ಶಿರಾದಲ್ಲಿ ಸರ್ವಂ ರಾಮಮಯಂ

| Published : Jan 23 2024, 01:46 AM IST

ಸಾರಾಂಶ

ಶಿರಾದಲ್ಲಿ ರಾಮನಾಮ ಸ್ಮರಣೆ

ಕನ್ನಡಪ್ರಭ ವಾರ್ತೆ ಶಿರಾ

ಶಿರಾದಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆ ಪ್ರಯುಕ್ತ ನಗರ ಸೇರಿದಂತೆ ತಾಲೂಕಿನಾದ್ಯಂತ ಎಲ್ಲಾ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ಹೋಮ, ಹವನ, ಅನ್ನಸಂತರ್ಪಣೆ, ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆಡೆದು ಇಡೀ ಶಿರಾ ತಾಲೂಕು ಸರ್ವಂ ರಾಮಮಯಂ ಎಂಬಂತಾಗಿತ್ತು.

ನಗರದ ಜ್ಯೋತಿನಗರ ಬಡಾವಣೆಯಲ್ಲಿರುವ ಪಂಚಮುಖಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ತಾರಕ ಹೋಮ ಏರ್ಪಡಿಸಲಾಗಿತ್ತು. ಬೆಳಿಗ್ಗೆಯಿಂದಲೇ ಶ್ರೀ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ಹೋಮ ಹವನ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು ಹಾಗೂ ರತ್ನಸಂದ್ರ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ ನಡೆಯಿತು. ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಅರ್ಚಕರಾದ ಟಿ.ಡಿ.ಪುರುಷೋತ್ತಮ್ ವಿಶೇಷ ಪೂಜೆ ನೆರವೇರಿಸಿದರು.

ಶಿರಾ ನಗರದ ಶ್ರೀ ಗವಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳೆಗ್ಗೆಯಿಂದಲೇ ಹೋಮ ಹವನ ಏರ್ಪಡಿಸಲಾಗಿತ್ತು. ಹಾಗೂ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು. ಸಾಕ್ಷಿ ಆಂಜನೇಯ ಸ್ವಾಮಿ ದೇವಸ್ಥಾನ, ಬನ್ನಿ ನಗರದ ಅಭಯ ಆಂಜನೇಯ ಸ್ವಾಮಿ ದೇವಸ್ಥಾನ, ಬಯಲು ಆಂಜನೇಯ ಸ್ವಾಮಿ ದೇವಸ್ಥಾನ, ಶ್ರೀ ದುರ್ಗಮ್ಮ ದೇವಸ್ಥಾನ, ಬೆಸ್ಕಾಂ ಆವರಣದಲ್ಲಿರುವ ಶ್ರೀ ರಾಮ ದೇವಸ್ಥಾನ, ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನ, ಶ್ರೀ ವಿದ್ಯಾಗಣಪತಿ ದೇವಸ್ಥಾನ, ಶ್ರೀ ಪಾಂಡುರಂಗಸ್ವಾಮಿ ದೇವಸ್ಥಾನ, ಶ್ರೀ ಬಾಲಾಜಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ವಿಜೃಂಭಣೆಯಿಂದ ನಡೆದವು.

ಅನ್ನದಾಸೋಹ: ಶಿರಾ ನಗರದ ಆರ್‌.ಟಿ.ರಸ್ತೆಯಲ್ಲಿ ಶ್ರೀ ಸಿದ್ದಿವಿನಾಯಕ ಭಕ್ತ ಮಂಡಳಿ, ಓಂ ಗೆಳೆಯರ ಬಳಗದ ವತಿಯಿಂದ ಆಯೋಧ್ಯ ಶ್ರೀ ರಾಮ ಮಂದಿರ ಉದ್ಘಾಟನೆ ಹಾಗೂ ಶ್ರೀ ಬಾಲರಾಮನಮೂರ್ತಿ ಪ್ರಾಣಪ್ರತಿಷ್ಠಾನದ ಪ್ರಯುಕ್ತ ನಮ್ಮೂರ ಹಬ್ಬ ಆಚರಿಸಿ ಶ್ರೀ ರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ. ಅನ್ನದಾಸೋಹ ಏರ್ಪಡಿಸಲಾಗಿತ್ತು. ನೂರಾರು ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಹಾಗೂ ಶಿರಾ ತಾಲೂಕು ಕಳ್ಳಂಬೆಳ್ಳ ಹೋಬಳಿಯ ಚಿಕ್ಕದಾಸರಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.