ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಾರ್ಷಿಕೋತ್ಸವ ‘ಸಂಭ್ರಮ ರಶ್ಮಿ’

| Published : Dec 22 2024, 01:33 AM IST

ಸಾರಾಂಶ

ಸುಮಾರು ೩೮೦ ವಿದ್ಯಾರ್ಥಿಗಳು ನಮ್ಮ ವಿದ್ಯಾರ್ಥಿನಿಲಯದಲ್ಲಿದ್ದಾರೆ. ಕಲಿಕೆಗೆ ಪೂರಕ ಸಾಧನಗಳಾದ ಸ್ಮಾರ್ಟ್ ಕ್ಲಾಸ್, ಇ- ಬೋರ್ಡ್, ಶಾಲಾ ಬಸ್ ಹೀಗೆ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದೇನೆ ಎಂದು ಸೀತಾರಾಮ ರೈ ಹೇಳಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆ ಅತ್ಯಂತ ಸುರಕ್ಷಿತವಾಗಿರುವುದರಿಂದ ಪರವೂರಿನಿಂದಲೂ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ನಮ್ಮ ಮಕ್ಕಳನ್ನು ಕೌಶಲ್ಯಭರಿತರಾಗಿ, ಮೌಲ್ಯಭರಿತರಾಗಿ ಮಾಡಿದಾಗ ನಮ್ಮ ದೇಶ ವಿಶ್ವಗುರುವಾಗುತ್ತದೆ ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಎಚ್‌. ಮಾಧವ ಭಟ್ ಅಭಿಪ್ರಾಯಪಟ್ಟರು.

ಅವರು ಶೀಂಟೂರು ನಾರಾಯಣ ರೈ ತೆರೆದ ಸಭಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಾರ್ಷಿಕೋತ್ಸವ ‘ಸಂಭ್ರಮ ರಶ್ಮಿ’ ಉದ್ಘಾಟಿಸಿ ಮಾತನಾಡಿದರು. ಪೇಟೆಯಲ್ಲಿ ಸಿಗುವಂಥ ಉನ್ನತ ಮಟ್ಟದ ಶಿಕ್ಷಣ ಹಳ್ಳಿಯ ವಿದ್ಯಾರ್ಥಿಗಳಿಗೆ ದೊರೆಯುವಂತಾಗಲು ಕಾರಣಕರ್ತರಾದ ಶೀಂಟೂರು ನಾರಾಯಣ ರೈ ಅವರನ್ನು ಇವತ್ತು ನಾವು ಸ್ಮರಿಸಬೇಕು. ಅವರ ಕನಸನ್ನು ನನಸಾಗಿಸಿ ಶಿಕ್ಷಣ ಸಂಸ್ಥೆಗಳಿಗೆ ಸವಣೂರು ಸೀತಾರಾಮ ರೈ ಆಧುನಿಕ ಸ್ಪರ್ಶ ನೀಡಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿದ್ದ ಸಹಾಯಕ ಪೊಲೀಸ್ ಕಮಿಷನರ್ ನಝಾ ಫರೂಕಿ ಮಾತನಾಡಿ ಎಲ್ಲ ಸಾಧನೆಗಳಲ್ಲಿ ಶ್ರೇಷ್ಠ ಸಾಧನೆ ಅಂದರೆ ಅದು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಂತದ್ದು. ಅಂತಹ ಸಾಧನೆಯನ್ನು ಸೀತಾರಾಮ ರೈ ಮಾಡಿ ತೋರಿಸಿದ್ದಾರೆ. ಕರಾವಳಿ ಜಿಲ್ಲೆಯು ಶಿಕ್ಷಣ ಕ್ಷೇತ್ರಕ್ಕೆ ಹೆಸರುವಾಸಿಯಾಗಿದ್ದು, ಶೈಕ್ಷಣಿಕವಾಗಿ ಹೆಣ್ಣು ಮಕ್ಕಳು ಮುಂದೆ ಬರಬೇಕು, ಕ್ರೀಡಾಕೂಟದ ಅಡಿಯಲ್ಲಿ ಉದ್ಯೋಗ ಅವಕಾಶ ಹೇರಳವಾಗಿರುವುದರಿಂದ ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಭಾಗವಹಿಸಬೇಕು ಎಂದು ಹೇಳಿದರು.

ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ೨ನೇ ಮಹಾಯುದ್ಧದ ಸಂದರ್ಭದಲ್ಲಿ ಬರ್ಮಾದಲ್ಲಿ ಯೋಧರಾಗಿ ಸೇವೆ ಸಲ್ಲಿಸಿದ ನನ್ನ ತಂದೆಯವರಾದ ಶೀಂಟೂರು ನಾರಾಯಣ ರೈವರ ಆಶಯದಂತೆ ಸವಣೂರಿನಲ್ಲಿ ೨೦೦೧ರಲ್ಲಿ ಏಕಕಾಲದಲ್ಲಿ ಎಲ್.ಕೆ.ಜಿ, ೧ನೇ ತರಗತಿ, ೮ನೇ ತರಗತಿ ಮತ್ತು ಪ್ರಥಮ ಪಿಯುಸಿಯನ್ನು ಆರಂಭಿಸಿತು. ಪುತ್ತೂರು, ಮಂಗಳೂರು, ಮೈಸೂರು ಹೀಗೆ ಪಟ್ಟಣಗಳಲ್ಲಿ ಸಿಗುವಂತ ಉನ್ನತ ಶಿಕ್ಷಣ ನಮ್ಮ ಹಳ್ಳಿಯ ವಿದ್ಯಾರ್ಥಿಗಳಿಗೂ ಸಿಗಬೇಕೆನ್ನುವ ಉದ್ದೇಶದಿಂದ ೨೨ ಎಕರೆ ಜಾಗದಲ್ಲಿ ಒಂದೊಂದೇ ವಿಭಾಗಗಳನ್ನು ಸ್ಥಾಪಿಸುತ್ತಾ ಅತ್ಯಾಧುನಿಕ ಶಿಕ್ಷಣ ವ್ಯವಸ್ಥೆಗಳನ್ನು ಕಲ್ಪಿಸಿದ್ದೇನೆ. ಸುಮಾರು ೩೮೦ ವಿದ್ಯಾರ್ಥಿಗಳು ನಮ್ಮ ವಿದ್ಯಾರ್ಥಿನಿಲಯದಲ್ಲಿದ್ದಾರೆ. ಕಲಿಕೆಗೆ ಪೂರಕ ಸಾಧನಗಳಾದ ಸ್ಮಾರ್ಟ್ ಕ್ಲಾಸ್, ಇ- ಬೋರ್ಡ್, ಶಾಲಾ ಬಸ್ ಹೀಗೆ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದೇನೆ ಎಂದರು.ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಸದಸ್ಯರಾದ ಸವಣೂರು ಎನ್. ಸುಂದರ ರೈ, ರಶ್ಮಿ ಅಶ್ವಿನ್ ಶೆಟ್ಟಿ ಸವಣೂರು, ರಕ್ಷಕ- ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮ್ ಪ್ರಸಾದ್ ರೈ ಕಲಾಯಿ, ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ, ವಿದ್ಯಾರಶ್ಮಿ ಪಿ.ಯು. ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ಮತ್ತು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಆಳ್ವ ಮತ್ತಿತ್ತರರು ಉಪಸ್ಥಿತರಿದ್ದರು.ವಿದ್ಯಾರಶ್ಮಿ ಪಿ.ಯು ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ಮತ್ತು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಆಳ್ವ ಆಯಾ ಸಂಸ್ಥೆಗಳ ವರದಿ ವಾಚಿಸಿದರು.ರಶ್ಮಿತಾ ಮತ್ತು ತಂಡ ಪ್ರಾರ್ಥಿಸಿದರು. ನಿಧಿ ಮತ್ತು ಅಭಿಜ್ಞಾ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕಿ ಶ್ರೀಲೇಖ ಶೆಟ್ಟಿ ಎಂ. ಕ್ರೀಡಾ ಸಾಧಕರ ಪಟ್ಟಿ ವಾಚಿಸಿದರು. ಉಪನ್ಯಾಸಕರಾದ ಮುರಲೀಧರ ಕೆ.ಎಲ್. ಶೈಕ್ಷಣಿಕ ಸಾಧಕರ ಪಟ್ಟಿ ವಾಚಿಸಿದರು. ವಿದ್ಯಾರ್ಥಿಗಳಾದ ಫಾತಿಮತ್ ಸಬೀಬಾ ಮತ್ತು ಪ್ರಾಪ್ತಿ ಪಿ. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ನಾಯಕಿ ಕೆ. ಯಶಸ್ವಿ ರೈ ವಂದಿಸಿದರು.