ಸಾರಾಂಶ
ಸುಮಾರು 500ಕ್ಕೂ ಅಧಿಕ ಸಂಖೆಯಲ್ಲಿದ್ದ ಸಾರ್ವಜನಿಕರು ಟೋಲ್ ಪ್ಲಾಜಾಕ್ಕೆ ತೆರಳಿ ಮುತ್ತಿಗೆ ಹಾಕಿ ಟೋಲ್ ಕಂಪನಿಯ ವಿರುದ್ದ ಘೋಷಣೆಗಳನ್ನು ಕೂಗಿದರು. ಅಲ್ಲದೇ ಟೋಲ್ ರಸ್ತೆಗೆಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಕುಂದಾಪುರ
ಕಳೆದ ಹಲವು ದಿನಗಳಿಂದ ಕೋಟ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಉಚಿತವಿರುವ ಸ್ಥಳೀಯ ವಾಹನಗಳಿಗೆ ಫಾಸ್ಟ್ಯಾಗ್ನಲ್ಲಿ ಸಾಸ್ತಾನದಲ್ಲಿ ಟೋಲ್ ಶುಲ್ಕ ಕಡಿತ ಆಗುತ್ತಿರುವ ಕುರಿತು ಸ್ಥಳೀಯರು ದಿಢೀರ್ ಆಗಿ ಟೋಲ್ ಪ್ಲಾಜಾಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಸಾಸ್ತಾನ ಗುಂಡ್ಮಿಯ ಟೋಲ್ ಪ್ಲಾಜಾದಲ್ಲಿ ಸ್ಥಳೀಯರಿಗೆ ಹಲವಾರು ವರ್ಷಗಳಿಂದ ಶುಲ್ಕ ವಿನಾಯತಿ ಇದೆ. ನವಯುಗ ಕಂಪನಿ ಟೋಲ್ ಪ್ಲಾಜಾವನ್ನು ಹೊಸ ಕಂಪನಿಗೆ ಮಾರಾಟ ಮಾಡಿದ್ದು, ಸ್ಥಳೀಯ ವಾಹನಗಳ ಫಾಸ್ಟ್ಯಾಗ್ ಮೂಲಕ ಅನಧಿಕೃತವಾಗಿ ಶುಲ್ಕವನ್ನು ಪಡೆಯುತ್ತಿರುವುದರ ಕುರಿತು ಸ್ಥಳೀಯ ವಾಹನ ಚಾಲಕರು ಮತ್ತು ಮಾಲಕರು ಶನಿವಾರ ಶಿವಕೃಪಾ ಸಭಾಂಗಣದಲ್ಲಿ ಸಭೆ ಸೇರಿ ಟೋಲ್ ಕಂಪನಿಯ ವರ್ತನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಸುಮಾರು 500ಕ್ಕೂ ಅಧಿಕ ಸಂಖೆಯಲ್ಲಿದ್ದ ಸಾರ್ವಜನಿಕರು ಟೋಲ್ ಪ್ಲಾಜಾಕ್ಕೆ ತೆರಳಿ ಮುತ್ತಿಗೆ ಹಾಕಿ ಟೋಲ್ ಕಂಪನಿಯ ವಿರುದ್ದ ಘೋಷಣೆಗಳನ್ನು ಕೂಗಿದರು. ಅಲ್ಲದೇ ಟೋಲ್ ರಸ್ತೆಗೆಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಬ್ರಹ್ಮಾವರ ಪೊಲೀಸ್ ಇನ್ಸ್ಪೆಕ್ಟರ್ ದಿವಾಕರ್ ಮತ್ತು ಕೋಟ ಪಿಎಸ್ಐ ತೇಜಸ್ವಿ ಟಿ., ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಟೋಲ್ ಅಧಿಕಾರಿಗಳು ಸ್ಥಳೀಯರೊಂದಿಗೆ ಉಡಾಫೆ ಪ್ರದರ್ಶಿಸುತ್ತಿದ್ದು, ಈ ಹಿಂದೆ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ನೀಡಿದ ಶುಲ್ಕ ವಿನಾಯಿತಿ ಆದೇಶವನ್ನು ಉಲ್ಲಂಘಿಸಿ ಮತ್ತೆ ಟೋಲ್ ಪಡೆಯುವುದು ನಿಲ್ಲಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್, ತನಗೆ ಒಂದು ದಿನದ ಅವಧಿಯನ್ನು ನೀಡಿ ಸೋಮವಾರ ಸಂಜೆಯ ಒಳಗೆ ಟೋಲ್ ಅಧಿಕಾರಿಗಳು ಮತ್ತು ಹೋರಾಟ ಸಮಿತಿಯವರ ಸಭೆಯನ್ನು ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳವುದಾಗಿ ಮನವಿ ಮಾಡಿದರು. ಮನವಿಗೆ ಒಪ್ಪಿದ ಹೋರಾಟ ಸಮಿತಿಯ ಸದಸ್ಯರು ಸೋಮವಾರ ಸಂಜೆಯ ವರೆಗೆ ಕಾಯುವುದಾಗಿ ಹೇಳಿದ್ದು, ಅಲ್ಲಿಯ ತನಕ ಸ್ಥಳೀಯರಿಗೆ ಯಾವುದೇ ರೀತಿಯಲ್ಲಿ ಶುಲ್ಕ ಕಡಿತಗೊಳಿಸಬಾರದು ಎಂದು ಎಚ್ಚರಿಕೆ ನೀಡಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟರು.* ಮನೆಯಲ್ಲೇ ವಾಹನವಿದ್ದರೂ ಹಣ ಕಡಿತ:ಟೋಲ್ನ ಎರಡೂ ಕಡೆಗಳ ಮೊದಲ ಲೇನ್ ಸ್ಥಳೀಯರಿಗಾಗಿ ಮೀಸಲಾಗಿದ್ದು, ಸ್ಥಳೀಯರು ಪ್ರವೇಶಿಸುವಾಗ ಆಧಾರ್ ಕಾರ್ಡ್ ಅಥವಾ ವಾಹನದ ದಾಖಲೆಗಳನ್ನು ತೋರಿಸಿದರೆ ಶುಲ್ಕ ಕಡಿತಗೊಳಿಸದೆ ಮುಂದೆ ಸಾಗಲು ಬಿಡಲಾಗುತ್ತಿತ್ತು. ಆದರೆ ಇದೀಗ ಎರಡೂ ಲೇನ್ಗಳಲ್ಲಿ ದಾಖಲೆಗಳನ್ನು ತೋರಿಸಿದಾಗ ಸ್ಕ್ರೀನ್ನಲ್ಲಿ 0 ಮೊತ್ತ ತೋರಿಸಲಾಗುತ್ತಿದೆ ಆದರೆ ಮನೆ ತಲುಪಿದ ಒಂದೆರಡು ಗಂಟೆಗಳ ಬಳಿಕ ಅಥವಾ 24 ಗಂಟೆಯ ನಂತರ 60, 120 ರು. ಕಡಿತಗೊಂಡ ಸಂದೇಶ ಬರುತ್ತಿರುವ ಬಗ್ಗೆ, ಕೆಲವರು ತಮ್ಮ ವಾಹನ ಟೋಲ್ನ ಕಡೆ ಹೋಗದೆ ಮನೆಯಲ್ಲೇ ನಿಂತಿದ್ದರೂ ಹಣ ಕಡಿತವಾಗಿದೆ ಎಂದು ಸಭೆಯಲ್ಲಿ ದೂರಿದರು.* ಟೋಲ್ನಲ್ಲೇ ವಾಹನವಿಟ್ಟು ಪ್ರತಿಭಟಿಸಿದ ಚಾಲಕಸಾಸ್ತಾನ ಕಡೆಯಿಂದ ಕೋಟ ಕಡೆಗೆ ಸಾಗುತ್ತಿದ್ದ ನಾಗರಾಜ ಪುತ್ರನ್ ಎಂಬವರಿಗೆ ವಿನಾಯಿತಿ ಇದ್ದರೂ ಶುಲ್ಕ ಕಡಿತಗೊಳಿಸಿದ್ದಕ್ಕೆ ಸುಮಾರು ಎರಡು ಗಂಟೆ ಕಾಲ ತನ್ನ ವಾಹವನ್ನು ಟೋಲ್ನಲ್ಲಿಯೇ ಅಡ್ಡವಿಟ್ಟು ಪ್ರತಿಭಟಿಸಿದರು. ಕೋಟ ಠಾಣಾಧಿಕಾರಿ ಸುಧಾಪ್ರಭು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ಕೈಬಿಡುವಂತೆ ವಿನಂತಿಸಿದರೂ ನಿಲ್ಲಿಸಲಿಲ್ಲ. ಬಳಿಕ ಹೋರಾಟ ಸಮಿತಿಯವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದ್ದು, ಸಿಐ ದಿವಾಕರ್ ಮನವಿ ಮೇರೆಗೆ ಹೋರಾಟ ಕೈಬಿಟ್ಟರು.