ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪರಮರತ್ನ ಸಂಗೀತ ಸಂಸ್ಥೆ ವತಿಯಿಂದ ಫೆ.21, 22 ರಂದು ಎರಡು ದಿನ ಚಿತ್ರದುರ್ಗದ ವಾಲ್ಮೀಕಿ ಭವನದಲ್ಲಿ ಸರಿಗಮ ಸಂಗೀತ ನೃತ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸತ್ಯನಾರಾಯಣರೆಡ್ಡಿ ತಿಳಿಸಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಾನಯೋಗಿ ಪಂಡಿತ ಪಂಚಾಕ್ಷರ ಗವಾಯಿಗಳವರ ಜಯಂತ್ಯುತ್ಸವದ ಅಂಗವಾಗಿ ಗಾನಯೋಗಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಕೃಪಾಶೀರ್ವಾದದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಚಿತ್ರದುರ್ಗದ ಕಲಾಸಕ್ತರಿಗೆ ಇದು ಅಪರೂಪದ ಕಾರ್ಯಕ್ರಮವಾಗಿದೆ. ಕಳೆದ ವರ್ಷ ಸಮಿತಿಯಿಂದ ನಾಟಕೋತ್ಸವ ಆಯೋಜಿಸಲಾಗಿತ್ತು ಎಂದರು.

ಫೆ.21ರಂದು ಸಂಜೆ 5ಕ್ಕೆ ಉದ್ಘಾಟನಾ ಸಮಾರಂಭ ನೆರವೇರಲಿದ್ದು ಶಿರಹಟ್ಟಿ ಬಾಳೇಹೊಸೂರು ಸಂಸ್ಥಾನ ಮಠದ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಗೋವಿಂದ ಎಂ.ಕಾರಜೋಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ನಗರಸಭಾ ಸದಸ್ಯ ಕೆ.ಟಿ.ಸುರೇಶ್ ಭಾಗವಹಿಸುವರು. ಉದ್ಯಮಿ ಸೈಟ್ ಬಾಬಣ್ಣ, ಚನ್ನಕೇಶವ ಜ್ಯುವಲರ್ಸ್ ಮಾಲೀಕ ಸಿ.ಮಂಜುನಾಥ್, ಜ್ಞಾನ ಜ್ಯೋತಿ ವಿದ್ಯಾಮಂದಿರ ಅಧ್ಯಕ್ಷ ಜಿ.ಟಿ.ಕಿರಣ್ ಕುಮಾರ್ ಗೌರವ ಉಪಸ್ಥಿತಿ ವಹಿಸುವರು. ಹೂವಿನಹಡಗಲಿಯ ನಿವೃತ್ತ ಪ್ರಾಂಶುಪಾಲ ಟಿ.ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸುವರು. ಅಂಜನಾ ನೃತ್ಯ ಕಲಾ ಕೇಂದ್ರದ ಡಾ.ನಂದಿನಿ ಶ್ರೀ ಶಿವಪ್ರಕಾಶ್, ಲಾಸಿಕಾ ಫೌಂಡೇಶನ್ ಶ್ವೇತಾ ಮಂಜುನಾಥ್, ನಾಟ್ಯ ರಂಜಿನಿ ನೃತ್ಯ ಕಲಾ ಕೇಂದ್ರದ ಜಿ.ಕಿರಣ್ ಅವರಿಗೆ ಗೌರವ ಸನ್ಮಾನ ಮಾಡಲಾಗುವುದು. ಧಾರವಾಡದ ಲೇಖಕ ಡಾ.ಎ.ಎಲ್.ದೇಸಾಯಿ ಅವರ ಶ್ರೀ ಗುರು ವಚನಪ್ರಭ-ವಚನ ವಿಶ್ಲೇಷಣೆ ಸಂಪುಟ-1 ಹಾಗೂ ಗೋಕರ್ಣದ ಡಾ.ಹರೀಶ್ ಹೆಗಡೆ ಸಂಪಾದನೆಯ ಗಾನಸುಧಾ-ಭಾಗ-1, 2 ಪುಸ್ತಕ ಬಿಡುಗಡೆ ಮಾಡುವರು. ಧಾರವಾಡದ ವಿದೂಷಿ ವಿಜೇತಾ ವೆರ್ಣೇಕರ್ ಮತ್ತು ತಂಡದವರಿಂದ ಕಥಕ್ ನೃತ್ಯ ವೈಭವ ನಡೆಯಲಿದೆ ಎಂದರು.

ಫೆ.22ರಂದು ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಟಿ.ರಘುಮೂರ್ತಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಕನ್ನಡ ಮತ್ತು ಸಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ಚಲವಾದಿ, ಹೊಸಪೇಟೆ ಉಪ ನೊಂದಣಾಧಿಕಾರಿ ಡಿ.ಜಿ.ಪ್ರೇಮಾನಂದ ಭಾಗವಹಿಸುವರು.


ಹಿರಿಯ ಸಂಗೀತ ಕಲಾವಿದರಾದ ತೋಟಪ್ಪ ಉತ್ತಂಗಿ, ಗಿರಿಜಾ ಹಿರೇಮಠ, ಮೀನಾಕ್ಷಿ ಭಟ್, ಶಾರದಾ ಬ್ರಾಸ್ ಬ್ಯಾಂಡ್‍ನ ಎಸ್.ವಿ.ಗುರುಮೂರ್ತಿ ಅವರಿಗೆ ಗೌರವ ಸನ್ಮಾನ ಮಾಡುವರು. ವಿದೂಷಿ ಸಂಗೀತಾ ಕಟ್ಟಿ ಅವರಿಗೆ ಪರಮರತ್ನ ಸಂಗೀತ ಪುರಸ್ಕಾರ ನೀಡಿ ಗೌರವಿಸಲಾಗುವುದು. ನಂತರ ವಿದೂಷಿ ಸಂಗೀತಾ ಕಟ್ಟಿ ಅವರಿಗೆ ವಿಶೇಷ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ಸತ್ಯನಾರಾಯಣರೆಡ್ಡಿ ತಿಳಿಸಿದರು.

ಸರಿಗಮ ಸಂಗೀತ ಪಾಠ ಶಾಲೆಯ ಡಾ.ಭವ್ಯರಾಣಿ, ಸುಜೀತ ಕುಲಕರ್ಣಿ ಇದ್ದರು.