ ಮೆಟ್ಟೂರು ಭರ್ತಿ: 120 ಅಡಿ ಸಾಮಾರ್ಥ್ಯದ ಮೆಟ್ಟೂರು ಜಲಾಶಯವು ಕಾವೇರಿ ಆರ್ಭಟಕ್ಕೆ ಭರ್ತಿಯಾಗಿದೆ. ಅಣೆಕಟ್ಟೆಗೆ ಕೇವಲ 7 ದಿನಗಳಲ್ಲಿ 59 ಅಡಿಗಳಷ್ಟು ನೀರು ಬಂದಿದೆ. ಜುಲೈ 20ರಂದು ಮೆಟ್ಟೂರು ಜಲಾಶಯದಲ್ಲಿ 61 ಅಡಿ ನೀರು ಸಂಗ್ರಹವಾಗಿತ್ತು. ಜುಲೈ 27ರ ವೇಳೆಗೆ ಇದು 120 ಅಡಿಗೆ ಏರಿಕೆಯಾಗಿತ್ತು. ಕೃಷಿ ಚಟುವಟಿಕೆ ಉದ್ದೇಶಕ್ಕಾಗಿ ಕಳೆದ ಎರಡು ದಿನಗಳಿಂದ 1 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.