ಕಾಂಗ್ರೆಸ್‌ ನಾಯಕರ ಒಗ್ಗಟ್ಟಿನ ಮಂತ್ರ

| Published : Apr 04 2024, 01:04 AM IST

ಸಾರಾಂಶ

ಕಳೆದ 20 ವರ್ಷದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ ಯಾವುದೇ ಅಭಿವೃದ್ಧಿ ಮಾಡಿಲ್ಲ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಲೋಕಸಭಾ ಅಖಾಡ ದಿನೇ ದಿನೇ ಹೊಸ ರಂಗ ಪಡೆಯುತ್ತಿದೆ. ಪಕ್ಷದ ಅಭ್ಯರ್ಥಿ ಘೋಷಣೆಯಾದ ಬಳಿಕ ಕೈ ಪಡೆಯ ಹಿರಿಯ, ಕಿರಿಯ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿ ಒಗ್ಗಟ್ಟಿನ ಮಂತ್ರ ಜಪಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಸಚಿವರಾದ ಆರ್‌.ಬಿ.ತಿಮ್ಮಾಪುರ, ಶಿವಾನಂದ ಪಾಟೀಲ, ಶಾಸಕ ಎಚ್.ವೈ.ಮೇಟಿ, ಜೆ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನವರ, ಬಿ.ಬಿ.ಚಿಮ್ಮನಟ್ಟಿ, ಮಾಜಿ ಸಚಿವರಾದ ಎಸ್.ಆರ್.ಪಾಟೀಲ, ಅಜಯಕುಮಾರ ಸರನಾಯಕ, ವಿ.ಪ ಸದಸ್ಯ ಸುನೀಲಗೌಡ ಪಾಟೀಲ, ಮಾಜಿ ಶಾಸಕ ಆನಂದ ನ್ಯಾಮಗೌಡ, ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಸಿದ್ದು ಕೊಣ್ಣೂರ ಸೇರಿದಂತೆ ಎಲ್ಲ ನಾಯಕರು ಒಗಟ್ಟಿನ ನುಡಿ ಮೊಳಗಿಸಿದರು. ನಾವೆಲ್ಲರೂ ಒಂದಾಗಿದ್ದೇವೆ ಎಂದು ತೋರಿಸಿದರು.

ಕಳೆದ 20 ವರ್ಷದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ ಯಾವುದೇ ಅಭಿವೃದ್ಧಿ ಮಾಡಿಲ್ಲ. ಜಿಲ್ಲೆಯ ಜನರ ಕಷ್ಟ, ನೋವು ಆಲಿಸಿಲ್ಲ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜನರಿಗೆ ನೀಡಿದ್ದ ಭರವಸೆ ಈಡೇರಿಸಿಲ್ಲ. ವಾಸ್ತವದಲ್ಲಿ ಬಿಜೆಪಿಗೆ ಜನ ವಿರೋಧಿ ಇದೆ. ಇದನ್ನು ಕಾಂಗ್ರೆಸ್ ಸಮರ್ಥವಾಗಿ ಎದುರಿಸಲಿದೆ. ನೂರಕ್ಕೆ ನೂರು ನಮ್ಮ ಪಕ್ಷದ ಬಾಗಲಕೋಟೆ ಮತಕ್ಷೇತ್ರದ ಅಭ್ಯರ್ಥಿ ಸಂಯುಕ್ತ ಪಾಟೀಲ ಗೆಲವು ಸಾಧಿಸಲಿದ್ದಾರೆ. ಪಕ್ಷದ ಹೊಸ ರೀತಿ ಕಾರ್ಯತಂತ್ರ, ಪ್ರಚಾರ ಹಾಗೂ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಗೆಲುವಿಗೆ ಶ್ರೀರಕ್ಷೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.