ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ: ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಒಳ್ಳೆಯ ಸಂಸ್ಕಾರವನ್ನು ಕಲಿತುಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಾಧ್ಯ ಎಂದು ಬಾಲಗಾವಿ ಗುರುದೇವ ಆಶ್ರಮದ ಅಮೃತಾನಂದ ಮಹಾಸ್ವಾಮಿಗಳು ಹೇಳಿದರು.ತಾಲ್ಲೂಕಿನ ಮಣ್ಣೂರ ಗ್ರಾಮದಲ್ಲಿ ಶುಕ್ರವಾರ ನಡೆದ ಶ್ರೀ ವೆಂಕಟೇಶ್ವರ ದೇವಸ್ಥಾನದ ದ್ವಿತೀಯ ವರ್ಷದ ಜಾತ್ರಾ ಮಹೋತ್ಸವದಲ್ಲಿ ಅವರು ಮಾತನಾಡಿದರು. ಈ ಭಾಗದ ಸುತ್ತಮುತ್ತಲಿನ ಗ್ರಾಮದ ಜನರಿಗೆ ಆಧ್ಯಾತ್ಮದ ಶಕ್ತಿ ಕೇಂದ್ರ. ಪ್ರತಿದಿನ ವಿದ್ಯಾರ್ಥಿಗಳು ಕೆಲಕಾಲ ಜ್ಞಾನ ಮಾಡುವ ಮೂಲಕ ಆತ್ಮಸ್ಥೈರ್ಯದ ಜೊತೆ ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ. ವಿದ್ಯಾರ್ಥಿಗಳು ಉನ್ನತ ಕನಸು ಹೊಂದುವ ಜೊತೆಗೆ ಕನಸಿನ ಶ್ರಮದ ಅಭ್ಯಾಸ ನಡೆಸಬೇಕು. ಈ ಭಾಗದ ಗ್ರಾಮೀಣ ಪ್ರದೇಶದ ಮಕ್ಕಳು ಸಂಸ್ಥೆಯಲ್ಲಿ ಕಲೆತು ಉತ್ತಮ ಶಿಕ್ಷಣ ಪಡೆದು ಪ್ರತಿಭಾವಂತರಾಗಬೇಕು. ಬರೀ ಅಂಕ ಆಧಾರಿತ ಶಿಕ್ಷಣಕ್ಕಿಂತ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕೃತಿ ಹಾಗೂ ಸಂಸ್ಕಾರ ನೀಡುವ ಶಿಕ್ಷಣ ಸಂಸ್ಥೆಯ ಮುಖ್ಯಧ್ಯೇಯವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.ತಿಂಥಣಿಯ ವೀರಗೋಟದ ಶ್ರೀ ಅಡವಿಲಿಂಗ ಮಹಾರಾಜರು, ತಳೆವಾಡದ ಶ್ರೀ ಅಭಿನವ ಸಿದ್ದರತ್ನ ಮದಗೊಂಡೇಶ್ವರ ಮಹಾರಾಜರು ಮಾತನಾಡಿ, ಜಾತ್ರೆಗಳಿಗೆ ಯಾವುದೇ ಜಾತಿ ಧರ್ಮದ ಲೇಪವಿರುವುದಿಲ್ಲ. ಎಲ್ಲಾ ಧರ್ಮೀಯರು ಜಾತ್ರೆಯಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ. ಸಂಸ್ಥೆಯ ಅಧ್ಯಕ್ಷರು ಈ ಭಾಗದಲ್ಲಿ ಹಲವಾರು ಸಂಸ್ಥೆಗಳನ್ನು ಹುಟ್ಟು ಹಾಕಿ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿರುವುದು ಒಳ್ಳೆ ಕಾರ್ಯ. ವಿದ್ಯಾರ್ಥಿಗಳಿಗೆ ಆಧ್ಯಾತ್ಮದ ಕುರಿತು ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಶ್ರೀ ವೆಂಕಟೇಶ್ವರ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ಎಲ್.ಆರ್.ಅಂಗಡಿ ವಹಿಸಿದ್ದರು. ಪ್ರಸ್ತಾವಿಕವಾಗಿ ನಿವೃತ್ತ ಪ್ರಾಧ್ಯಾಪಕ ಎಸ್.ಎನ್.ಬಸವರಡ್ಡಿ ಮಾತನಾಡಿ, ಸಂಸ್ಥೆ ಗ್ರಾಮೀಣ ಭಾಗದಲ್ಲಿ ಇದ್ದರು ಆಧ್ಯಾತ್ಮದ ಜೊತೆ ಒಳ್ಳೆಯ ಶಿಕ್ಷಣವನ್ನು ನೀಡುತ್ತಿದೆ. ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ. ಈ ಭಾಗದ ತಿರುಮಲ ಎಂದೆ ಪ್ರಸಿದ್ಧಿ ಹೊಂದಿರುವ ಶ್ರೀ ವೆಂಕಟೇಶ್ವರ ದೇವಸ್ಥಾನ ಹಾಗೂ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಶುಭವಾಗಲಿ ಎಂದು ಹಾರೈಸಿದರು.ಸಂಸ್ಥೆಯಲ್ಲಿ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಗೌರವಿಸಿದರು. ಈ ವೇಳೆ ಮುಖಂಡರಾದ ಸುರೇಶ ಪ್ಯಾಟಿ, ಶಶಿಧರ ಕುಮಟಗಿ, ಶಿಕ್ಷಕರಾದ ಪಿ.ಕೆ.ನಾಯಕ, ಎಂ.ಜಿ.ಸಜ್ಜನ, ಎನ್.ಎಲ್.ಅಂಗಡಿ, ಆರ್.ಯು.ಜಾಧವ, ಎಂ.ಎಸ್.ಕೋಳಿ ಸೇರಿದಂತೆ ದೇವೂರ ಹಾಗೂ ಮಣ್ಣೂರ ಗ್ರಾಮದ ಪ್ರಮುಖರು, ಗ್ರಾಪಂ ಸದಸ್ಯರು, ದೇವಸ್ಥಾನದ ಸೇವಾ ಸಮಿತಿ, ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಎಸ್.ಎಸ್.ತಳವಾರ ನಿರೂಪಿಸಿ, ವಂದಿಸಿದರು.