ಮೈಸೂರು ವಿವಿ ವಿದ್ಯಾರ್ಥಿನಿಲಯದಲ್ಲಿ ಅಂಬೇಡ್ಕರ್ ಜಯಂತಿ

| Published : Apr 15 2024, 01:20 AM IST

ಮೈಸೂರು ವಿವಿ ವಿದ್ಯಾರ್ಥಿನಿಲಯದಲ್ಲಿ ಅಂಬೇಡ್ಕರ್ ಜಯಂತಿ
Share this Article
  • FB
  • TW
  • Linkdin
  • Email

ಸಾರಾಂಶ

ಅಂಬೇಡ್ಕರ್ ಅವರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬಿದವರು. ಅವರು ಕೊಟ್ಟ ಸಂವಿಧಾನಬದ್ಧ ಸೌಲಭ್ಯಗಳು ಅಸಂಖ್ಯಾತ ಜನರ ಬಾಳನ್ನು ಬೆಳಗಿವೆ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಸರಸ್ವತಿಪುರಂ 9ನೇ ಮುಖ್ಯ ರಸ್ತೆಯಲ್ಲಿರುವ ಮೈಸೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿನಿಲಯ 2ರಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 133ನೇ ಜಯಂತಿಯನ್ನು ಭಾನುವಾರ ಆಚರಿಸಲಾಯಿತು.

ಈ ವೇಳೆ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಯುವರಾಜ ಕಾಲೇಜು ಕನ್ನಡ ಪ್ರಾಧ್ಯಾಪಕ ಹಾಗೂ ನಿಲಯಪಾಲಕ ಪ್ರೊ.ಸಿ.ಡಿ. ಪರಶುರಾಮ ಮಾತನಾಡಿ, ವಿಶ್ವದ ಶ್ರೇಷ್ಠ ಜ್ಞಾನಿ, ಮಹಾನ್ ಮಾನವತಾವಾದಿ ಡಾ. ಅಂಬೇಡ್ಕರ್ ಅವರು ಕತ್ತಲಲ್ಲಿ ಕರಗಿ ಹೋಗುತ್ತಿದ್ದ ಬಹುಸಂಖ್ಯಾತ ಶೋಷಿತ ಸಮುದಾಯಗಳ ಬದುಕಿಗೆ ಮಹಾ ಬೆಳಕು ನೀಡಿದವರು ಎಂದರು.

ಅಂಬೇಡ್ಕರ್ ಅವರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬಿದವರು. ಅವರು ಕೊಟ್ಟ ಸಂವಿಧಾನಬದ್ಧ ಸೌಲಭ್ಯಗಳು ಅಸಂಖ್ಯಾತ ಜನರ ಬಾಳನ್ನು ಬೆಳಗಿವೆ ಎಂದು ಅವರು ಹೇಳಿದರು.

ಇಂದಿನ ವಿದ್ಯಾರ್ಥಿ ಯುವಜನತೆ ಅಂಬೇಡ್ಕರ್ ಅವರ ಶ್ರಮ, ಸಾಧನೆ, ವಿಚಾರಧಾರೆಗಳನ್ನು ಅರ್ಥ ಮಾಡಿಕೊಂಡು, ಆ ಹಾದಿಯಲ್ಲಿ ಮುನ್ನಡೆಯಬೇಕು. ಹಾಗೆಯೇ ಸಮಾಜದಲ್ಲಿರುವ ನೊಂದವರು ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದವರು ಸಮಾಜದ ಮುಖ್ಯವಾಹಿನಿಗೆ ಬರಲು ಆಸರೆಯಾಗಬೇಕು. ಆ ಮೂಲಕ ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.

ವಿದ್ಯಾರ್ಥಿ ಮುಖಂಡರಾದ ಮಹಾದೇವಪ್ರಸಾದ್, ಪ್ರಜ್ವಲ್, ಮೋಹನ್, ಚಿಕ್ಕಣ್ಣ, ಲೋಕೇಶ್, ರಿತ್ವಿಕ್ ರಾಜ್, ಕಿರಣ್ ಪ್ರಸಾದ್, ನೌಕರರಾದ ಮಹದೇವಸ್ವಾಮಿ, ಸಾವಿತ್ರಮ್ಮ, ದೀಪಾ, ಪ್ರಸಾದ್, ರಮೇಶ್ ಮೊದಲಾದವರು ಇದ್ದರು.