ಸಂಭಾಜಿ ಪ್ರತಿಮೆ ಅನಾವರಣ ವಿವಾದ

| Published : Jan 03 2025, 01:30 AM IST

ಸಾರಾಂಶ

ನಗರದ ಅನಗೋಳದ ಧರ್ಮವೀರ ಸಂಭಾಜಿ ವೃತ್ತದಲ್ಲಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣದ ವಿಷಯ ತೀವ್ರ ಸ್ವರೂಪ ಪಡೆಯುವ ಲಕ್ಷಣಗಳು ಗೋಚರಿಸುತ್ತಿವೆ. ಮಾತ್ರವಲ್ಲ, ಪ್ರತಿಮೆ ವಿಚಾರದಲ್ಲಿ ಬೆಳಗಾವಿ ದಕ್ಷಿಣದಲ್ಲಿ ರಾಜಕೀಯ ಮೇಲಾಟಕ್ಕೂ ಕಾರಣವಾಗುವ ಸಾಧ್ಯತೆ ಇದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಗರದ ಅನಗೋಳದ ಧರ್ಮವೀರ ಸಂಭಾಜಿ ವೃತ್ತದಲ್ಲಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣದ ವಿಷಯ ತೀವ್ರ ಸ್ವರೂಪ ಪಡೆಯುವ ಲಕ್ಷಣಗಳು ಗೋಚರಿಸುತ್ತಿವೆ. ಮಾತ್ರವಲ್ಲ, ಪ್ರತಿಮೆ ವಿಚಾರದಲ್ಲಿ ಬೆಳಗಾವಿ ದಕ್ಷಿಣದಲ್ಲಿ ರಾಜಕೀಯ ಮೇಲಾಟಕ್ಕೂ ಕಾರಣವಾಗುವ ಸಾಧ್ಯತೆ ಇದೆ.

ಗುರುವಾರ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಮೇಯರ್‌ ಸವಿತಾ ಕಾಂಬಳೆ, ಉಪ ಮೇಯರ್‌ ಆನಂದ ಚವಾಣ್‌ ಆಗಮಿಸಿದ್ದರು. ಆದರೆ, ಕಾಮಗಾರಿ ಪೂರ್ಣಗೊಳ್ಳದೇ ಹೇಗೆ ಅನಾವರಣ ಮಾಡುತ್ತೀರಿ ಎಂದು ಶ್ರೀರಾಮ ಸೇನೆ ಹಿಂದೂಸ್ತಾನ ಸಂಘಟನೆ ಅಧ್ಯಕ್ಷ ರಮಾಕಾಂತ್‌ ಕೊಂಡುಸ್ಕರ್‌ ಮತ್ತು ಅವರ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅನಗೋಳದ ಪ್ರಮುಖ ವೃತ್ತದಲ್ಲಿ 21 ಅಡಿ ಎತ್ತರದ ಸಂಭಾಜಿ ಮಹಾರಾಜರ ಪ್ರತಿಮೆಯನ್ನು ಜ.5ರಂದು ಅನಾವರಣ ಮಾಡುವ ಕುರಿತು ಮೇಯರ್ ಸವಿತಾ ಕಾಂಬಳೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ಅದಕ್ಕೂ ಮೊದಲೇ ಅವರು ಉದ್ಘಾಟನೆಗೆ ಬಂದಿದ್ದೇ ವಿವಾದದ ಕೇಂದ್ರಬಿಂದುವಾಗಿದೆ. ಆದರೆ, ಕಾಮಗಾರಿ ಅಂತಿಮ ಹಂತ ತಲುಪಿದೆ. ಇನ್ನೂ ಒಂದಿಷ್ಟು ಕೆಲಸ ನಡೆದಿವೆ. ಹೀಗಿರುವಾಗ, ಪ್ರತಿಮೆ ಅನಾವರಣಗೊಳಿಸುವುದು ಸರಿಯಲ್ಲ ಎಂದು ಕೊಂಡೂಸ್ಕರ್‌ ಬೆಂಬಲಿಗರು ತಕರಾರು ತೆಗೆದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್‌, ಸಭೆಯಲ್ಲಿ ನಿರ್ಧರಿಸಿದಂತೆ ಜ.5ರಂದು ಪ್ರತಿಮೆ ಅನಾವರಣ ಮಾಡುತ್ತೇವೆ. ಈಗ ಪ್ರತಿಮೆ ಕೆಳಭಾಗದಲ್ಲಿರುವ ಸಭಾಭವನದಲ್ಲಿ ಪೂಜೆ ಮಾತ್ರ ನೆರವೇರಿಸುತ್ತಿದ್ದೇವೆ. ಅನಗತ್ಯವಾಗಿ ಯಾರೂ ಗೊಂದಲ ಸೃಷ್ಟಿಸಬಾರದು ಎಂದು ಮನವಿ ಮಾಡಿದರು.

ವೃತ್ತದಲ್ಲಿ ಎರಡೂ ಗುಂಪಿನ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿದ್ದಾರೆ.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಂಇಎಸ್ ಅಭ್ಯರ್ಥಿ ಆಗಿದ್ದ ರಮಾಕಾಂತ ಕೊಂಡೂಸ್ಕರ್ ಅವರು ಹಾಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ವಿರುದ್ಧ 2023ರಲ್ಲಿ ಸೋಲುಂಡಿದ್ದರು.