ಕನ್ನಡಪ್ರಭ ವಾರ್ತೆ ಮೈಸೂರು

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೊಬ್ಬರ ಮೃತದೇಹವು ಸೋಮವಾರ ಪತ್ತೆಯಾಗಿದ್ದು, ಪೋಷಕರು ಕೊಲೆ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ.ಸರಸ್ವತಿಪುರಂ 7ನೇ ಮುಖ್ಯರಸ್ತೆ ನಿವಾಸಿ ಅಕ್ಷಯ್ ಎಂಬವರ ಪತ್ನಿ ಸಂಧ್ಯಾ (30) ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಸೋಮವಾರ ಬೆಳಗ್ಗೆ ಪತ್ತೆಯಾಗಿದ್ದು, ಆಕೆಯ ಪತಿಯೇ ಕೊಲೆ ಮಾಡಿ ನೇಣು ಹಾಕಿರುವುದಾಗಿ ಸಂಧ್ಯಾ ಪೋಷಕರು ದೂರು ನೀಡಿದ್ದು, ಈ ಸಂಬಂಧ ಸರಸ್ವತಿಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹುಣಸೂರು ಪುರಸಭೆಯ ಮಾಜಿ ಅಧ್ಯಕ್ಷೆ ಗೀತಾ ನಿಂಗರಾಜು ಅವರ ಪುತ್ರಿ ಸಂಧ್ಯಾ ಅವರನ್ನು 2013ರಲ್ಲಿ ಟಿ.ಕೆ. ಲೇಔಟ್‌ ನಿವಾಸಿ ಮಹದೇವ್‌ ಅವರ ಪುತ್ರ ಅಕ್ಷಯ್‌ ಅವರೊಂದಿಗೆ ವಿವಾಹ ಮಾಡಲಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಗಂಡ- ಹೆಂಡತಿ ನಡುವೆ ಪ್ರತಿನಿತ್ಯ ಜಗಳವಾಗುತಿದ್ದು, ಅಕ್ಷಯ್‌ ಸಂಧ್ಯಾಳನ್ನು ಕೊಲೆ ಮಾಡಿ, ಅದನ್ನು ಆತ್ಮಹತ್ಯೆ ಎಂದು ಬಿಂಬಿಸುವ ಉದ್ದೇಶದಿಂದ ತಾನೇ ನೇಣು ಹಾಕಿದ್ದಾನೆ ಎಂದು ಸಂಧ್ಯಾ ತಾಯಿ ದೂರಿದ್ದಾರೆ. ಬಿಗುವಿನ ವಾತಾವರಣಮರಣೋತ್ತರ ಪರೀಕ್ಷೆಗಾಗಿ ಮೃತದೇಹ ರವಾನಿಸಲು ಪೊಲೀಸರು ಮುಂದಾಗುತ್ತಿದ್ದಂತೆ ಅಡ್ಡಗಟ್ಟಿದ ಸಂಧ್ಯಾ ಸಂಬಂಧಿಕರು ಹಾಗೂ ಅಕ್ಕಪಕ್ಕದ ನಿವಾಸಿಗಳು, ಸಂಧ್ಯಾ ಪತಿ ಅಕ್ಷಯ್‌ ನನ್ನು ಕೂಡಲೇ ಬಂಧಿಸಬೇಕು. ಆತನೆ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಆತನನ್ನು ಬಂಧಿಸುವವರೆಗೂ ಮೃತದೇಹ ರವಾನಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಸಂಧ್ಯಾ ಸಂಬಂಧಿಕರರನ್ನು ಸಮಾಧಾನಪಡಿಸಿ, ಕಾನೂನು ಕ್ರಮ ಜರುಗಿಸಲು ಹಾಗೂ ಪ್ರಕರಣದ ತನಿಖೆ ನಡೆಸಲು ಅನುವು ಮಾಡಿಕೊಡಬೇಕು ಎಂದು ಮನವರಿಕೆ ಮಾಡಿದ ಬಳಿಕ ಮೃತದೇಹವನ್ನು ರವಾನಿಸಲಾಯಿತು.