ಸಾರಾಂಶ
ಲಿಂಗಸುಗೂರು ಪಟ್ಟಣದ ಆಯ್ದಕ್ಕಿ ಲಕ್ಕಮ್ಮ ವೇದಿಕೆಯಲ್ಲಿ ನಡೆದ ಆರ್ಎಸ್ಎಸ್ ಹಿಂದು ರಾಷ್ಟ್ರ ವಿರೋಧಿ ಸಮಾವೇಶವನ್ನು ಶ್ರೀಗಳು ಹಾಗೂ ಹೋರಾಟಗಾರರು ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಡಾ.ಬಿ.ಆರ್.ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನ ಬದಲಿಸಿ ದೇಶದಲ್ಲಿ ಮನುವಾದಿ, ಸನಾತನ ಸಂವಿಧಾನ ಜಾರಿಗೊಳಿಸುವ ಕುತಂತ್ರವನ್ನು ಹುಸಿಗೊಳಿಸಬೇಕೆಂದು ಕನಕಗುರುಪೀಠ ಕಾಗಿನೆಲೆಯ ಕಲಬುರಗಿ ವಿಭಾಗದ ಜಗದ್ಗುರು ಸಿದ್ದರಾಮಾನಂದಪುರಿ ಶ್ರೀಗಳು ಕರೆ ನೀಡಿದರು. ಪಟ್ಟಣದ ಬೈಪಾಸ್ ರಸ್ತೆಯ ನಿರ್ಮಿಸಿದ್ದ ಆಯ್ದಕ್ಕಿ ಲಕ್ಕಮ್ಮ ವೇದಿಕೆಯಲ್ಲಿ ಗುರುವಾರ ಭಾರತದ ಸಂವಿಧಾನ ಒಪ್ಪದವರು ಭಾರತ ಬಿಟ್ಟು ತೊಲಗಿ, ಆರ್ಎಸ್ಎಸ್ನ ಹಿಂದು ರಾಷ್ಟ್ರ ವಿರೋಧಿಸಿ ಜನತಾ ಸಮಾವೇಶದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸನಾತನವಾದಿಗಳು ರೈತರು, ಕಾರ್ಮಿಕರು ಹಾಗೂ ದಲಿತ, ಹಿಂದುಳಿದ ಅಲ್ಪಸಂಖ್ಯಾತರ ಭಕ್ತಿಯನ್ನು ದುರುಪಯೋಗ ಪಡಿಸಿಕೊಂಡು ಡಾ.ಬಿ.ಆರ್.ಅಂಬೇಡ್ಕರ್ ರವರು ರಚನೆ ಮಾಡಿದ ಸಂವಿಧಾನದ ಒಪ್ಪದೇ ಮನುವಾದದ ನೀತಿಗಳು ಹೇರಲು ಹವಣಿಸುತ್ತಿದ್ದಾರೆ. ಸಂವಿಧಾನ ಬದಲಿಸುವ ಹುನ್ನಾರ ನೋಡುತ್ತಾ ಸುಮ್ಮನೆ ಕುಳಿತರೆ ದಲಿತ, ಹಿಂದುಳಿದ ಅಲ್ಪಸಂಖ್ಯಾತರ ಸಮುದಾಯದ ಜನರಿಗೆ ಉಳಿಗಾಲವಿಲ್ಲ. ಸಂವಿಧಾನ ಬದಲಿಸುವವರಿಗೆ ಹೋರಾಟ, ಚಳವಳಿ ಮೂಲಕ ತಕ್ಕ ಪಾಠ ಕಲಿಸಬೇಕು ಇಲ್ಲದೇ ಹೋದರೆ ಬಹುತ್ವದ ಭಾರತವು ಏಕ ಆಡಳಿತದ ತೆಕ್ಕೆಯಲ್ಲಿ ನಲುಗಬೇಕಾಗುತ್ತದೆ ಎಂದು ಎಚ್ಚರಿಸಿದರು.ಸಮಾವೇಶದ ಅಧ್ಯಕ್ಷತೆ ವಹಿಸಿ ಕ್ರಾಂತಿಕಾರಿ ಹೋರಾಟಗಾರ ಆರ್.ಮಾನಸಯ್ಯ ಮಾತನಾಡಿ, ದೇಶದಲ್ಲಿ ಧರ್ಮ, ಜಾತಿ ಹೆಸರಿನಲ್ಲಿ ಜನಸಮುದಾಯಗಳ ಮದ್ಯೆ ಧ್ವೇಷ ಹರಡಲಾಗುತ್ತದೆ. ಆರ್ಎಸ್ಎಸ್ ಪ್ಯಾಸಿಸ್ಟ್ ಹಾಗೂ ಮನುವಾದಿ, ಭಯೋತ್ಪಾದಕ ಸಂಘಟನೆಯಾಗಿದೆ. ಆರ್ಎಸ್ಎಸ್ ಜನರಿಗೆ ಮೂಲಭೂತ ಸೌಲಭ್ಯಗಳು ಒದಗಿಸುವ ಬದಲು ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ, ಅಲ್ಪಸಂಖ್ಯಾತ ಯುವಕರನ್ನು ಸೆಳೆದು ಅವರಿಂದ ಸಮಾಜದಲ್ಲಿ ಶಾಂತಿ ಕದಡುವ ಕೃತ್ಯಗಳನ್ನು ಮಾಡಿಸಿ ಬಡ ಯುವಕರನ್ನು ಜೈಲಿಗೆ ಅಟ್ಟಲಾಗುತ್ತಿದೆ. ಸಂವಿಧಾನ ಬದಲಿಸುವ ಕೇಂದ್ರದ ಸರ್ಕಾರ ನಡೆಯನ್ನು ದಲಿತ, ಹಿಂದುಳಿದ, ಅಲ್ಪಸಂಖ್ಯಾತರು ತಡೆಯಲು ಕ್ರಾಂತಿಕಾರಿ ಚಳವಳಿಗೆ ಮುಂದಾಗಬೇಕು ಎಂದು ಕರೆ ನೀಡಿದರು.ಈ ವೇಳೆ ಜಾತಿ ನಿರ್ಮೂಲನಾ ಚಳವಳಿಯ ರಾಷ್ಟ್ರೀಯ ಸಂಚಾಲಕ ತುಹಿನದೇವ, ಪಂಡಿತ ಸೂಫಿ ಸೈಯದ್ ಭಾಷಾ, ಬೌದ್ಧ ಗುರು ಧಮ್ಮದೀಪ ಬಂತೇಜಿ, ವಾಲ್ಮೀಕಿ ಗುರುಪೀಠದ ವರದಾನೇಶ್ವರ ಶ್ರೀ, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ, ಮೌಲಾನ ಮುಫ್ತಿ ಯೂನಿಸ್, ಯಲಗಟ್ಟಾದ ಗಡವಡಕಿಮಠದ ಲಕ್ಷಮ್ಮಪ್ಪಯ್ಯ ತಾತ, ಫಾದರ್ ರಾಬರ್ಟ್ ಪೌಲ್, ಕರ್ನಾಟಕ ಜನಶಕ್ತಿ ರಾಜ್ಯಾಧ್ಯಕ್ಷ ನೂರ್ ಶ್ರೀಧರ, ಹನುಮಂತಪ್ಪ ಮನ್ನಾಪುರ, ಎಂ.ಡಿ ಅಮೀರ್ಅಲಿ, ಎಚ್.ಎನ್ ಬಡಿಗೇರ, ವಿಜಯರಾಣಿ, ರಕ್ಮುಣಿ, ಬಿ.ರುದ್ರಯ್ಯ, ಎಚ್.ಬಿ ಮುರಾರಿ, ಕಾಲಜ್ಞಾನ ಮಠದ ಶಿವಕುಮಾರ ಶ್ರೀ ಲಿಂಗಪ್ಪ ಪರಂಗಿ, ಎಂ.ಗಂಗಾಧರ, ಖಾಲಿದ್ ಜಾವುಸ್, ಆದಿ ನಗನೂರು, ಮೋಹನ್ ಗೋಸ್ಲೆ, ಕುಪ್ಪಣ್ಣ ಹೊಸಮನಿ ಸೇರಿದಂತೆ ಇದ್ದರು.