ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ತಾಲೂಕಿನ ಸಾಸಲು ಗ್ರಾಮದಲ್ಲಿ ಕಳೆದ ಎರಡು ದಶಕಗಳಿಂದ ಸ್ಥಗಿತಗೊಂಡಿದ್ದ ಶ್ರೀ ಬನಶಂಕರಿ ಅಮ್ಮನವರು ಹಾಗೂ ಶ್ರೀ ಮರುಳಸಿದ್ದೇಶ್ವರ ಸ್ವಾಮಿಯವರ ಭವ್ಯ ಜಂಟಿ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. 27 ರಿಂದ ಜುಲೈ 2 ರವರೆಗೆ ಈ ಸೀಮೆಯಹಬ್ಬ ಅತ್ಯಂತ ವೈಭವದಿಂದ ಜರುಗಲಿದೆ ಎಂದು ದೇವಸ್ಥಾನ ಮಂಡಳಿ ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.

ವಿವಿಧ ಕಾರಣಗಳಿಂದಾಗಿ ಕಳೆದ 20 ವರ್ಷಗಳಿಂದ ನಿಂತುಹೋಗಿದ್ದ ಈ ಧಾರ್ಮಿಕ ಆಚರಣೆಯನ್ನು ಪುನರಾರಂಭಿಸಲು ಸೀಮೆಯ ಭಕ್ತರು ಹಾಗೂ ದೇವಾಂಗ ಮಂಡಳಿಯವರು ಒಮ್ಮತದ ತೀರ್ಮಾನ ಕೈಗೊಂಡಿದ್ದು, ಗ್ರಾಮದಲ್ಲಿ ಈಗಿನಿಂದಲೇ ಹಬ್ಬದ ವಾತಾವರಣ ಮನೆಮಾಡಿದೆ.

27 (ಶನಿವಾರ): ಶ್ರೀ ಆಂಜನೇಯ ಸ್ವಾಮಿಯವರಿಗೆ ಭಕ್ತಿಭಾವದ "ಬಿಲ್ಲುಗೂಡು ನೂರೊಂದೆಡೆ ಸೇವೆ " ನೆರವೇರಿಸುವ ಮೂಲಕ ಧಾರ್ಮಿಕ ಉತ್ಸವಕ್ಕೆ ಅಧಿಕೃತ ಚಾಲನೆ ಸಿಗಲಿದೆ. 28 (ಭಾನುವಾರ) ರಾತ್ರಿ 8:30ಕ್ಕೆ ಸಾಂಪ್ರದಾಯಿಕ ಧ್ವಜಾರೋಹಣ ನೆರವೇರಲಿದ್ದು, ರಾತ್ರಿ 9:30ಕ್ಕೆ ಭಕ್ತರು ದಶಕಗಳಿಂದ ಕಾಯುತ್ತಿದ್ದ ಶ್ರೀದೇವಿ ಅಮ್ಮನವರು ಹಾಗೂ ಶ್ರೀ ಸ್ವಾಮಿಯವರ ಭವ್ಯ ಪ್ರಥಮೋತ್ಸವ ಸಡಗರದಿಂದ ಜರುಗಲಿದೆ. 29 (ಸೋಮವಾರ): ರಾತ್ರಿ ಶ್ರೀದೇವಿ ಅಮ್ಮನವರಿಗೆ ನಯನಮನೋಹರ ಅಶ್ವವಾಹನೋತ್ಸವ ಹಾಗೂ ಶ್ರೀ ಮರುಳಸಿದ್ದೇಶ್ವರ ಸ್ವಾಮಿಯವರಿಗೆ ವೃಷಭ ವಾಹನೋತ್ಸವ ನಡೆಯಲಿದೆ. 30 (ಮಂಗಳವಾರ): ದೇವತೆಗಳಿಗೆ ಗಂಗಾಸ್ನಾನ ಮತ್ತು ಮುಡಿಯು ಸೇವೆ ನಡೆಯಲಿದೆ. ಮಧ್ಯಾಹ್ನ 1:30ಕ್ಕೆ ಅಗ್ನಿಕುಂಡೋತ್ಸವ ಜರುಗಲಿದೆ. ಅಂದು ರಾತ್ರಿ 10:30ಕ್ಕೆ ಚಿಕ್ಕನಾಯಕನಹಳ್ಳಿ ಹಾಗೂ ಹಿಂಡಿಸ್ಕೆರೆ ದೇವಾಂಗ ಮಂಡಳಿಯವರಿಂದ ವೀರಗಾರಿಕೆ ಸೇವೆ ಸಮರ್ಪಣೆಯಾಗಲಿದ್ದು, ರಾತ್ರಿ 11:30ಕ್ಕೆ ಚಿಕ್ಕ ರಥೋತ್ಸವ ಜರುಗಲಿದೆ.ಜುಲೈ 1 (ಬುಧವಾರ): ಮಧ್ಯರಾತ್ರಿ 2:30ಕ್ಕೆ ಚಿಕ್ಕನಾಯಕನಹಳ್ಳಿ ಮಂಡಳಿಯಿಂದ ಬಲಿಶಾಂತಿ ಸೇವೆ, ಮುಂಜಾನೆ 4:30ಕ್ಕೆ ಹಿಂಡಿಸ್ಕೆರೆ ಮಂಡಳಿಯಿಂದ ಗಂಡುಕತ್ತರಿ ಸೇವೆ ಹಾಗೂ ಮುಂಜಾನೆ 5:30ಕ್ಕೆ ಚಿಕ್ಕನಾಯಕನಹಳ್ಳಿ ದೇವಾಂಗ ಮಂಡಳಿಯವರಿಂದ ಶಸ್ತ್ರಮಂಗಲಾರತಿ ಸೇವೆ ನೆರವೇರಲಿದೆ. ಅಂದು ದಿನವಿಡೀ ಉಭಯ ಮಂಡಳಿಗಳಿಂದ ಭವ್ಯ ವೀರಗಾರಿಕೆ ಸೇವೆ ಮುಂದುವರಿಯಲಿದೆ. ಜುಲೈ 2 (ಗುರುವಾರ): ದೇವ ದೇವತೆಯರಿಗೆ ಮಹಾರಥೋತ್ಸವ ಹಾಗೂ ಉಯ್ಯಾಲೆ ಉತ್ಸವ ನಡೆಯಲಿದ್ದು, ಇದರೊಂದಿಗೆ 20 ವರ್ಷಗಳ ನಂತರದ ಈ ಐತಿಹಾಸಿಕ ಮಹೋತ್ಸವವು ಸಂಪನ್ನಗೊಳ್ಳಲಿದೆ.