ಸಾರಾಂಶ
ಗದಗ: ಗದಗ ನಗರದಿಂದ ಕೊಪ್ಪಳಕ್ಕೆ ಸಂಪರ್ಕ ಕಲ್ಪಿಸುವ ಹೈವೇ ಪಕ್ಕದಲ್ಲಿರುವ ಭರತ್ ಮೆಗಾಸಿಟಿಯಲ್ಲಿ ನಿರ್ಮಾಣಗೊಂಡಿರುವ ಸಂಕನೂರ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆ ಮೇ 23ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ವಿ. ಸಂಕನೂರ ಹೇಳಿದರು.
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಘನ ಉಪಸ್ಥಿತಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೂತನ ಕಟ್ಟಡ ಉದ್ಘಾಟಿಸುವರು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಸಂಸದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ಪಿ.ಸಿ. ಗದ್ದಿಗೌಡ್ರ, ರೋಣ ಶಾಸಕ ಜಿ.ಎಸ್. ಪಾಟೀಲ, ನರಗುಂದ ಶಾಸಕ ಸಿ.ಸಿ. ಪಾಟೀಲ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಸಚಿವ ಕಳಕಪ್ಪ ಬಂಡಿ, ಬೆಳಗಾವಿ ಕೆಎಲ್ಇ ಸಂಸ್ಥೆ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ, ಬೆಂಗಳೂರಿನ ಆರ್ಜಿಯುಎಚ್ಎಸ್ ಸೆನೆಟ್ ಸದಸ್ಯ ಡಾ. ವೀರೇಶ ಹಂಚಿನಾಳ, ಕಳಸಾಪುರ ಗ್ರಾಪಂ ಅಧ್ಯಕ್ಷೆ ಅನಸೂಯಾ ಬೆಟಗೇರಿ ಪಾಲ್ಗೊಳ್ಳುವರು. ವಿಪ ಸದಸ್ಯ ಎಸ್.ವಿ. ಸಂಕನೂರ ಅಧ್ಯಕ್ಷತೆವಹಿಸುವರು ಎಂದರು.ವಿಶೇಷತೆ: ಸಂಕನೂರ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜು ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಇಂಡಿಯನ್ ನರ್ಸಿಂಗ್ ಕೌನ್ಸಿಲ್ನಿಂದ ಮಾನ್ಯತೆ ಪಡೆದುಕೊಂಡಿದೆ. ಇಲ್ಲಿ ಕಲಿತ ನರ್ಸಿಂಗ್ ವಿದ್ಯಾರ್ಥಿಗಳು ವಿದೇಶದಲ್ಲೂ ಕೆಲಸದ ಅವಕಾಶ ಪಡೆದುಕೊಳ್ಳಲಿದ್ದಾರೆ. ನುರಿತ ಪ್ರಾಧ್ಯಾಪಕರು, ಸುಸಜ್ಜಿತ ಡಿಜಿಟಲ್ ಲೈಬ್ರರಿ, ಎಂಟು ಬೋಧನಾ ಕೊಠಡಿ, 6 ಪ್ರಯೋಗಾಲಯ ಕೊಠಡಿ, ಕಂಪ್ಯೂಟರ್ ಲ್ಯಾಬ್, 400 ಆಸನಗಳ ಸಭಾಂಗಣ, ವಿಶಾಲವಾದ ಆಟದ ಮೈದಾನ ಒಳಗೊಂಡಿದೆ. ನರ್ಸಿಂಗ್ ಅಧ್ಯಯನಕ್ಕಾಗಿಯೇ ಪ್ರತ್ಯೇಕ ಕಟ್ಟಡ ಹೊಂದಿದ ಜಿಲ್ಲೆಯ ಏಕೈಕ ಕಾಲೇಜು ಇದಾಗಿದೆ. ಅಷ್ಟೇ ಅಲ್ಲ, ಥಿಯರಿ ಹಾಗೂ ಪ್ರಾಯೋಗಿಕ ಪರೀಕ್ಷೆ ಜತೆಗೆ ಮೌಲ್ಯಮಾಪನ ಕೇಂದ್ರವೂ ಕಾಲೇಜಿಗೆ ಇದೆ. ಈ ವರ್ಷದಿಂದ ಬಿಎಸ್ಸಿ ಲ್ಯಾಬ್ ಟೆಕ್ನಾಲಜಿ ಮತ್ತು ಅಪರೇಷನ್ ಥಿಯೇಟರ್ ಟೆಕ್ನಾಲಜಿ ಕೋರ್ಸ್ಗಳು ಕೂಡ ಆರಂಭಗೊಳ್ಳಲಿವೆ ಎಂದು ಎಸ್.ವಿ. ಸಂಕನೂರ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಆಡಳಿತಾಧಿಕಾರಿ ವಿನ್ಸಂಟ್ ಪಾಟೀಲ ಹಾಜರಿದ್ದರು.